ಉಳ್ಳಾಲ :ಬಡವರಿಗೆ ನಿವೇಶನ ನೀಡದ ಅಧಿಕಾರಿಗಳ ವಿರುದ್ಧ ಕೋಟೆಕಾರು ಪಪಂ ಸದಸ್ಯರ ಪ್ರತಿಭಟನೆ ; ಅತಿಕ್ರಮಿತ ಕಟ್ಟಡಗಳ ತೆರವಿಗೆ ಅಧಿಕಾರಿಗಳ ಅಸಹಾಯಕತೆ, ಗರ್ಭಕಂಠ ಕ್ಯಾನ್ಸರ್ ತಡೆಗೆ ಹೆಚ್ ಪಿವಿ ಲಸಿಕೆ..!!

ಉಳ್ಳಾಲ : ಕಳೆದ ಹದಿನೈದು ವರ್ಷಗಳಿಂದ ಬಡವರಿಗೆ ನಿವೇಶನ ನೀಡದೆ ಚೆಲ್ಲಾಟವಾಡುತ್ತಿರುವ ಅಧಿಕಾರಿಗಳ ಅಸಡ್ಡೆ ವಿರುದ್ಧ ಆಕ್ರೋಶಿತರಾದ ಕೋಟೆಕಾರು ಪಟ್ಟಣ ಪಂಚಾಯತ್ ಆಡಳಿತ ಮತ್ತು ವಿಪಕ್ಷ ಸದಸ್ಯರು ಸಾಮಾನ್ಯ ಸಭೆಯಲ್ಲಿ ಪ್ರತಿಭಟನೆ ನಡೆಸಿ ತಹಶೀಲ್ದಾರ್ ಹಾಗೂ ಗ್ರಾಮ ಕರಣಿಕರಿಗೆ ಧಿಕ್ಕಾರ ಕೂಗಿದ ಘಟನೆ ನಡೆದಿದೆ.
ಗುರುವಾರ ಕೋಟೆಕಾರು ಪ.ಪಂ ಅಧ್ಯಕ್ಷರಾದ ದಿವ್ಯಾ ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಆಡಳಿತ ಮತ್ತು ವಿಪಕ್ಷದ ಸದಸ್ಯರು ಸಭೆಯ ನಡುವೆ ಪ್ರತಿಭಟಿಸಿದ್ದಾರೆ. ಆಡಳಿತ ಪಕ್ಷದ ಸುಜಿತ್ ಮಾಡೂರು ಮಾತನಾಡಿ ಕೋಟೆಕಾರು ಗ್ರಾಮದ ನಿವೇಶನ ರಹಿತರು 2011 ರಿಂದಲೂ ವಸತಿ ಯೋಜನೆಗಾಗಿ ಸ್ಥಳೀಯಾಡಳಿತಕ್ಕೆ ಅರ್ಜಿ ಹಾಕುತ್ತಲೇ ಇದ್ದಾರೆ. ಜನಪ್ರತಿನಿಧಿಗಳು ಕೂಡ ನಿವೇಶನ ರಹಿತರಿಗೆ ವಸತಿ ಯೋಜನೆ ನೀಡಲು ನಿರಂತರವಾಗಿ ಹೋರಾಟ ನಡೆಸುತ್ತಾ ಬಂದಿದ್ದೇವೆ. ಆದರೆ ಅಧಿಕಾರಿಗಳು ಸರಕಾರಿ ನಿವೇಶನ ಗುರುತಿಸಿ ಬಡವರಿಗೆ ವಸತಿ ಯೋಜನೆ ಕಲ್ಪಿಸಿ ಕೊಡಲು ಹಿಂದೇಟು ಹಾಕುತ್ತಿರುವುದನ್ನ ಕಂಡರೆ ವಸತಿ ಯೋಜನೆಯಲ್ಲಿ ದೊಡ್ಡ ಅವ್ಯವಹಾರ ಆಗಿರುವುದು ಕಂಡುಬರುತ್ತದೆ. ಈ ಬಗ್ಗೆ ಮಾಹಿತಿ ನೀಡಬೇಕಿದ್ದ ಹಿಂದಿನ ಗ್ರಾಮ ಕರಣಿಕರು ಸಾಮಾನ್ಯ ಸಭೆಗಳಿಗೆ ಸರಿಯಾಗಿ ಹಾಜರಾಗುತ್ತಿರಲಿಲ್ಲ. ಈಗಿನ ನೂತನ ಗ್ರಾಮ ಕರಣಿಕರು ಕೂಡ ಸಾಮಾನ್ಯ ಸಭೆಗೆ ಗೈರಾಗಿದ್ದಾರೆ. ಹಾಗಾದರೆ ನಿವೇಶನ ರಹಿತರ ಸಮಸ್ಯೆಗಳನ್ನ ನಾವು ಯಾರಲ್ಲಿ ಚರ್ಚಿಸಬೇಕೆಂದು ಪ್ರಶ್ನಿಸಿದರು.




