ರಾಜಸ್ಥಾನ: ಜೈಪುರದ ಈ ಬೀದಿಯಲ್ಲಿ ಕರಕುಶಲ ಕಲೆ ಇನ್ನೂ ಜೀವಂತ: 300 ವರ್ಷಗಳ ಪರಂಪರೆಗೆ ಬೇಕಿದೆ ಸರ್ಕಾರದ ನೆರವು..!!
ರಾಜಸ್ಥಾನ: ಅರಮನೆಗಳ ನಗರಿ ಜೈಪುರವು ಅದ್ಭುತ ಅರಮನೆಗಳು, ಕೋಟೆಗಳು, ಮಹಲುಗಳಿಗೆ ಪ್ರಸಿದ್ಧ. ಅಷ್ಟೇ ಅಲ್ಲ, ಇದು ರೋಮಾಂಚಕ ಕರಕುಶಲ ಸಂಪ್ರದಾಯಗಳಿಗೂ ಹೆಸರುವಾಸಿಯಾಗಿದೆ. ಹೌದು, ಇಲ್ಲಿ ತಾಮ್ರ, ಹಿತ್ತಾಳೆ ಮತ್ತು ಕಂಚಿನ ಪಾತ್ರೆಗಳನ್ನು ಈಗಲೂ ಸಹ ಯಾವುದೇ ಯಂತ್ರ ಬಳಸದೇ ಸಾಂಪ್ರದಾಯಿಕ ಶೈಲಿಯಲ್ಲೇ ಕೈಯಿಂದಲೇ ತಯಾರಿಸುವ 'ಠಠೇರಾ ಕಲೆ'ಯು ಇನ್ನೂ ಜೀವಂತವಾಗಿರುವುದು ವಿಶೇಷ.
ಅಮೇರ್ನ ಕಚ್ವಾಹ ರಾಜವಂಶದ ಮಹಾರಾಜ ಮಿರ್ಜಾ ರಾಜಾ ಜೈ ಸಿಂಗ್ ಅವರು 1727 ರಲ್ಲಿ ಜೈಪುರ ನಗರವನ್ನು ನಿರ್ಮಿಸಿದಾಗ, ವಿವಿಧ ಕರಕುಶಲಗಳಲ್ಲಿ ನುರಿತ ಕುಶಲಕರ್ಮಿಗಳನ್ನು ಇಲ್ಲಿಗೆ ಕರೆ ತಂದಿದ್ದರು. ಇಲ್ಲಿನ ಟ್ರಿಪೋಲಿಯಾ ಬಜಾರ್ ಬಳಿ ನೆಲೆಸಿರುವ ತಾಮ್ರ, ಹಿತ್ತಾಳೆ ಮತ್ತು ಕಂಚಿನ ಪಾತ್ರೆ ತಯಾರಕರು ಆ ಕುಶಲಕಮರ್ಮಿಗಳಲ್ಲಿ ಒಬ್ಬರು. ಇವರಿಂದಾಗಿ ಈ ಪ್ರದೇಶದವನ್ನು ಇಂದು ಠಠೇರಸ್ ಕಾ ರಸ್ತೆ (ಕಮ್ಮಾರರ ಮಾರ್ಗ) ಎಂದೇ ಕರೆಯಲಾಗುತ್ತಿದೆ.
ನೀವು ಇಲ್ಲಿನ ಕಿರಿದಾದ ಬೀದಿ ಹೋದರೆ, ಪ್ರತಿ ಮನೆಯಿಂದ ಸುತ್ತಿಗೆಯ ಶಬ್ಧ ಕೇಳಿಸುತ್ತದೆ. ಇದು ಈ ಬೀದಿಯ ವಿಶಿಷ್ಟ ಲಕ್ಷಣವಾಗಿದೆ. ಇನ್ನೂ ಅನೇಕ ಕುಟುಂಬಗಳು ತಮ್ಮ ಮನೆಗಳ ಹೊರಗೆ ಕುಳಿತು, ತಾಮ್ರ ಮತ್ತು ಹಿತ್ತಾಳೆ ಪಾತ್ರೆ, ಕಲಶ, ತ್ರಿಶೂಲ ಮತ್ತು ಇತರ ಧಾರ್ಮಿಕ ಉಪಕರಣಗಳು ಹಾಗೂ ದೇವಾಲಯಗಳಿಗೆ ಪಾತ್ರೆಗಳ ತಯಾರಿಕೆಯಲ್ಲಿ ತೊಡಗಿರುತ್ತಾರೆ.
