ಬೆಂಗಳೂರು :ಉದ್ಯಮಿಗಳಿಗೆ ಸಾಲ ಕೊಡಿಸುವುದಾಗಿ ನೂರಾರು ಕೋಟಿ ವಂಚನೆ, ಕೊಟ್ಟ ಹಣ ಕೇಳಿದ್ರೆ ಯುವತಿ ಮುಂದಿಟ್ಟು ಲೈಂಗಿಕ ದೌರ್ಜನ್ಯದ ಕೇಸ್ ; ಕೊನೆಗೂ ಸಿಐಡಿ ಬಲೆಗೆ ಬಿದ್ದ ಕುಖ್ಯಾತ ವಂಚಕ ಪೀಟರ್‌ ಕ್ಯಾಡಿ...!!

ಬೆಂಗಳೂರು :ಉದ್ಯಮಿಗಳಿಗೆ ಸಾಲ ಕೊಡಿಸುವುದಾಗಿ ನೂರಾರು ಕೋಟಿ ವಂಚನೆ, ಕೊಟ್ಟ ಹಣ ಕೇಳಿದ್ರೆ ಯುವತಿ ಮುಂದಿಟ್ಟು ಲೈಂಗಿಕ ದೌರ್ಜನ್ಯದ ಕೇಸ್ ; ಕೊನೆಗೂ ಸಿಐಡಿ ಬಲೆಗೆ ಬಿದ್ದ ಕುಖ್ಯಾತ ವಂಚಕ ಪೀಟರ್‌ ಕ್ಯಾಡಿ...!!

ಬೆಂಗಳೂರು : ಸಾಲ ಕೊಡಿಸುವ ನೆಪದಲ್ಲಿ ನೂರಾರು ಉದ್ಯಮಿಗಳಿಗೆ ಕೋಟ್ಯಂತರ ರೂಪಾಯಿ ವಂಚನೆ ಮಾಡಿದ ಆರೋಪದಲ್ಲಿ ಕುಖ್ಯಾತ ವಂಚಕ ಪೀಟರ್ ಕ್ಯಾಡಿ ಮನೆ ಮೇಲೆ ಸಿಐಡಿ ಆರ್ಥಿಕ ಅಪರಾಧ ದಳದ ಅಧಿಕಾರಿಗಳು ಇಂದು ಬೆಳ್ಳಂಬೆಳಗ್ಗೆ ದಿಢೀರ್ ದಾಳಿ ನಡೆಸಿದ್ದಾರೆ. 

ಪುಲಿಕೇಶಿನಗರದ ಕೋಲ್ಸ್ ಪಾರ್ಕ್ ಸಮೀಪದ ಪೀಟರ್ ಕ್ಯಾಡಿ ನಿವಾಸದಲ್ಲಿ ಪರಿಶೀಲನೆ ನಡೆಸಿದ ಅಧಿಕಾರಿಗಳು ಹಣಕಾಸು ವ್ಯವಹಾರಗಳಿಗೆ ಸಂಬಂಧಿಸಿದ ದಾಖಲೆಗಳು ಮತ್ತು ಡಿಜಿಟಲ್ ಸಾಕ್ಷ್ಯಗಳನ್ನು ವಶಪಡಿಸಿದ್ದಾರೆ. ಪೀಟರ್‌ ಕ್ಯಾಡಿ ಕಳೆದ 15 ವರ್ಷಗಳಲ್ಲಿ ಸುಮಾರು 500ಕ್ಕೂ ಹೆಚ್ಚು ಉದ್ಯಮಿಗಳನ್ನು ವಂಚಿಸಿರುವ ಭಾರೀ ಜಾಲದ ಕರಾಳ ಮುಖ ತನಿಖೆಯಲ್ಲಿ ಬಹಿರಂಗವಾಗಿದೆ. 

ಪೀಟರ್ ಕ್ಯಾಡಿ, ಬ್ಯಾಂಕ್ ಬಡ್ಡಿಗಿಂತ ಕಡಿಮೆ ಬಡ್ಡಿ ದರದಲ್ಲಿ ಕೋಟ್ಯಂತರ ರೂಪಾಯಿ ಸಾಲ ಕೊಡಿಸುವುದಾಗಿ ನಂಬಿಸಿ ಉದ್ಯಮಿಗಳನ್ನು ಬಲೆಗೆ ಬೀಳಿಸುತ್ತಿದ್ದ. ಆರಂಭದಲ್ಲಿ ಉದ್ಯಮಿಗಳ ಹೆಸರಿನಲ್ಲಿ ದೊಡ್ಡ ಮೊತ್ತದ ಡಿಮ್ಯಾಂಡ್ ಡ್ರಾಫ್ಟ್ ತೋರಿಸಿ ವಿಶ್ವಾಸ ಗಳಿಸುತ್ತಿದ್ದ. ಬಳಿಕ ಖಾಲಿ ಚೆಕ್‌ಗಳು ಹಾಗೂ ಆಸ್ತಿ ಪತ್ರಗಳನ್ನು ಪಡೆದು, ಪ್ರೊಸೆಸಿಂಗ್ ಫೀ ಮತ್ತು ಕಮಿಷನ್ ಹೆಸರಿನಲ್ಲಿ ಕೋಟ್ಯಂತರ ಹಣ ಸಂಗ್ರಹಿಸುತ್ತಿದ್ದ. ಆದರೆ ಸಾಲ ಮಾತ್ರ ಮಂಜೂರು ಆಗುತ್ತಿರಲಿಲ್ಲ.

