ಮಂಗಳೂರು : ಗಲ್ಫ್ ಯುದ್ಧಕ್ಕೆ ಗ್ಯಾಸ್ ಟ್ರಬಲ್ ; ಮಂಗಳೂರಿನಲ್ಲಿ ಬಹುತೇಕ ಹೊಟೇಲ್ ಬಂದ್, ಗೃಹ ಬಳಕೆ ಸಿಲಿಂಡರಿಗೂ ಹೊಡೆತ, ಹಾಸ್ಟೆಲ್- ಪಿಜಿಗಳಿಗೆ ಸಂಕಷ್ಟ, ಶಿಕ್ಷಣ ಸಂಸ್ಥೆಗಳು ನಡೆಯುತ್ವಾ ?

ಮಂಗಳೂರು: ವಾಣಿಜ್ಯ ಉದ್ದೇಶದ ಗ್ಯಾಸ್ ಸಿಲಿಂಡರ್ ಸಮಸ್ಯೆ ತಾರಕಕ್ಕೆ ಏರುತ್ತಿದ್ದಂತೆ ಕರಾವಳಿಯಲ್ಲಿ ಗೃಹ ಬಳಕೆಯ ಸಿಲಿಂಡರ್ ಗಳ ಕೊರತೆಯೂ ಕಾಡಿದೆ. ಗಲ್ಫ್ ಯುದ್ಧದ ಪರಿಣಾಮ ಗ್ಯಾಸ್ ಸಿಲಿಂಡರ್ ಪೂರೈಕೆಯಲ್ಲಿ ತೀವ್ರ ಹೊಡೆತ ಕೊಟ್ಟಿದ್ದು, ಕಳೆದ ಎರಡು ದಿನಗಳಿಂದ ಗೃಹ ಬಳಕೆಯ ಸಿಲಿಂಡರ್ನಲ್ಲೂ ಸಮಸ್ಯೆ ಕಾಣಿಸಿಕೊಂಡಿದೆ.
ಮಂಗಳೂರಿನ ಸುರತ್ಕಲ್, ಬೈಕಂಪಾಡಿಯಿಂದ ಎಚ್ಪಿಸಿಎಲ್, ಐಒಸಿಎಲ್ ಬಿಪಿಸಿಎಲ್ನಂತಹ ಪ್ರಮುಖ ಗ್ಯಾಸ್ ಕಂಪನಿಗಳ ಘಟಕಗಳಿದ್ದು ಬಹುತೇಕ ಇಡೀ ರಾಜ್ಯಕ್ಕೆ ಇಲ್ಲಿಂದಲೇ ಗ್ಯಾಸ್ ಸಿಲಿಂಡರ್ ಪೂರೈಕೆಯಾಗುತ್ತದೆ. ಆದರೆ ಕಮರ್ಷಿಯಲ್ ಸಿಲಿಂಡರ್ ಪೂರೈಕೆಯ ಮೇಲೆ ಕೇಂದ್ರ ಸರ್ಕಾರ ನಿಯಂತ್ರಣ ಹೇರಿದ್ದು ಹೊಟೇಲ್ ವ್ಯವಸ್ಥೆಗೆ ದೊಡ್ಡ ಪೆಟ್ಟು ಬಿದ್ದಿದೆ. ಮಂಗಳೂರು, ಬೆಂಗಳೂರು, ಮೈಸೂರು ಸೇರಿದಂತೆ ಬಹುತೇಕ ನಗರಗಳಲ್ಲಿ ಹೆಚ್ಚಿನ ಹೊಟೇಲ್ಗಳು ಬಂದ್ ಆಗಿವೆ. ಇದೇ ವೇಳೆ, ಗೃಹ ಬಳಕೆಯ ಸಿಲಿಂಡರ್ ಗಳನ್ನೂ ನಿಯಂತ್ರಿಸಲಾಗಿದ್ದು ಈ ಹಿಂದೆ 21 ದಿನಕ್ಕೆ ಬುಕ್ಕಿಂಗ್ ಮಾಡಬಹುದಾಗಿದ್ದ ಅವಧಿಯನ್ನು 30 ದಿನಕ್ಕೆ ಒಂದೇ ಸಿಲಿಂಡರ್ ಎಂದು ನಿಯಂತ್ರಣ ಹೇರಲಾಗಿದೆ. ಈ ನಡುವೆ, ಗ್ಯಾಸ್ ಬುಕ್ಕಿಂಗ್ ಮಾಡಿದರೂ ಬಿಲ್ ಜನರೇಶನ್ ಆಗುತ್ತಿಲ್ಲ, ಪೂರೈಕೆ ಆಗುತ್ತಿಲ್ಲ ಎಂದು ಸಾರ್ವಜನಿಕರು ಸಮಸ್ಯೆ ಹೇಳತೊಡಗಿದ್ದಾರೆ.