300 ವರ್ಷಗಳಿಂದ ಸಂರಕ್ಷಿಸಲ್ಪಟ್ಟ ಪರಂಪರೆ: ತಾಮ್ರ ಮತ್ತು ಹಿತ್ತಾಳೆ ಪಾತ್ರೆಗಳನ್ನು ತಯಾರಿಸುವ ಮತ್ತು ಅವುಗಳ ಮೇಲೆ ಕೆತ್ತನೆ ಮಾಡುವ ಠಠೇರಾ ಕುಟುಂಬಗಳು ಮೂಲತಃ ಅಮೇರ್ನಲ್ಲಿ ವಾಸಿಸುತ್ತಿದ್ದವು. ಮಹಾರಾಜಾ ಜೈ ಸಿಂಗ್ ಜೈಪುರವನ್ನು ಸ್ಥಾಪಿಸಿದಾಗ, ಈ ಕುಟುಂಬಗಳನ್ನು ಇಲ್ಲಿಗೆ ಕರೆತರಲಾಗಿದೆ. ಅಂದಿನಿಂದ, ಜೈಪುರದ ಠಠೇರಾ ಕುಟುಂಬಗಳು ತಮ್ಮ ಪರಂಪರೆಯನ್ನು ಸಂರಕ್ಷಿಸಿ ಮುಂದುವರಿಸಿವೆ. ಆದಾರೂ, ಇತ್ತೀಚೆಗೆ ಈ ಕುಟುಂಬಗಳಲ್ಲಿ ಕೆಲವರು ತಮ್ಮ ಸಾಂಪ್ರದಾಯಿಕ ಉದ್ಯೋಗ ತ್ಯಜಿಸಿ ಇತರ ವೃತ್ತಿಗಳನ್ನು ಆಯ್ಕೆ ಮಾಡಿಕೊಂಡಿದ್ದಾರೆ.
ಈ ಆಧುನಿಕ ಯಂತ್ರ ಯುಗದಲ್ಲೂ ಇನ್ನೂ ಕೈಯಿಂದಲೇ ಕರಕುಶಲ ಕಸುಬು ಮಾಡಿ ಸೈ ಎನಿಸಿಕೊಳ್ಳುತ್ತಿದ್ದಾರೆ. 'ಬಾಲ್ಯದಿಂದಲೂ ಈ ಕೆಲಸ ಮಾಡುತ್ತಿದ್ದೇನೆ. ನಮ್ಮ ಪೂರ್ವಜನರು ಸಹ ಇದೇ ಕಾಯಕ ಮಾಡಿದರು. ಈಗ ನಾವು ಸಹ ಅದನ್ನೇ ಮುಂದುವರಿಸಿದ್ದೇವೆ. ಇಲ್ಲಿ ಎಲ್ಲಾ ಕೆಲಸಗಳನ್ನು ಕೈಯಿಂದ ಮಾಡುತ್ತೇವೆ. ಯಾವುದೇ ಯಂತ್ರಗಳನ್ನು ಬಳಸುವುದಿಲ್ಲ' ಅಂತಾರೆ ಇಲ್ಲಿನ ಹನುಮಾನ್ ಪಟೇಲ್.