ಹಣ ವಾಪಸ್ ಕೇಳಿದರೆ ಅವರ ಮೇಲೆಯೇ ಪ್ರತಿ ದೂರು ದಾಖಲಿಸುವುದು ಪೀಟರ್‌ ಕ್ಯಾಡಿ ಗ್ಯಾಂಗ್‌ನ ಪ್ರಮುಖ ತಂತ್ರವಾಗಿತ್ತು. ಖಾಲಿ ಚೆಕ್‌ಗಳನ್ನು ದುರುಪಯೋಗಪಡಿಸಿ ಸುಳ್ಳು ಚೆಕ್ ಬೌನ್ಸ್ ಪ್ರಕರಣ ದಾಖಲಿಸಿ ಸಂತ್ರಸ್ತರಿಗೆ ಕಾನೂನು ಭೀತಿಯ ಮೂಲಕ ಬೆದರಿಕೆ ಹಾಕಲಾಗುತ್ತಿತ್ತು. ಇಂತಹ 300ಕ್ಕೂ ಹೆಚ್ಚು ಸುಳ್ಳು ಪ್ರಕರಣಗಳು ಪೀಟರ್‌ ಕ್ಯಾಡಿ ವಿರುದ್ಧ ದಾಖಲಾಗಿರುವುದು ತನಿಖೆಯಿಂದ ಬೆಳಕಿಗೆ ಬಂದಿದೆ.

ಹಣ ಕಳೆದುಕೊಂಡವರು ಯಾರಾದರೂ ಪೀಟರ್‌ ಕ್ಯಾಡಿ ಕಚೇರಿಗೆ ಬಂದು ಗಲಾಟೆ ಮಾಡಿದರೆ ಇವರದ್ದೇ ಗ್ಯಾಂಗ್‌ನ ಸದಸ್ಯೆಯಾದ ಅಶ್ವಿನಿ ಎಂಬಾಕೆಯ ಮೂಲಕ ಸುಳ್ಳು ಲೈಂಗಿಕ ದೌರ್ಜನ್ಯ ದೂರು ದಾಖಲಿಸುತ್ತಿದ್ದರು. ಇಂತಹ 15ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ.

ಕಳೆದ ವರ್ಷ ಸುಬ್ಬರಾವ್ ಎಂಬವರಿಗೆ ಜಮೀನು ಮಾರಾಟ ಮಾಡಿಕೊಡುವುದಾಗಿ ನಂಬಿಸಿ ಪೀಟರ್ ಕ್ಯಾಡಿ 96 ಲಕ್ಷ ರೂ. ಕಮಿಷನ್ ಪಡೆದು ವಂಚಿಸಿದ್ದ. ಹಣ ವಾಪಸ್ ಕೇಳಿದ್ದಕ್ಕೆ ಸುಬ್ಬರಾವ್ ವಿರುದ್ಧವೇ ಚೆಕ್ ಬೌನ್ಸ್ ಪ್ರಕರಣ ದಾಖಲಿಸಿದ್ದ. ಈ ಬಗ್ಗೆ ಸುಬ್ಬರಾವ್‌ ಪುಲಿಕೇಶಿನಗರ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಇಂತಹ ಹಲವು ಪ್ರಕರಣಗಳು ಬೆಳಕಿಗೆ ಬಂದ ಹಿನ್ನೆಲೆಯಲ್ಲಿ ತನಿಖೆಯನ್ನು ಸಿಐಡಿ ಆರ್ಥಿಕ ಅಪರಾಧ ದಳಕ್ಕೆ ವರ್ಗಾಯಿಸಲಾಗಿತ್ತು.

ಪೀಟರ್ ಕ್ಯಾಡಿ ನೇತೃತ್ವದ ಈ ವಂಚನೆ ಜಾಲದಲ್ಲಿ ಅಮಿತ್ ಕ್ಯಾಡಿ, ಅಶ್ವಿನಿ, ಹರಿಮೋಹನ್ ನಾಯ್ಡು, ಅಲ್ತಾಫ್ ಮತ್ತು ಚಾರಿ ಮುರಳಿ ಶಾಮೀಲಾಗಿದ್ದಾರೆ ಎಂಬುದು ಗೊತ್ತಾಗಿದೆ. ಈ ಜಾಲದಿಂದ ವಂಚನೆಗೆ ಒಳಗಾದವರು ತಕ್ಷಣವೇ ಸಿಐಡಿ ಆರ್ಥಿಕ ಅಪರಾಧ ದಳವನ್ನು ಸಂಪರ್ಕಿಸುವಂತೆ ಪೊಲೀಸರು ಮನವಿ ಮಾಡಿದ್ದಾರೆ.

Ads on article

Advertise in articles 1

advertising articles 2

Advertise under the article