![ಮಂಗಳೂರು: ಮತ್ತೆ ಸದ್ದು ಮಾಡುತ್ತಿದೆ ದೇವಸ್ಥಾನ ಜಾತ್ರಾ ವ್ಯಾಪಾರದಲ್ಲಿ ಅನ್ಯಧರ್ಮೀಯರಿಗೆ ಅವಕಾಶ ನಿರಾಕರಣೆ ಮಂಗಳೂರು: ಮತ್ತೆ ಸದ್ದು ಮಾಡುತ್ತಿದೆ ದೇವಸ್ಥಾನ ಜಾತ್ರಾ ವ್ಯಾಪಾರದಲ್ಲಿ ಅನ್ಯಧರ್ಮೀಯರಿಗೆ ಅವಕಾಶ ನಿರಾಕರಣೆ](https://blogger.googleusercontent.com/img/b/R29vZ2xl/AVvXsEhPp3DxeHs1x19DuIjfyccp_gfYp2BnufF9JO1yO4KkdA8-bYSA8S0kVoKTpeqcvNOFpv_JVASg-3-HJxdPkYddA_-flRx56Af5GQf_gls1fjhEOp5RmqekOi3PMd0WjBC6UDm6tGiQK4w/s1600/1697113371513765-0.png)
ಮಂಗಳೂರು: ಮತ್ತೆ ಸದ್ದು ಮಾಡುತ್ತಿದೆ ದೇವಸ್ಥಾನ ಜಾತ್ರಾ ವ್ಯಾಪಾರದಲ್ಲಿ ಅನ್ಯಧರ್ಮೀಯರಿಗೆ ಅವಕಾಶ ನಿರಾಕರಣೆ
Thursday, October 12, 2023
ಮಂಗಳೂರು: ಕಳೆದ ಬಾರಿ ದೇವಸ್ಥಾನಗಳ ಜಾತ್ರಾ ಮಹೋತ್ಸವದಲ್ಲಿ ಅನ್ಯಧರ್ಮೀಯರಿಗೆ ಅವಕಾಶವಿಲ್ಲ ಎಂಬ ವಿಚಾರ ಭಾರೀ ಸುದ್ದಿಯಾಗಿತ್ತು. ಜಾತ್ರೆ ಕಳೆದ ಬಳಿಕ ಕೊಂಚ ತಣ್ಣಗಿದ್ದ ಈ ವಿಚಾರ ಈ ಬಾರಿ ಮತ್ತೆ ಸದ್ದು ಮಾಡುತ್ತಿದೆ.
ಮಂಗಳೂರಿನ ಶ್ರೀ ಮಂಗಳಾದೇವಿ ದೇವಾಲಯದ ನವರಾತ್ರಿ ಜಾತ್ರಾಮಹೋತ್ಸವದಲ್ಲಿ ಅನ್ಯಧರ್ಮೀಯ ವ್ಯಾಪಾರಿಗಳಿಗೆ ವ್ಯಾಪಾರಕ್ಕೆ ಅವಕಾಶ ನಿರಾಕರಿಸಲಾಗುತ್ತಿದೆ ಎಂಬ ಆರೋಪ ಕೇಳಿ ಬಂದಿದೆ. ನವರಾತ್ರಿಯ ಹತ್ತು ದಿನಗಳ ಕಾಲ ಇಲ್ಲಿ ವ್ಯಾಪಾರ ಮಾಡಲು ಅವಕಾಶವಿದೆ. ಆದರೆ ದೇವಸ್ಥಾನದ ಆಡಳಿತ ಮಂಡಳಿಯಿಂದಲೇ ವ್ಯಾಪಾರ ಅವಕಾಶ ನಿರಾಕರಿಸಲಾಗಿದೆ ಎನ್ನಲಾಗುತ್ತಿದೆ. ಇದೀಗ ಜಾತ್ರಾ ವ್ಯಾಪಾರಸ್ಥರ ಸಮನ್ವಯ ಸಮಿತಿಯು ಅನ್ಯಧರ್ಮೀಯರಿಗೂ ವ್ಯಾಪಾರಕ್ಕೆ ಅವಕಾಶ ನೀಡಬೇಕೆಂದು ದ.ಕ.ಜಿಲ್ಲಾಧಿಕಾರಿಗಳಿಗೆ ದೂರು ನೀಡಿದೆ.
ಜಾತ್ರಾ ವ್ಯಾಪಾರಸ್ಥರ ಸಮನ್ವಯ ಸಮಿತಿಯು ಅನ್ಯಧರ್ಮೀಯರಿಗಳಿಗೆ ವ್ಯಾಪಾರಕ್ಕೆ ಅವಕಾಶ ಕೋರಿ ನಾಳೆ ನಗರದ ಕ್ಲಾಕ್ ಟವರ್ ಮುಂಭಾಗ ಈ ಬಗ್ಗೆ ಪ್ರತಿಭಟನೆ ನಡೆಸಲಿದೆ. ಆ ಬಳಿಕವೂ ಅವಕಾಶ ದೊರಕದಿದ್ದಲ್ಲಿ ಹಿಂದಿನ ಬಾರಿ ಅನ್ಯಧರ್ಮೀಯರಿಗೆ ವ್ಯಾಪಾರಕ್ಕೆ ಅವಕಾಶ ನೀಡಿರುವ ಜಾಗದಲ್ಲಿಯೇ ವ್ಯಾಪಾರಿಗಳನ್ನು ನಾವೇ ಕೂರಿಸಿ ವ್ಯಾಪಾರ ಮಾಡಿಸುತ್ತೇವೆ ಎಂದು ಜಾತ್ರಾ ವ್ಯಾಪಾರಸ್ಥರ ಸಮನ್ವಯ ಸಮಿತಿಯ ಅಧ್ಯಕ್ಷ ಸುನಿಲ್ ಕುಮಾರ್ ಬಜಾಲ್ ಹೇಳಿದರು.