ಹಾಸ್ಟೆಲ್- ಪಿಜಿಗಳಿಗೆ ಸಂಕಷ್ಟ
ಮಂಗಳೂರು ನಗರ ಭಾಗದಲ್ಲಿ ಸಾಕಷ್ಟು ಶಿಕ್ಷಣ ಸಂಸ್ಥೆಗಳು, ಹಾಸ್ಟೆಲ್, ಪಿಜಿಗಳಿದ್ದು ಎಲ್ಲದಕ್ಕೂ ವಾಣಿಜ್ಯ ಬಳಕೆಯ ಸಿಲಿಂಡರ್ ಪೂರೈಕೆಯಾಗುತ್ತಿದೆ. ಆದರೆ ಕಂಪನಿಗಳು ವಾಣಿಜ್ಯ ಬಳಕೆ ಸಿಲಿಂಡರ್ಗಳ ಪೂರೈಕೆಯನ್ನು ನಿಲ್ಲಿಸಿದ್ದು, ಹಾಸ್ಟೆಲ್ ನಡೆಸುವುದಾ, ಬಿಡುವುದಾ ಎನ್ನುವ ಜಿಜ್ಞಾಸೆ ಎದುರಾಗಿದೆ. ಇದೇ ವೇಳೆ, ಪಿಜಿಗಳೂ ಮತ್ತಷ್ಟು ಸಂಕಷ್ಟಕ್ಕೆ ಗುರಿಯಾಗಿದೆ. ಬಿಜೈ ಬಳಿಯ ಪಿಜಿ ಮಾಲೀಕರೊಬ್ಬರು ಹೇಳುವಂತೆ, ಅಡುಗೆ ಮಾಡಲು ಗ್ಯಾಸ್ ಸಮಸ್ಯೆ ಕಾಣಿಸಿಕೊಂಡಿದೆ. ಈಗ ಸಣ್ಣ ಗಾತ್ರದ ಸಿಲಿಂಡರ್ ನೀಡಿದ್ದಾರೆ. ನಮಗೆ ಎರಡು ದಿನಕ್ಕೂ ಇದು ಸಾಕಾಗಲ್ಲ. ಬಹಳ ಕಷ್ಟದ ಸ್ಥಿತಿಯಲ್ಲಿದ್ದೇವೆ ಎಂದು ಹೇಳುತ್ತಾರೆ.
ಇದೇ ವೇಳೆ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 30ಕ್ಕೂ ಅಧಿಕ ಗ್ಯಾಸ್ ಡೀಲರ್ಗಳಲ್ಲಿ ವಾಣಿಜ್ಯ ಬಳಕೆಯ ಗ್ಯಾಸ್ ಸಿಲಿಂಡರ್ಗಳು ಇಲ್ಲ. ಗ್ಯಾಸ್ ಪೂರೈಕೆಯಲ್ಲೇ ಕೊರತೆ ಎದುರಾಗಿದ್ದು ಡೀಲರುಗಳು ಸಾರ್ವಜನಿಕರ ಹಿಡಿಶಾಪಕ್ಕೆ ಗುರಿಯಾಗಿದ್ದಾರೆ. ಬೈಕಂಪಾಡಿಯ ಗ್ಯಾಸ್ ಪೂರೈಕೆ ಪ್ಲಾಂಟ್ ನಿಂದಲೇ ಸಿಲಿಂಡರ್ ಸರಬರಾಜು ಆಗುತ್ತಿಲ್ಲ. ನಾವೇನು ಮಾಡೋದು ಎಂದು ಡೀಲರುಗಳು ಪ್ರಶ್ನಿಸುತ್ತಾರೆ.


ಗ್ಯಾಸ್ ಇಲ್ಲದೆ ಹೊಟೇಲ್ ಸಾಧ್ಯವಿಲ್ಲ !
