ಕಾಸರಗೋಡು :ಮಂಜೇಶ್ವರ ಚೆಕ್ ಪೋಸ್ಟ್ ನಲ್ಲಿ ವಾಹನ ತಪಾಸಣೆ ; ಕೆಎಸ್ಸಾರ್ಟಿಸಿ ಬಸ್ಸಿನಲ್ಲಿ 30 ಲಕ್ಷ ಅಕ್ರಮ ನಗದು ಪತ್ತೆ, ಮಲಪ್ಪುರಂ ಮೂಲದ ವ್ಯಕ್ತಿ ಬಂಧನ..!!!

ಕಾಸರಗೋಡು : ಮಂಜೇಶ್ವರ ಚೆಕ್ ಪೋಸ್ಟ್ ನಲ್ಲಿ ವಾಹನ ತಪಾಸಣೆ ನಡೆಸುತ್ತಿದ್ದಾಗ ಕೆಎಸ್ಸಾರ್ಟಿಸಿ ಬಸ್ಸಿನಲ್ಲಿ ಸೂಕ್ತ ದಾಖಲೆಗಳಿಲ್ಲದೆ
30 ಲಕ್ಷ ರೂ. ನಗದು ಹಣವನ್ನು ಒಯ್ಯುತ್ತಿರುವುದು ಪತ್ತೆಯಾಗಿದ್ದು ಅಬಕಾರಿ ಅಧಿಕಾರಿಗಳು ವ್ಯಕ್ತಿಯೊಬ್ಬನನ್ನು ಬಂಧಿಸಿದ್ದಾರೆ.
ಮಂಗಳೂರಿನಿಂದ ಕಾಸರಗೋಡು ತೆರಳುತ್ತಿದ್ದ ಕೆಎಸ್ಸಾರ್ಟಿಸಿ ಬಸ್ಸಿನಲ್ಲಿ ಹಣವನ್ನು ಸಾಗಿಸಲಾಗುತ್ತಿತ್ತು. ಹಣವನ್ನು ಹೊಂದಿದ್ದ ಮಲಪ್ಪುರಂ ಜಿಲ್ಲೆಯ ಪೆರಿಂದಾಲ್ ಮಣ್ಣ್ ತಾಲೂಕಿನ ವಡಕ್ಕಾಂಗರ ನಿವಾಸಿ ಹಂಝ(64) ಎಂಬಾತನನ್ನು ಬಂಧಿಸಲಾಗಿದೆ. ಬಂಧಿತ ಆರೋಪಿ ಹಾಗೂ ವಶ ಪಡಿಸಿದ ನಗದು ಹಣವನ್ನು ಅಬಕಾರಿ ಪೊಲೀಸರು ಮಂಜೇಶ್ವರ ಪೊಲೀಸರಿಗೆ ಹಸ್ತಾಂತರಿಸಿದ್ದಾರೆ.

ಗುರುವಾರ ಬೆಳಗ್ಗೆ ಮಂಜೇಶ್ವರ ಚೆಕ್ ಪೋಸ್ಟ್ ನಲ್ಲಿ ಕಾರ್ಯಾಚರಣೆ ನಡೆದಿದೆ. ಕಾಳಧನವನ್ನು ಎಲ್ಲಿಂದ ಮತ್ತು ಎಲ್ಲಿಗೆ ಒಯ್ಯುತ್ತಿದ್ದ ಎನ್ನುವ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಇತ್ತೀಚಿನ ದಿನಗಳಲ್ಲಿ ಮಂಗಳೂರು- ಕಾಸರಗೋಡು ರಸ್ತೆಯಲ್ಲಿ ಬಸ್ ಮೂಲಕ ಅಕ್ರಮ ಹಣ ಸಾಗಾಟ ನಿರಂತರ ನಡೆಯುತ್ತಿದ್ದು ಅಬಕಾರಿ ದಳ ತಪಾಸಣೆಯಲ್ಲಿ ತೊಡಗಿದೆ.