ಪಕ್ಷೇತರ ಸದಸ್ಯ ಹರೀಶ್ ರಾವ್ ಮಾತನಾಡಿ ಯಾರ್ಯಾರೋ ಬಂದವರು ಸರಕಾರಿ ಜಾಗವನ್ನ ಕಬಳಿಸಿ ಕಟ್ಟಡಗಳನ್ನು ಕಟ್ಟುತ್ತಿದ್ದಾರೆ. ಆದರೆ ಅಧಿಕಾರಿಗಳು ಮಾತ್ರ ಬಡವರಿಗೆ ನಿವೇಶನಗಳನ್ನ ಕೊಡುವ ಕೆಲಸ ಮಾಡುತ್ತಿಲ್ಲ. ಪಟ್ಟಣ ಪಂಚಾಯತ್ ಅಧ್ಯಕ್ಷರೇ ಮುಂದೆ ನಿಂತು ಬಡವರಿಗೆ ನಿವೇಶನ ಕೊಡಿಸುವ ಕಾರ್ಯ ನಡೆಸಬೇಕಿದೆ ಎಂದರು. ಇದಕ್ಕುತ್ತರಿಸಿದ ಅಧ್ಯಕ್ಷೆ ದಿವ್ಯ ಶೆಟ್ಟಿ, ಸರಕಾರಿ ನಿವೇಶನಗಳ ಸರ್ವೆ ನಂಬರ್ ಹಾಕಿ ಪಟ್ಟಣ ಪಂಚಾಯತ್ ಹೆಸರಿಗೆ ವರ್ಗಾವಣೆ ಮಾಡುವಂತೆ ತಹಸೀಲ್ದಾರ್ ಗೆ ಅರ್ಜಿ ಕೊಟ್ಟಿದ್ದೇವೆ. ಈ ಬಗ್ಗೆ ಯಾವುದೇ ಪ್ರಗತಿ ಕಂಡುಬಂದಿಲ್ಲ. ಎಲ್ಲಾ ಪಟ್ಟಣ ಸದಸ್ಯರ ಸಭೆಯನ್ನು ಕರೆದು ಚರ್ಚಿಸುವ ಭರವಸೆ ನೀಡಿದ ಮೇರೆಗೆ ಪಂಚಾಯತ್ ಸದಸ್ಯರು ಪ್ರತಿಭಟನೆ ಹಿಂಪಡೆದರು.
ನಡುಕುಮೇರುವಿನ ಸರಕಾರಿ ಜಾಗವನ್ನ ಅತಿಕ್ರಮಿಸಿ ಕಟ್ಟಿರುವ ಮನೆಗಳನ್ನ ನೆಲಸಮಗೊಳಿಸಲು ಸಾಮಾನ್ಯ ಸಭೆಯಲ್ಲಿ ಬಹುಮತದಿಂದ ನಿರ್ಣಯ ಕೈಗೊಳ್ಳಲಾಗಿತ್ತು. ಆದರೂ ಸರಕಾರಿ ಜಾಗದ ಅಕ್ರಮ ಕಟ್ಟಡಗಳನ್ನ ನೆಲಸಮಗೊಳಿಸಿಲ್ಲ ಎಂದು ಸಭೆಯಲ್ಲಿ ಆಕ್ಷೇಪ ಕೇಳಿಬಂತು. ಸರಕಾರಿ ಜಾಗದ ಅತಿಕ್ರಮಣ ಬಗ್ಗೆ ಧ್ವನಿ ಎತ್ತಿದರೆ ಆ ವಿಚಾರವನ್ನ ಸೋರಿಕೆ ಮಾಡಲಾಗುತ್ತದೆ. ಪಂಚಾಯತ್ಗೆ ಮೀಸಲಿಟ್ಟ ಸರಕಾರಿ ನಿವೇಶನವನ್ನು ಉಳಿಸುವುದು ನಮ್ಮ ಜವಾಬ್ದಾರಿಯೇ ಹೊರತು ವೈಯಕ್ತಿಕ ಹಿತಾಸಕ್ತಿ ಇಲ್ಲವೆಂದು ಸುಜಿತ್ ಹೇಳಿದರು.
