ಅಕ್ರಮ ಆಸ್ತಿ ಗಳಿಕೆ ಮತ್ತು ಭಾರೀ ಕಿಕ್ ಬ್ಯಾಕ್ ಆರೋಪ ಹಿನ್ನೆಲೆ ; ಐಪಿಎಸ್ ಅಧಿಕಾರಿ ರವಿ ಡಿ. ಚೆನ್ನಣ್ಣನವರ್ ಎತ್ತಂಗಡಿ, ಸಿಐಡಿಯಿಂದ ವಾಲ್ಮೀಕಿ ಅಭಿವೃದ್ಧಿ ನಿಗಮದ ಎಂಡಿ ಹುದ್ದೆಗೆ ವರ್ಗಾವಣೆ !(Ravi d.chennannanavar)
Thursday, January 27, 2022
ಬೆಂಗಳೂರು: ಅಕ್ರಮ ಆಸ್ತಿ ಗಳಿಕೆ, ಬಾರೀ ಕಿಕ್ ಬ್ಯಾಕ್ ಪಡೆದ ಆರೋಪ ಹಾಗೂ ವಿವಾದಗಳು ಭುಗಿಲೆದ್ದ ಬೆನ್ನಲ್ಲೇ ರಾಜ್ಯ ಸರ್ಕಾರ ಐಪಿಎಸ್ ಅಧಿಕಾರಿ ರವಿ ಡಿ.ಚನ್ನಣ್ಣನವರ್ ಅವರನ್ನು CID ಎಸ್ ಪಿ ಹುದ್ದೆಯಿಂದ ತೆರವುಗೊಳಿಸಿ ಎತ್ತಂಗಡಿ ಮಾಡಲಾಗಿದೆ. ಚನ್ನಣ್ಣವರ್
ಸೇರಿದಂತೆ ಒಟ್ಟು 9 ಐಪಿಎಸ್ ಅಧಿಕಾರಿಗಳನ್ನು ವರ್ಗಾಯಿಸಿ ಆದೇಶ ಹೊರಡಿಸಿದೆ.
ಸಿಐಡಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಚನ್ನಣ್ಣನವರ್ ಸೇರಿದಂತೆ ಕೆಲವು ಪೊಲೀಸ್ ಅಧಿಕಾರಿಗಳ ವಿರುದ್ಧ ಗ್ರಾನೈಟ್ ಉದ್ಯಮಿಯೊಬ್ಬರು ಸರ್ಕಾರದ ಚೀಫ್ ಸೆಕ್ರೆಟರಿಯವರಿಗೆ ದೂರು ನೀಡಿದ್ದರು. ಈ ದೂರಿನ ಪ್ರತಿ ಹೊರ ಬಿದ್ದ ಬೆನ್ನಲ್ಲೇ ದೊಡ್ಡ ವಿವಾದ ಸೃಷ್ಟಿಯಾದ ಬಳಿಕ ಪ್ರಕರಣದ ಬಗ್ಗೆ ಸುದ್ದಿ ಪ್ರಸಾರ ಮಾಡದಂತೆ ರವಿ ಡಿ.ಚನ್ನಣ್ಣನವರ್ ಕೋರ್ಟ್ ನಿಂದ ತಡೆಯಾಜ್ಞೆ ತಂದಿದ್ದರು.
ವರ್ಗಾವಣೆ ಆದೇಶ ನಿಜಕ್ಕೂ ರವಿ ಚನ್ನಣ್ಣನವರ್ ಗೆ ಅಚ್ಚರಿಯ ಸಂಗತಿಯಾಗಿದೆ. ಎಕ್ಸಿಕ್ಯೂಟಿವ್ ಸ್ಥಾನದಿಂದ ನಾನ್-ಎಕ್ಸಿಕ್ಯೂಟಿವ್ ಸ್ಥಾನಕ್ಕೆ ಅವರನ್ನು ಎತ್ತಂಗಡಿ ಮಾಡಿ ಸರ್ಕಾರ ಆದೇಶ ನೀಡಿದೆ. ಸಿಐಡಿಯಲ್ಲಿ ಅಧಿಕಾರಿಯಾಗಿದ್ದ ರವಿ ಚನ್ನಣ್ಣನವರ್ ಅವರನ್ನ ಸರ್ಕಾರ ನಿಗಮ ಮಂಡಳಿಗೆ ವರ್ಗಾವಣೆ ಮಾಡಿರೋದು ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.
ಚನ್ನಣ್ಣವರ್ ಮಾತ್ರವಲ್ಲದೆ ಇನ್ನೂ ಎಂಟು ಮಂದಿ ಐಪಿಎಸ್ ಅಧಿಕಾರಿಗಳನ್ನು ವರ್ಗಾಯಿಸಿ ಸರ್ಕಾರ ಆದೇಶ ಹೊರಡಿಸಿದ್ದು ಅಬ್ದುಲ್ ಅಹಾದ್ ಎಸಿಬಿ ಯಿಂದ ಕೆಎಸ್ಆರ್ಟಿಸಿ ವಿಜಿಲೆನ್ಸ್, ಟಿ. ಶ್ರೀಧರ ಕೊಪ್ಪಳ ಎಸ್.ಪಿ ಯಿಂದ ಡಿಸಿಆರ್, ದಿವ್ಯಸಾರ ಥಾಮಸ್ ಚಾಮರಾಜನಗರ ಎಸ್.ಪಿ ಯಿಂದ ಪೊಲೀಸ್ ಅಕಾಡೆಮಿಯ ಮೈಸೂರು ಡೆಪ್ಯೂಟಿ ಡೈರೆಕ್ಟರ್, ಕಿಶೋರ್ ಬಾಬು ಬೀದರ್ ಎಸ್ಪಿ, ಅರುಣಗಂಶು ಗಿರಿ ಎಸಿಬಿ ಯಿಂದ ಕೊಪ್ಪಳ ಎಸ್ಪಿಯಾಗಿ, ಎಲ್.ನಾಗೇಶ್ ಬೀದರ್ ಎಸ್.ಪಿ ಯಿಂದ ಸಿಐಡಿ ಗೆ, ಟಿ.ಪಿ ಶಿವಕುಮಾರ್ ಚಾಮರಾಜನಗರ ಎಸ್ಪಿಯಾಗಿ ನೇಮಕಗೊಂಡಿದ್ದಾರೆ