ಬೆಂಗಳೂರು :18 ಕೋಟಿ ಮೌಲ್ಯದ 11 ಕೇಜಿ ಚಿನ್ನ ಲೂಟಿ ; ಬೆಂಗಳೂರಿನ ಬಿಲ್ಡರ್ ಮನೆಯಲ್ಲಿ ಕಳವು, ನೇಪಾಳ ಮೂಲದ ಮನೆ ಕೆಲಸದ ದಂಪತಿಯ ಕೃತ್ಯ...!!!

ಬೆಂಗಳೂರು: ಮಾರತ್ತಹಳ್ಳಿ ಠಾಣೆ ವ್ಯಾಪ್ತಿಯ ಯಮಲೂರಿನಲ್ಲಿ ಬಿಲ್ಡರ್ ಒಬ್ಬರ ಮನೆಯಿಂದ 18 ಕೋಟಿ ಮೌಲ್ಯದ ಬರೋಬ್ಬರಿ 11 ಕೇಜಿ ಚಿನ್ನವನ್ನು ಮನೆ ಕೆಲಸದವರೇ ಕಳವುಗೈದು ಪರಾರಿಯಾದ ಘಟನೆ ನಡೆದಿದೆ. ಮಾರತ್ತಹಳ್ಳಿ ಠಾಣೆಯಲ್ಲಿ ಬಿಲ್ಡರ್ ಶಿವಕುಮಾರ್ ಪರವಾಗಿ ಮಗ ಶಿಮಾಂತ್ ಎಸ್ ಅರ್ಜುನ್ ದೂರು ನೀಡಿದ್ದು, ನೇಪಾಳ ಮೂಲದ ದಿನೇಶ್ (32) ಮತ್ತು ಕಮಲಾ (25) ದಂಪತಿ ವಿರುದ್ಧ ಪ್ರಕರಣ ದಾಖಲಾಗಿದೆ.
ಶಿವಕುಮಾರ್ ಮನೆಯಲ್ಲಿ ಆರು ತಿಂಗಳಿನಿಂದ ನವೀಕರಣ ಕಾಮಗಾರಿ ನಡೀತಿತ್ತು. ಇದಕ್ಕಾಗಿ 60 ರಷ್ಟು ಕಾರ್ಮಿಕರು ಕೆಲಸ ಮಾಡುತ್ತಿದ್ದರು. ದಿನೇಶ್ ಮತ್ತು ಕಮಲಾ ದಂಪತಿ ಜೊತೆಗಿದ್ದು ಎಲ್ಲ ಕೆಲಸವನ್ನು ನೋಡಿಕೊಂಡಿದ್ದರು. ಮನೆಯ ಕೆಲಸ ಮುಗಿದ ಬಳಿಕ ಕಮಲಾ ಇತ್ತೀಚೆಗೆ ಅಡುಗೆ ಕೆಲಸಕ್ಕಾಗಿ ಸೇರಿಕೊಂಡಿದ್ದಳು. ದಿನೇಶ್ ಕೂಡ ಆಕೆಗೆ ಸಹಾಯಕನಾಗಿ ತರಕಾರಿ ತರುವ ಕೆಲಸಗಳನ್ನು ಮಾಡುತ್ತಿದ್ದ. ಈ ನಡುವೆ, ಮಗನಿಗೆ ಮದುವೆಯಾಗಿದ್ದರಿಂದ ಇವರ ಬಗ್ಗೆ ಕಾಳಜಿ ವಹಿಸಿರಲಿಲ್ಲ. ಮೊನ್ನೆ ಮನೆಯಲ್ಲಿ ಯಾರೂ ಇಲ್ಲದ ಸಮಯ ನೋಡಿ ಚಿನ್ನಾಭರಣ ಕಳವುಗೈದು ಪರಾರಿಯಾಗಿದ್ದಾರೆ ಎಂದು ಬಿಲ್ಡರ್ ಶಿವಕುಮಾರ್ ತಿಳಿಸಿದ್ದಾರೆ.