ಇದಕ್ಕುತ್ತರಿಸಿದ ಮುಖ್ಯಾಧಿಕಾರಿ ಮಾಲಿನಿ, ನಾವು ಪಂಚಾಯತ್ ನಿರ್ಣಯ ಅಥವಾ ಅರ್ಜಿಗಳ ಬಗ್ಗೆ ಹೊರಗಿನವರಿಗೆ ಮಾಹಿತಿ ಸೋರಿಕೆ ಮಾಡುವುದಿಲ್ಲ. ಅಧಿಕಾರಿಗಳ ಹಾಜರಾತಿ ಕೊರತೆಯಿಂದ ನಡುಕುಮೇರಿನ ಅಕ್ರಮ ಕಟ್ಟಡಗಳ ತೆರವು ಕಾರ್ಯ ನಡೆದಿಲ್ಲವೆಂದು ಅಸಹಾಯಕತೆ ತೋಡಿಕೊಂಡರು. ಮಹಿಳೆಯರಿಗೆ ಸ್ತನ ಕ್ಯಾನ್ಸರ್ ಬಳಿಕ ಹೆಚ್ ಪಿವಿ ವೈರಸ್ ನಿಂದ ಬರುವ ಗರ್ಭಕಂಠ (ಸರ್ವೈವಲ್ ಕ್ಯಾನ್ಸರ್) ಕ್ಯಾನ್ಸರ್ ಮಾರಕವಾಗಿದ್ದು, ಇದರ ತಡೆಗೆ ಶೀಘ್ರವಾಗಿ ಶಾಲಾ ವಿದ್ಯಾರ್ಥಿನಿಯರಿಗೆ ಹೆಚ್ ಪಿವಿ ಲಸಿಕೆ ಹಾಕುವ ಯೋಜನೆ ಜಾರಿಗೆ ಬರಲಿದೆ ಎಂದು ಕೋಟೆಕಾರ್ ಪ್ರಾಥಮಿಕ ಆರೋಗ್ಯ ಕೇಂದ್ರದ ಸಮುದಾಯ ಆರೋಗ್ಯಾಧಿಕಾರಿ ಪ್ರೀತಿ ಡಿಸೋಜ ಮಾಹಿತಿ ನೀಡಿದರು.
ಗರ್ಭಕಂಠದ ಕ್ಯಾನ್ಸರ್ ಗೆ ಎರಡು ಡೋಸ್ ಲಸಿಕೆಗೆ ಖಾಸಗಿ ಆಸ್ಪತ್ರೆಯಲ್ಲಿ 22 ಸಾವಿರ ರೂಪಾಯಿ ಇದ್ದು ಸರ್ಕಾರದಿಂದ ಉಚಿತವಾಗಿ ಒಂದು ಡೋಸ್ ಲಸಿಕೆ ಶಾಲಾ ವಿದ್ಯಾರ್ಥಿನಿಯರಿಗೆ ನೀಡುವ ಯೋಜನೆ ತಿಂಗಳೊಳಗೆ ಆರಂಭಗೊಳ್ಳಲಿದೆ. ಆಶಾ ಕಾರ್ಯಕರ್ತೆಯರು ಸರ್ವೇ ನಡೆಸಿ ಫಲಾನುಭವಿಗಳ ಲೆಕ್ಕ ನೀಡಿದ ಬಳಿಕ ಮೂರು ತಿಂಗಳು ಶಿಬಿರ ನಡೆಸಿ 14ರಿಂದ 15 ವಯಸ್ಸಿನ ಹೆಣ್ಮಕ್ಕಳಿಗೆ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಲಸಿಕೆ ನೀಡಲಾಗುತ್ತದೆ. ಬಳಿಕ 9ರಿಂದ 14 ವರ್ಷದೊಳಗಿನ ಮಕ್ಕಳಿಗೆ ಪ್ರತಿ ಗುರುವಾರ ಲಸಿಕೆ ನೀಡಲಾಗುತ್ತದೆ. ಖಾಸಗಿ ಆಸ್ಪತ್ರೆಗಳಲ್ಲಿ ಕೊಡಲಾಗುವ ಎರಡು ಡೋಸ್ ಸಾಮರ್ಥ್ಯ ಒಂದೇ ಡೋಸ್ ನಲ್ಲಿ ಇದೆಯೆಂದರು.
ಪಂಚಾಯತ್ ಅಧ್ಯಕ್ಷೆ ದಿವ್ಯಾ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ಪ್ರವೀಣ್ ಬಗಂಬಿಲ, ಸ್ಥಾಯಿ ಸಮಿತಿ ಅಧ್ಯಕ್ಷ ಧೀರಜ್ ಕೊಂಡಾಣ, ಮುಖ್ಯಾಧಿಕಾರಿ ಮಾಲಿನಿ ಉಪಸ್ಥಿತರಿದ್ದರು.