![ಮಂಗಳೂರು: ಫಾಝಿಲ್ ಹತ್ಯೆಯ ರೂವಾರಿ ತಾನೇ ಎಂದ ಶರಣ್ ಪಂಪ್ ವೆಲ್ ಬಂಧಿಸುವಂತೆ ಪೊಲೀಸ್ ಆಯುಕ್ತರಿಗೆ ದೂರು ಮಂಗಳೂರು: ಫಾಝಿಲ್ ಹತ್ಯೆಯ ರೂವಾರಿ ತಾನೇ ಎಂದ ಶರಣ್ ಪಂಪ್ ವೆಲ್ ಬಂಧಿಸುವಂತೆ ಪೊಲೀಸ್ ಆಯುಕ್ತರಿಗೆ ದೂರು](https://blogger.googleusercontent.com/img/b/R29vZ2xl/AVvXsEjUv-ZPbuWKAy8mt2VbBfGNmyCK0Em-hMfMQOOiDjR-K-StWEF6zLd1KtWybaotmg3yP9IzKhEBYYQ5CyS8p_uU5nLnLgkCwD-w8fVDqkbtzTyViWIwLtSbIvIVnasmK4Hfeq97_1nwJhU/s1600/1675071971106670-0.png)
ಮಂಗಳೂರು: ಫಾಝಿಲ್ ಹತ್ಯೆಯ ರೂವಾರಿ ತಾನೇ ಎಂದ ಶರಣ್ ಪಂಪ್ ವೆಲ್ ಬಂಧಿಸುವಂತೆ ಪೊಲೀಸ್ ಆಯುಕ್ತರಿಗೆ ದೂರು
Monday, January 30, 2023
ಮಂಗಳೂರು: ತುಮಕೂರು ಹಾಗೂ ಉಳ್ಳಾಲದಲ್ಲಿ ಬಜರಂಗದಳದ ನೇತೃತ್ವದಲ್ಲಿ ನಡೆದ ಶೌರ್ಯ ಯಾತ್ರೆಯಲ್ಲಿ ಸುರತ್ಕಲ್ ಫಾಝಿಲ್ ಹತ್ಯೆಯ ರೂವಾರಿ ತಾವೇ ಎಂದು ಬಹಿರಂಗ ಹೇಳಿಕೆ ನೀಡಿರುವ ಬಜರಂಗದಳದ ವಿಭಾಗ ಕಾರ್ಯದರ್ಶಿ ಶರಣ್ ಪಂಪ್ ವೆಲ್ ನನ್ನು ಬಂಧಿಸುವಂತೆ ಆಗ್ರಹಿಸಿ ಫಾಝಿಲ್ ತಂದೆ ಮಂಗಳೂರು ನಗರ ಪೊಲೀಸ್ ಆಯುಕ್ತರಿಗೆ ದೂರು ನೀಡಿದ್ದಾರೆ.
ದೂರು ಸ್ವೀಕರಿಸಿದ ಮಂಗಳೂರು ನಗರ ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ಅವರು, ಈ ಬಗ್ಗೆ ಸುರತ್ಕಲ್ ಠಾಣೆಯಲ್ಲಿ ದೂರು ನೀಡುವಂತೆ ಫಾಝಿಲ್ ತಂದೆಗೆ ಸೂಚನೆ ನೀಡಿದ್ದಾರೆ. ಅಲ್ಲದೆ ಪ್ರಕರಣದ ಬಗ್ಗೆ ಕಾನೂನು ಸಲಹೆ ಪಡೆದು ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿದರು.
ದೂರು ನೀಡಿ ಫಾಝಿಲ್ ತಂದೆ ಉಮರ್ ಫಾರೂಕ್ ಮಾತನಾಡಿ, ಶರಣ್ ಪಂಪ್ ವೆಲ್ ತನ್ನ ಪುತ್ರನ ಹತ್ಯೆಯನ್ನು ಸಂಭ್ರಮಿಸಿದ್ದಾನೆ. ಎಂಟು ಮಂದಿ ಓರ್ವನನ್ನು ಹತ್ಯೆ ಮಾಡಿದ್ದಾರೆ. ಅದು ನಿಜವಾದ ಶೌರ್ಯ ಅಲ್ಲ, ಅದು ಹೇಡಿತನ. ಶರಣ್ ಪಂಪ್ ವೆಲ್ ಗೆ ತಾಕತ್ ಇದ್ದಲ್ಲಿ ನಾನು ಒಬ್ಬನೇ ಬರುತ್ತೇನೆ. ನನ್ನೊಂದಿಗೆ ಕಾದಾಡಲಿ, ನಾನು ನೋಡಿಕೊಳ್ಳುತ್ತೇನೆ. ಹಿಂದೂ ಬೇರೆ, ಹಿಂದುತ್ವ ಬೇರೆ. ಹಿಂದೂಗಳು ಒಳ್ಳೆಯವರು. ಆದರೆ ಹಿಂದುತ್ವದಲ್ಲಿ ಇರುವವರು ಹಣ ತೆಗೆದುಕೊಂಡು ಕೃತ್ಯ ಮಾಡುವವರು. ಈ ಬಗ್ಗೆ ಎಡಿಜಿಪಿಗೂ ಮನವಿ ಮಾಡಿದ್ದೇನೆ. ಪೊಲೀಸರು ಶರಣ್ ಪಂಪ್ ವೆಲ್ ವಿರುದ್ಧ ಸುಮೋಟೋ ಕೇಸ್ ದಾಖಲಿಸಬಹುದಿತ್ತು ಎಂದು ಅವರು ಶರಣ್ ಪಂಪ್ ವೆಲ್ ಬಂಧನ ಮಾಡುವಂತೆ ಮನವಿ ಮಾಡಿದರು.