![ಮಂಗಳೂರು: ಅಯೋಧ್ಯೆಯಲ್ಲಿ ಧರ್ಮಶಾಸ್ತ್ರಕ್ಕೆ ವಿರುದ್ಧವಾಗಿ ರಾಮಲಲ್ಲಾನ ಪ್ರತಿಷ್ಠಾಪನೆ - ಹಿಂದೂ ಮಹಾಸಭಾ ಮಂಗಳೂರು: ಅಯೋಧ್ಯೆಯಲ್ಲಿ ಧರ್ಮಶಾಸ್ತ್ರಕ್ಕೆ ವಿರುದ್ಧವಾಗಿ ರಾಮಲಲ್ಲಾನ ಪ್ರತಿಷ್ಠಾಪನೆ - ಹಿಂದೂ ಮಹಾಸಭಾ](https://blogger.googleusercontent.com/img/b/R29vZ2xl/AVvXsEjuu7NgTVYsKzS-4tVXMInw1g02IUgzVquEtwsUmFKFA5wqEdRhunyoM0mX0JdJpfMtmztzRsIzI-3A6hYbNea73mX1EiSsEkFoAuuJ9WnG08uxj4UgjBv4hx307qvEtGQPPs0Z5oqqF5A/s1600/1705576584830933-0.png)
ಮಂಗಳೂರು: ಅಯೋಧ್ಯೆಯಲ್ಲಿ ಧರ್ಮಶಾಸ್ತ್ರಕ್ಕೆ ವಿರುದ್ಧವಾಗಿ ರಾಮಲಲ್ಲಾನ ಪ್ರತಿಷ್ಠಾಪನೆ - ಹಿಂದೂ ಮಹಾಸಭಾ
Thursday, January 18, 2024
ಮಂಗಳೂರು: ಶ್ರೀರಾಮನ ವಿಚಾರದಲ್ಲಿ ಭಂಡತನ ಮಾಡಿ, ಶಾಸ್ತ್ರಗಳನ್ನು ಅನುಷ್ಠಾನಕ್ಕೆ ತರದೆ ಮಂತ್ರಾಕ್ಷತೆಯನ್ನು ಇಷ್ಟಪ್ರಕಾರ ಮಾಡಿಕೊಂಡು ಕೇವಲ ಬೂಟಾಟಿಕೆಯ ಶಾಸ್ತ್ರ ಮಾಡಿದರೆ ಬಿಜೆಪಿಗೆ ಶ್ರೀರಾಮನ ಶಾಪ ತಟ್ಟಲಿದೆ. ಅವರಿಗೆ ಇಂದಿನ ಕರ್ನಾಟಕದ ಪರಿಸ್ಥಿತಿ ನಾಳೆ ಕೇಂದ್ರದಲ್ಲೂ ಬರಬಹುದು ಎಂದು ಹಿಂದೂ ಮಹಾಸಭಾ ಕರ್ನಾಟಕದ ಸಂಸ್ಥಾಪಕ ರಾಜೇಶ್ ಪವಿತ್ರನ್ ಆಕ್ರೋಶ ವ್ಯಕ್ತಪಡಿಸಿದರು.
ನಗರದಲ್ಲಿ ಮಾತನಾಡಿದ ಅವರು, ಪೂರ್ಣಪ್ರಮಾಣದ ದೇವಸ್ಥಾನ ನಿರ್ಮಾಣದ ಮೊದಲೇ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ರಾಮಮಂದಿರದ ಉದ್ಘಾಟನೆ ಮಾಡುವುದು ಧರ್ಮಶಾಸ್ತ್ರಕ್ಕೆ ವಿರುದ್ಧ. ಶಾಸ್ತ್ರಕ್ಕೆ ಅಪಚಾರ ಆಗಿರುವುದರಿಂದ ಇದನ್ನು ಹಿಂದೂ ಮಹಾಸಭಾ ಬಲವಾಗಿ ಖಂಡಿಸುತ್ತದೆ. ಮೊಘಲ್, ಬ್ರಿಟಿಷ್, ಟಿಪ್ಪು ಕಾಲದಲ್ಲಿ ಶಂಕರಾಚಾರ್ಯರ ಪೀಠದ ಮೇಲೆ ನಿರಂತರ ಆಕ್ರಮಣಗಳು ಆಗಿದೆ. ಇದೀಗ ಕೇಂದ್ರದ ಬಿಜೆಪಿ ಸರಕಾರವೂ ಶಂಕರಾಚಾರ್ಯರನ್ನು ಅವಹೇಳನ ಮಾಡುವಂತಹ ಕಾರ್ಯವನ್ನು ಮಾಡುತ್ತಿದೆ. ಶ್ರೀರಾಮನ ವಿಚಾರವನ್ನು ಸಂಭ್ರಮಿಸಬೇಕಾದ ಈ ಕಾಲದಲ್ಲಿ ಅದಕ್ಕೆ ಹೋರಾಟ ಮಾಡಿದವರನ್ನೇ ಬದಿಗೊತ್ತಿರುವುದು ಶ್ರೀರಾಮನನ್ನು ಚುನಾವಣಾ ಸರಕನ್ನಾಗಿ ಮಾಡಿರುವುದು ಅದು ಒಪ್ಪುವಂತಹ ಮಾತಲ್ಲ ಎಂದರು.
ರಾಮಮಂದಿರ ನಿರ್ಮಾಣಕ್ಕೆ ಮುಂಚೂಣಿ ಹೋರಾಟದಲ್ಲಿದ್ದ ಹಿಂದೂ ಮಹಾಸಭಾ, ನಿರ್ಮೋಹಿ ಅಖಾಡ, ಸಾಧುಸಂತರ ವ್ಯವಸ್ಥೆಯನ್ನು ದೂರವಿಟ್ಟು ಕೇಂದ್ರ ಸರಕಾರ ರಾಮಮಂದಿರವನ್ನು ಉದ್ಘಾಟಿಸಲು ಹೊರಟಿದೆ. ಅಯೋಧ್ಯೆ ವಿವಾದದ ಮೂಲ ವಕಾಲತ್ತುದಾರ ಹಿಂದೂ ಮಹಾಸಭಾಕ್ಕೆ ರಾಮಮಂದಿರ ಉದ್ಘಾಟನೆಗೆ ಆಹ್ವಾನವೇ ಇಲ್ಲ. ಹಿಂದುತ್ವದ ವಿಚಾರದಲ್ಲಿ ರಾಜಕೀಯ ಮಾಡಿ ಅಧಿಕಾರಕ್ಕೆ ಏರಿರುವ ಬಿಜೆಪಿ ಈಗ ಪ್ರಭು ಶ್ರೀರಾಮನ ವಿಚಾರದಲ್ಲಿ ರಾಜಕೀಯ ಮಾಡಿದ್ರೆ ಅದನ್ನು ಹಿಂದೂ ಮಹಾಸಭಾ ಒಪ್ಪುವುದಿಲ್ಲ ಎಂದು ರಾಜೇಶ್ ಪವಿತ್ರನ್ ಹೇಳಿದರು.
ಬೈಟ್: ರಾಜೇಶ್ ಪವಿತ್ರನ್ - ಹಿಂದೂ ಮಹಾಸಭಾ ಕರ್ನಾಟಕದ ಸಂಸ್ಥಾಪಕ