![ಮಂಗಳೂರು: ಅಕ್ರಮ ಮರಳುಗಾರಿಕೆ ಅಡ್ಡೆಗೆ ಲೋಕಾಯುಕ್ತ ಪೊಲೀಸರ ದಾಳಿ;40 ಲಕ್ಷ ಮೊತ್ತದ ಸೊತ್ತು ವಶಕ್ಕೆ ಮಂಗಳೂರು: ಅಕ್ರಮ ಮರಳುಗಾರಿಕೆ ಅಡ್ಡೆಗೆ ಲೋಕಾಯುಕ್ತ ಪೊಲೀಸರ ದಾಳಿ;40 ಲಕ್ಷ ಮೊತ್ತದ ಸೊತ್ತು ವಶಕ್ಕೆ](https://blogger.googleusercontent.com/img/b/R29vZ2xl/AVvXsEhw6Sab83jEWd8FXj7ff4ds_ZiSm9tBzeb-GJAuWg1tXQZ-atKI6BFpEZooz68NxScCWO2r-AEHWF6FtU_TJrCA_j9T-egdH3Lnv-zizRbdrvfR3oblIwzO-1GBtRUgZX-xyzzOfuC8-G8/s1600/1670642302241549-0.png)
ಮಂಗಳೂರು: ಅಕ್ರಮ ಮರಳುಗಾರಿಕೆ ಅಡ್ಡೆಗೆ ಲೋಕಾಯುಕ್ತ ಪೊಲೀಸರ ದಾಳಿ;40 ಲಕ್ಷ ಮೊತ್ತದ ಸೊತ್ತು ವಶಕ್ಕೆ
Friday, December 9, 2022
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ವಿವಿಧೆಡೆಗಳಲ್ಲಿ ನಡೆಯುತ್ತಿದ್ದ ಅಕ್ರಮ ಮರಳುಗಾರಿಕೆ ಧಂದೆ ನಡೆಯುತ್ತಿದ್ದ ಅಡ್ಡೆಗಳಿಗೆ ಮಂಗಳೂರು ಲೋಕಾಯುಕ್ತ ಪೊಲೀಸ್ ತಂಡ ದಾಳಿ ನಡೆಸಿ ಮರಳು ಸಹಿತ ಲಕ್ಷಾಂತರ ರೂ. ಮೌಲ್ಯದ ಸೊತ್ತುಗಳನ್ನು ವಶಪಡಿಸಿಕೊಂಡಿದೆ.
ಲೋಕಾಯುಕ್ತ ಪೊಲೀಸ್ ಮೂರು ತಂಡಗಳನ್ನು ಮಾಡಿ ಮುಲ್ಕಿ, ಬೆಳ್ತಂಗಡಿ, ಬಂಟ್ವಾಳ ಸಹಿತ ಜಿಲ್ಲೆಯ ಹಲವೆಡೆ ದಾಳಿ ನಡೆಸಿದೆ. ಈ ವೇಳೆ ಮರಳುಗಾರಿಕೆ ಅಡ್ಡೆಯಲ್ಲಿನ ಲಾರಿ, ಟಿಪ್ಪರ್, ಜೆಸಿಬಿ ಮತ್ತು ಮರಳು ಸಹಿತ 40 ಲಕ್ಷ ರೂಪಾಯಿ ಮೌಲ್ಯದ ಸೊತ್ತುಗಳನ್ನು ವಶಪಡಿಸಿಕೊಂಡು ಆಯಾ ಪೊಲೀಸ್ ಠಾಣೆಗಳಿಗೆ ಹಸ್ತಾಂತರಿಸಿದೆ. ಈ ಬಗ್ಗೆ ಮೂರು ಕ್ರಿಮಿನಲ್ ಪ್ರಕರಣಗಳನ್ನು ದಾಖಲಿಸಲಾಗಿದೆ.
ಅಕ್ರಮ ಮರಳುಗಾರಿಕೆ ನಡೆಯುತ್ತಿದ್ದ ಬಗ್ಗೆ ದೂರುಗಳು ಬಂದ ಹಿನ್ನೆಲೆಯಲ್ಲಿ ಲೋಕಾಯುಕ್ತ ಮಂಗಳೂರು ವಿಭಾಗದ ಪೊಲೀಸ್ ಅಧೀಕ್ಷಕ ಲಕ್ಷ್ಮೀ ಗಣೇಶ್ ಕೆ. ಅವರ ಮಾರ್ಗದರ್ಶನದಂತೆ ಡಿವೈಎಸ್ಪಿಗಳಾದ ಕಲಾವತಿ, ಚೆಲುವರಾಜು ಬಿ, ಇನ್ಸ್ಪೆಕ್ಟರ್ ಅಮಾನುಲ್ಲಾ ನೇತೃತ್ವದ 3 ತಂಡಗಳು ದಾಳಿ ನಡೆಸಿದೆ. ಇನ್ನು ಕೆಲವು ಕಡೆಗಳಲ್ಲಿ ಅಕ್ರಮ ಗಣಿಗಾರಿಕೆ ಮಾಡುತ್ತಿರುವ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ ಎಂದು ಲೋಕಾಯುಕ್ತ ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.