ಈಗ ಕೆಲವೇ ಕುಟುಂಬಗಳಲ್ಲಿ ಠಠೇರಾ ಪರಂಪರೆ: ಜೈಪುರ ನಿರ್ಮಾಣವಾದಾಗ 200 ಕುಟುಂಬಗಳು ಠಠೇರಾ ರಸ್ತೆಯಲ್ಲಿ ವಾಸಿಸುತ್ತಿದ್ದವು. ತಾಮ್ರ, ಹಿತ್ತಾಳೆ ಪಾತ್ರೆ ತಯಾರಿಸುವ ಕೆಲಸ ಮಾತ್ರ ಮಾಡುತ್ತಿದ್ದರು. ಆದರೆ, ಕ್ರಮೇಣ, ಇಲ್ಲಿ ವಾಸಿಸುವ ಕುಟುಂಬಗಳು ತಮ್ಮ ಸಾಂಪ್ರದಾಯಿಕ ವೃತ್ತಿಯನ್ನು ತ್ಯಜಿಸಿ ಇತರ ಕೆಲಸಗಳನ್ನು ಪ್ರಾರಂಭಿಸಿವೆ. ಈಗ ಇಲ್ಲಿ ಕೇವಲ ಏಳು ಅಥವಾ ಎಂಟು ಕುಟುಂಬಗಳು ಮಾತ್ರ ಉಳಿದಿದ್ದು, ಇವರು ಪರಂಪರೆಯನ್ನು ಉಳಿಸುತ್ತಿದ್ದಾರೆ. ತಾಮ್ರ ಮತ್ತು ಹಿತ್ತಾಳೆ ತುಂಬಾ ದುಬಾರಿಯಾಗಿದ್ದರಿಂದ ಕಷ್ಟ ಆಗುತ್ತಿದೆ ಎಂದು ಪ್ರೇಮ್ಚಂದ್ ಠಠೇರಾ ಹೇಳುತ್ತಾರೆ. ಪ್ರೇಮ್ಚಂದ್ ಅವರು 42 ವರ್ಷಗಳಿಂದ ಈ ವೃತ್ತಿಯಲ್ಲಿದ್ದಾರೆ.
ಬೇಕಿದೆ ಉತ್ತೇಜನ: ಗೌತಮ್ ಠಠೇರಾ ಹೇಳುವಂತೆ ಇದು ಕೇವಲ ಉದ್ಯೋಗವಲ್ಲ, ಜೈಪುರದ ಸಾಂಸ್ಕೃತಿಕ ಗುರುತು. ಈ ಸಂಪೂರ್ಣ ಕೆಲಸವು ಕೈಮಗ್ಗ ಉದ್ಯಮದಂತಿದೆ. ಹಿಂದೆ, ಇಲ್ಲಿ ಪಾತ್ರೆಗಳನ್ನು ತಯಾರಿಸಲಾಗುತ್ತಿತ್ತು, ಆದರೆ ಈಗ ಸಂಖ್ಯೆ ಕಡಿಮೆಯಾಗಿದೆ. ಆದಾಗ್ಯೂ, ಸಾಮಾನ್ಯವಾಗ ದೇವಾಲಯಗಳಿಗೆ ಸಂಬಂಧಿಸಿದ ಧಾರ್ಮಿಕ ಚಿಹ್ನೆಗಳನ್ನ ಇಲ್ಲಿ ಹೆಚ್ಚಾಗಿ ತಯಾರಿಸಲಾಗುತ್ತಿದೆ. ಕೆಲವು ಈ ಕಲೆ ಬಿಟ್ಟು ಬೇರೆ ಕೆಲಸಕ್ಕೆ ಹೋಗಿದ್ದಾರೆ. ಆದರೆ ಸರ್ಕಾರ ಈ ಕಲೆಯನ್ನು ಉತ್ತೇಜಿಸಿದರೆ, ಹಲವು ಕುಶಲಕರ್ಮಿಗಳು ತಮ್ಮ ಸಾಂಪ್ರದಾಯಿಕ ವೃತ್ತಿಗೆ ಮರಳುತ್ತಾರೆ ಅನ್ನೋದು ಅವರ ಆಶಯ.