![ಮಂಗಳೂರು ದಸರಾ ದರ್ಶನ: ಕೆಎಸ್ಆರ್ ಟಿಸಿಯಿಂದ 300ರೂ.ಗೆ ಒಂದೇ ದಿನದಲ್ಲಿ 'ನವದುರ್ಗೆ'ಯರ ಸಂದರ್ಶನ ಮಂಗಳೂರು ದಸರಾ ದರ್ಶನ: ಕೆಎಸ್ಆರ್ ಟಿಸಿಯಿಂದ 300ರೂ.ಗೆ ಒಂದೇ ದಿನದಲ್ಲಿ 'ನವದುರ್ಗೆ'ಯರ ಸಂದರ್ಶನ](https://blogger.googleusercontent.com/img/b/R29vZ2xl/AVvXsEhdJzXeOCbLXT_otKjeRzi_5d8zbCdTEB-3d8IcXcQ0EGtq9dKESiVnOq6t5CqmoAsVd_XfI2IHKlP8hoFKXvFpXqfEAbhcuIycyqX18iIkC8VUdVnQYijyJ5bDMkwZMSJ8DD5h8BCIXe8/s1600/1663762215612407-0.png)
ಮಂಗಳೂರು ದಸರಾ ದರ್ಶನ: ಕೆಎಸ್ಆರ್ ಟಿಸಿಯಿಂದ 300ರೂ.ಗೆ ಒಂದೇ ದಿನದಲ್ಲಿ 'ನವದುರ್ಗೆ'ಯರ ಸಂದರ್ಶನ
Wednesday, September 21, 2022
ಮಂಗಳೂರು: ಮಂಗಳೂರು ದಸರಾವನ್ನು ಮತ್ತಷ್ಟು ಮೆರುಗುಗೊಳಿಸಲು, ಪ್ರವಾಸಿ ಆಕರ್ಷಣೆಗೆ ಕೆ.ಎಸ್.ಆರ್.ಟಿ.ಸಿ ವಿನೂತನ ಪ್ರಯೋಗವನ್ನು ಮಾಡಿದೆ. 'ಮಂಗಳೂರು ದಸರಾ ದರ್ಶನ' ಪರಿಕಲ್ಪನೆಯಡಿಲ್ಲಿ ದಿನವಿಡೀ ಕೇವಲ 300 ರೂ.ನಲ್ಲಿ ಮಂಗಳೂರಿನ ದೇವಿ ದೇವಸ್ಥಾನಗಳನ್ನು ಸಂದರ್ಶಿಸುವ ಪ್ಯಾಕೇಜ್ ಟೂರ್ ಆಯೋಜಿಸಿದೆ.
ಸೆ.26 ರಿಂದ ಅ.5ರವರೆಗೆ ಮಂಗಳೂರಿನ ಸುತ್ತ ಮುತ್ತಲಿನ ಶ್ರೀ ಮಂಗಳಾದೇವಿ, ಪೊಳಲಿ ಶ್ರೀ ರಾಜರಾಜೇಶ್ವರಿ, ಸುಂಕದಕಟ್ಟೆ ಶ್ರೀ ಅಂಬಿಕಾ ಅನ್ನಪೂರ್ಣೇಶ್ವರಿ, ಕಟೀಲು ದುರ್ಗಾಪರಮೇಶ್ವರಿ, ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ, ಸಸಿಹಿತ್ಲು ಶ್ರೀ ಭಗವತಿ, ಚಿತ್ರಾಪುರ ಶ್ರೀ ದುರ್ಗಾಪರಮೇಶ್ವರಿ, ಉರ್ವಾ ಶ್ರೀ ಮಾರಿಯಮ್ಮ ಸೇರಿದಂತೆ ಕುದ್ರೋಳಿ ಶ್ರೀ ಗೋಕರ್ಣನಾಥ ದೇವಸ್ಥಾನಕ್ಕೂ ಈ ಧಾರ್ಮಿಕ ಪ್ರವಾಸ ಪ್ಯಾಕೇಜ್ ಟೂರ್ ಅನ್ನು ಆಯೋಜಿಸಲಾಗಿದೆ. ಊಟ, ಉಪಹಾರ ಹೊರತು ಪಡಿಸಿ, ಪ್ರತಿ ಪ್ರಯಾಣಿಕರಿಗೆ ಕನಿಷ್ಠ ದರ 300 ರೂ. ನಿಗದಿಪಡಿಸಲಾಗಿದೆ. 6 ವರ್ಷಕ್ಕಿಂತ ಕೆಳಗಿನ ಮಕ್ಕಳಿಗೆ 250 ರೂ. ದರ ಇರಲಿದೆ.
ಒಂದು ದಿನದ ಪ್ರವಾಸ ಇದಾಗಿದ್ದು, ಬೆಳಗ್ಗೆ ಹೊರಟರೆ, ದೇವಸ್ಥಾನಗಳ ದರ್ಶನ ಮುಗಿಸಿ ಸಂಜೆ ವೇಳೆಗೆ ವಾಪಸ್ ಆಗಬಹುದು. ಹಸಿರು ಬಣ್ಣದ ನರ್ಮ್ ಬಸ್ನ್ನು ಇದಕ್ಕೆ ಪ್ರಾಯೋಗಿಕವಾಗಿ ಬಳಸಲಾಗುತ್ತಿದ್ದು, ಒಂದು ಬಸ್ನಲ್ಲಿ 40 ಮಂದಿಗೆ ಅವಕಾಶ ಇರಲಿದೆ. ಬೆಳಗ್ಗೆ 8 ಗಂಟೆಗೆ ಬಿಜೈ ಕೆಎಸ್ಆರ್ ಟಿಸಿ ಬಸ್ ನಿಲ್ದಾಣದಿಂದ ಹೊರಟರೆ, ರಾತ್ರಿ 8.30ಕ್ಕೆ ಬಸ್ ಮರಳಿ ನಿಲ್ದಾಣಕ್ಕೆ ಮರಳಲಿದೆ. ಚಾಲಕನಲ್ಲದೆ, ಓರ್ವ ಸಹಾಯಕನೂ ಇರಲಿದ್ದಾರೆ. ಈಗಾಗಲೇ ಆನ್ಲೈನ್ ಮೂಲಕ ಟಿಕೆಟ್ ಬುಕ್ಕಿಂಗ್ ಆರಂಭಿಸಲಾಗಿದೆ. ಅಲ್ಲದೆ ಬಸ್ ಹೊರಡುವ ಮುನ್ನ ಸ್ಥಳದಲ್ಲೇ ಟಿಕೆಟ್ ಕೂಡ ನೀಡಲಾಗುತ್ತದೆ.