ಬೆಂಗಳೂರು :ಏರ್ಪೋರ್ಟ್ಗೆ ಬಂತು ಬೆತ್ತಲೆ ಫೋಟೋಗಳ ಪಾರ್ಸೆಲ್! ವಾಮಾಚಾರದ ಬಾಕ್ಸ್ನಲ್ಲಿ ಸಿಕ್ಕಿದ್ದೇನು..?

ಬೆಂಗಳೂರು :ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಾಮಾಚಾರ ನಡೆಸಿರುವ ಶಂಕೆ ವ್ಯಕ್ತವಾಗಿದ್ದು, ಪಾರ್ಸೆಲ್ ಒಂದು ಬಂದಿರುವ ಘಟನೆ ಬೆಂಗಳೂರಿನ ದೇವನಹಳ್ಳಿಯಲಲಿ ನಡೆದಿದೆ. ಆರೋಪಿಯು ಜನವರಿ 6ರಿಂದ 22ರ ನಡುವೆ ವಿಮಾನ ನಿಲ್ದಾಣದ ವಿವಿಧೆಡೆ ಓಡಾಡಿ, ಆಡಳಿತ ಮಂಡಳಿ ಕಚೇರಿ ವಿಳಾಸಕ್ಕೆ ಅಂಚೆ ಮೂಲಕ ಬಂದ ಪಾರ್ಸೆಲ್ ಕಳುಹಿಸಿದ್ದಾನೆಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಕಚೇರಿಗೆ ಬಂದ ಬಾಕ್ಸ್ ತೆರೆಯುತ್ತಿದ್ದಂತೆ ಅಧಿಕಾರಿಗಳು ಬೆಚ್ಚಿಬಿದ್ದಿದ್ದಾರೆ. ಪಾರ್ಸೆಲ್ ಒಳಗೆ ಮಹಿಳೆ ಮತ್ತು ಪುರುಷನ ಬೆತ್ತಲೆ ಫೋಟೋಗಳನ್ನು ಇಟ್ಟು, ಅದರ ಸುತ್ತಲೂ ಕೊಳೆತ ಟೊಮ್ಯಾಟೋ ಹಾಗೂ ಹೂವಿನ ಹಾರವನ್ನು ಹಾಕಲಾಗಿತ್ತು. ಅಲ್ಲದೆ ಹಾರದ ಮೇಲೆ ಕಬ್ಬಿಣದ ತುಂಡು ಹಾಗೂ ಟೂತ್ಪೇಸ್ಟ್ ಇಟ್ಟು ಪೂಜೆ ಮಾಡಿದ ರೀತಿಯಲ್ಲಿ ವಸ್ತುಗಳನ್ನು ಜೋಡಿಸಿ ಪಾರ್ಸೆಲ್ ಮಾಡಿರುವುದು ಕಂಡುಬಂದಿದೆ.
ಇದನ್ನು ನೋಡಿ ವಿಮಾನ ನಿಲ್ದಾಣದ ಸಿಬ್ಬಂದಿ ಆತಂಕಕ್ಕೊಳಗಾಗಿದ್ದು, ಕೆಲವರ ಮಾನಸಿಕ ಸ್ಥಿತಿಯ ಮೇಲೂ ಪರಿಣಾಮ ಬೀರಿದೆ ಎಂದು ಹೇಳಲಾಗುತ್ತಿದೆ. ಈ ವಿಚಿತ್ರ ಪಾರ್ಸೆಲ್ ಘಟನೆ ಹಿನ್ನೆಲೆ ಕೆಲ ಸಿಬ್ಬಂದಿ ಕೆಲಸಕ್ಕೆ ಬರಲೂ ಹಿಂಜರಿಯುತ್ತಿರುವ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಹಿನ್ನೆಲೆಯಲ್ಲಿ ಕೆಐಎಬಿ ಸಿಬ್ಬಂದಿ ಸಂಬಂಧಪಟ್ಟವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ದೂರು ನೀಡಿದ್ದಾರೆ.
ದೂರು ಆಧಾರಿಸಿ ಕೆಂಪೇಗಡ ಏರ್ಪೋರ್ಟ್ ಪೊಲೀಸ್ ಸ್ಟೇಷನ್ನಲ್ಲಿ ಪ್ರಕರಣ ದಾಖಲಿಸಲಾಗಿದ್ದು, ಪಾರ್ಸೆಲ್ ಕಳುಹಿಸಿದವರ ಪತ್ತೆಗಾಗಿ ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ವಿಮಾನ ನಿಲ್ದಾಣದ ಭದ್ರತೆ ದೃಷ್ಟಿಯಿಂದಲೂ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಲಾಗಿದೆ.