ಬೆಂಗಳೂರು :ನಟಿ ಕಾವ್ಯ ಗೌಡ ಮನೆಯಲ್ಲಿ ಹೈಡ್ರಾಮಾ: ಹಲ್ಲೆ, ರೇ*ಪ್ ಬೆದರಿಕೆ ಆರೋಪ – ಪೊಲೀಸ್ ಠಾಣೆ ಮೆಟ್ಟಿಲೇರಿದ ಕೌಟುಂಬಿಕ ಕಲಹ!
Tuesday, January 27, 2026
ಬೆಂಗಳೂರು: ಕನ್ನಡ ಕಿರುತೆರೆಯ ಜನಪ್ರಿಯ ನಟಿ ಕಾವ್ಯ ಗೌಡ ಅವರ ಮನೆಯಲ್ಲಿ ಭೀಕರ ಕೌಟುಂಬಿಕ ಕಲಹ ಏರ್ಪಟ್ಟಿದ್ದು, ಪರಸ್ಪರ ಹಲ್ಲೆ ಹಾಗೂ ಗಂಭೀರ ಬೆದರಿಕೆಗಳ ಆರೋಪದ ಮೇಲೆ ರಾಮಮೂರ್ತಿ ನಗರ ಪೊಲೀಸ್ ಠಾಣೆಯಲ್ಲಿ ದೂರು-ಪ್ರತಿದೂರು ದಾಖಲಾಗಿದೆ.
ಘಟನೆಯ ಹಿನ್ನೆಲೆ: ಅತ್ತಿಗೆ-ನಾದಿನಿ ನಡುವೆ ಶುರುವಾದ ಕಿಡಿ
'ಗಾಂಧಾರಿ', 'ರಾಧಾ ರಮಣ' ಖ್ಯಾತಿಯ ಕಾವ್ಯ ಗೌಡ, ಉದ್ಯಮಿ ಸೋಮಶೇಖರ್ ಅವರನ್ನು ವಿವಾಹವಾಗಿದ್ದು, ಪತಿಯ ಸಹೋದರ ನಂದೀಶ್ ಮತ್ತು ಅತ್ತಿಗೆ ಪ್ರೇಮಾ ಅವರೊಂದಿಗೆ ಒಂದೇ ಮನೆಯಲ್ಲಿ ವಾಸವಾಗಿದ್ದರು. ಆದರೆ, ಕಾವ್ಯ ಮತ್ತು ಪ್ರೇಮಾ ನಡುವೆ ಆಗಾಗ ನಡೆಯುತ್ತಿದ್ದ ಮನಸ್ತಾಪ ಈಗ ವಿಕೋಪಕ್ಕೆ ತಿರುಗಿದೆ.
ಕಾವ್ಯ ಗೌಡ ಅವರ ಅಕ್ಕ ಭವ್ಯಾ ಗೌಡ ಅವರು ನೀಡಿದ ದೂರಿನಲ್ಲಿ ಈ ಕೆಳಗಿನ ಅಂಶಗಳನ್ನು ಉಲ್ಲೇಖಿಸಿದ್ದಾರೆ ಸೋಮಶೇಖರ್ ಅವರಿಗೆ ಚಾಕುವಿನಿಂದ ಇರಿಯಲಾಗಿದ್ದು, ಅವರು ಪ್ರಸ್ತುತ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಪ್ರೇಮಾ ಅವರ ತಂದೆ ರವಿಕುಮಾರ್ ಅವರು ಕಾವ್ಯ ಗೌಡಗೆ ರೇ*ಪ್ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಲಾಗಿದೆ.ಕಾವ್ಯ ಗೌಡ ಅವರ ಜನಪ್ರಿಯತೆ ಸಹಿಸದೆ ಸಂಬಂಧಿಕರೇ ಈ ಕೃತ್ಯ ಎಸಗಿದ್ದಾರೆ ಎನ್ನಲಾಗಿದೆ.
ಅತ್ತಿಗೆ ಪ್ರೇಮಾ ಅವರಿಂದ ಪ್ರತಿದೂರು:ನಟಿ ಕಾವ್ಯ ಗೌಡ ಅವರ ದೂರಿಗೆ ಪ್ರತಿಯಾಗಿ ಅತ್ತಿಗೆ ಪ್ರೇಮಾ ಕೂಡ ದೂರು ನೀಡಿದ್ದು, ಪ್ರಕರಣಕ್ಕೆ ಹೊಸ ತಿರುವು ನೀಡಿದ್ದಾರೆ ನಾವು ಊಟ ಮಾಡುತ್ತಿದ್ದಾಗ ಕಾವ್ಯ ಬಂದು "ಇದು ನಮ್ಮ ಮನೆ, ಹೊರಗೆ ಹೋಗಿ" ಎಂದು ಧಮ್ಕಿ ಹಾಕಿದ್ದಾರೆ ಎಂದು ಪ್ರೇಮಾ ಹೇಳಿದ್ದಾರೆ.
ಸಹೋದರಿ ಮೇಲೆ ಹಲ್ಲೆ: ಸಂಜೆ ಮನೆಗೆ ಬಂದಿದ್ದ ಪ್ರೇಮಾ ಅವರ ಸಹೋದರಿ ಕಸ್ತೂರಿ ಮೇಲೆ ಕಾವ್ಯ ಮತ್ತು ಅವರ ಕಡೆಯವರು ಹಲ್ಲೆ ನಡೆಸಿದ್ದಾರೆ ಎಂಬ ಆರೋಪವಿದೆ.
ಮಾಂಗಲ್ಯ ಸರಕ್ಕೆ ಕೈ: ಕಾವ್ಯ ಅಕ್ಕ ಭವ್ಯಾ ಗೌಡ ಅವರು ಚಪ್ಪಲಿಯಿಂದ ಹೊಡೆದು, ಮಾಂಗಲ್ಯ ಸರ ಕಿತ್ತು ಹಾಕಿದ್ದಾರೆ ಎಂದು ಪ್ರೇಮಾ ದೂರಿನಲ್ಲಿ ತಿಳಿಸಿದ್ದಾರೆ.