ಕಳವಾದ ದಿವಸ ಶಿವಕುಮಾರ್ ಬಾಲಿಗೆ ಪ್ರವಾಸ ಹೋಗಿದ್ದರು. ಮನೆಯವರು ಹತ್ತಿರದಲ್ಲಿ ಭೂಮಿ ಪೂಜೆ ಇದೆಯೆಂದು ಅಲ್ಲಿಗೆ ತೆರಳಿದ್ದರು. ಮನೆಯಲ್ಲಿ ಅಡುಗೆ ಕೆಲಸದಾಳು ಕಮಲಾ ಇದ್ದಾಳೆಂದು ಆಕೆಯನ್ನು ಬಿಟ್ಟು ಹೋಗಿದ್ದರು. ಆದರೆ 40 ನಿಮಿಷ ಬಿಟ್ಟು ಬರುವಷ್ಟರಲ್ಲಿ ಚಿನ್ನಾಭರಣಗಳೊಂದಿಗೆ ಪರಾರಿಯಾಗಿದ್ದರು ಎಂದು ಅವರು ತಿಳಿಸಿದ್ದಾರೆ.
ಸುಮಾರು 17.73 ಕೋಟಿ ರೂಪಾಯಿ ಮೌಲ್ಯದ 11.5 ಕೆಜಿ ಚಿನ್ನ ವಜ್ರದ ಆಭರಣ, 14.60 ಲಕ್ಷ ರೂಪಾಯಿ ಮೌಲ್ಯದ 5 ಕೆಜಿ ಬೆಳ್ಳಿ, 11.50 ಲಕ್ಷ ರೂಪಾಯಿ ನಗದು ಕಳ್ಳತನ ಮಾಡಿದ್ದಾರೆ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. ಕಳೆದ 19 ವರ್ಷಗಳಿಂದ ಎಂ.ಆರ್ ಶಿವಕುಮಾರ್ ಮಾರತಹಳ್ಳಿಯಲ್ಲಿ ಬಿಲ್ದರ್ ಆಗಿದ್ದರು. ಈ ಹಿಂದೆ ಕೆಲಸ ಮಾಡುತ್ತಿದ್ದ ವಿಕಾಸ್ ಮತ್ತು ವಿಷ್ಣು ಎಂಬವರ ಸಹಾಯದಿಂದ ದಿನೇಶ್ ದಂಪತಿ ಕೆಲಸಕ್ಕೆ ಸೇರಿಕೊಂಡಿದ್ದರು ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಮನೆಯಲ್ಲಿದ್ದ ಸಿಸಿಟಿವಿ ಕ್ಯಾಮೆರಾಗಳನ್ನು ನಿಷ್ಕ್ರಿಯಗೊಳಿಸಲು ವಿದ್ಯುತ್ ಸಂಪರ್ಕ, ಯುಪಿಎಸ್ ಆಫ್ ಮಾಡಿ ವೈ ಫೈ ಸಂಪರ್ಕ ಕಡಿತಗೊಳಿಸಿದ್ದಾರೆ. ಕೃತ್ಯದಲ್ಲಿ ಸುಮಾರು ಐವರು ಪಾಲ್ಗೊಂಡಿದ್ದಾರೆ ಎಂದು ಶಂಕಿಸಿರುವ ಪೊಲೀಸರು, ಆರೋಪಿಗಳ ಪತ್ತೆಗೆ ಶೋಧ ಪ್ರಾರಂಭಿಸಿದ್ದಾರೆ. ಕಳೆದ 32 ವರ್ಷಗಳಿಂದ ಸಂಪಾದಿಸಿದ ಆಸ್ತಿಯೆನ್ನೆಲ್ಲಾ ಕಳ್ಳರು ದೋಚಿದ್ದಾರೆ ಎಂದು ಶಿವಕುಮಾರ್ ಹೇಳಿದ್ದು, ಇದನ್ನು ಕುಟುಂಬಕ್ಕೆ ಹಂಚಿಕೆ ಮಾಡಲು ಬ್ಯಾಂಕಿನಿಂದ ತಂದಿದ್ದೆ, ಅದೇ ದಿನವೇ ಕಳ್ಳತನವಾಗಿದೆ ಎಂದು ಅವರು ತಿಳಿಸಿದ್ದಾರೆ