ದಕ್ಷಿಣ ಕನ್ನಡ ಜಿಲ್ಲಾ ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ಕುಡ್ಪಿ ಜಗದೀಶ್ ಶೆಣೈ ಹೇಳುವಂತೆ, ಗ್ಯಾಸ್ ಪೂರೈಕೆ ಇಲ್ಲದೇ ಹೋಟೆಲ್ ನಡೆಸುವುದೇ ಕಷ್ಟ. ಕಳೆದ ನಾಲ್ಕು ದಿನಗಳಿಂದ ಒಂದೂ ಗ್ಯಾಸ್ ಸಿಲಿಂಡರ್ ಸಿಕ್ಕಿಲ್ಲ. ಇನ್ನು ಮೂರು ದಿನಗಳಲ್ಲಿ ಬಹುತೇಕ ಹೋಟೆಲ್ಗಳನ್ನು ಮುಚ್ಚುವ ಸ್ಥಿತಿಗೆ ಬರಲಿದ್ದೇವೆ. ಬಾಯ್ಲರ್ ಇದ್ದರೂ ಕೂಡ ಅದಕ್ಕೆ ಗ್ಯಾಸ್ ಬೇಕು. ಪ್ರಮುಖ ತಿಂಡಿಗಳನ್ನು ಮಾಡಲು ಗ್ಯಾಸ್ ಇಲ್ಲದೇ ಮಾಡಲು ಸಾಧ್ಯವಿಲ್ಲ ಎನ್ನುತ್ತಾರೆ.
ವಾಣಿಜ್ಯ ಸಿಲಿಂಡರ್ ಪೂರೈಕೆ ಸ್ಥಗಿತ ಮಾಡಲಾಗಿದೆ. ಗೃಹ ಬಳಕೆ ಸಿಲಿಂಡರಿನಲ್ಲೂ ಸಮಸ್ಯೆ ಕಾಣಿಸಿಕೊಂಡಿದೆ. ಬಿಲ್ ಜನರೇಟ್ ಆಗ್ತಾ ಇಲ್ಲ. ದಿನಕ್ಕೆ 300 ಸಿಲಿಂಡರ್ ಬದಲು ಬರೀ 150 ಬರ್ತಾ ಇದೆ. ಐದು ದಿನಗಳ ಹಿಂದಿನ ಬುಕ್ಕಿಂಗ್ ಕ್ಲಿಯರ್ ಮಾಡಲಾಗುತ್ತಿದೆ. ಹೊಸ ಬುಕ್ಕಿಂಗ್ ನೀಡುವುದು ಬಹಳ ಕಷ್ಟವಾಗಿದೆ" ಎನ್ನುತ್ತಾರೆ, ಗ್ಯಾಸ್ ಡೀಲರ್ ಧನರಾಜ್ ಮಂಗಳೂರು.
ಮಾಹಿತಿ ಪ್ರಕಾರ, ಗಲ್ಫ್ ಯುದ್ಧ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಕೇಂದ್ರ ಸರ್ಕಾರ ವಾಣಿಜ್ಯ ಬಳಕೆಯ ಸಿಲಿಂಡರ್ ಮೇಲೆ ದೇಶಾದ್ಯಂತ ನಿಯಂತ್ರಣ ಹೇರಿದೆ. ಜನಸಾಮಾನ್ಯರ ಬಳಕೆಯ ಸಿಲಿಂಡರ್ ಕೊರತೆ ಆಗಬಾರದೆಂಬ ನಿಟ್ಟಿನಲ್ಲಿ ಕಮರ್ಷಿಯಲ್ ಬಳಕೆಗೆ ಮಿತಿ ಹೇರಲಾಗಿದೆ. ಈ ಬಗ್ಗೆ ಅಧಿಕೃತ ಮಾಹಿತಿ ಇಲ್ಲದಿದ್ದರೂ, ಯುದ್ಧ ಇನ್ನೊಂದು ತಿಂಗಳ ಕಾಲ ಮುಂದುವರಿದರೆ ಗ್ಯಾಸ್ ಸಿಲಿಂಡರ್ ಕೊರತೆ ತೀವ್ರವಾಗಿ ಕಾಡಲಿದೆ. ನಗರ ಭಾಗದ ಜನರು ಸಿಲಿಂಡರ್ ಇಲ್ಲದೆ ತತ್ತರಿಸುವ ಸ್ಥಿತಿ ಬರಬಹುದು. ಇದಕ್ಕಾಗಿ ಈಗಲೇ ವಾಣಿಜ್ಯ ಬಳಕೆಯ ಸಿಲಿಂಡರ್ ಪೂರೈಕೆಗೆ ಮಿತಿ ಹೇರಲಾಗಿದೆ. ಇದರಿಂದ ಹೊಟೇಲ್, ರೆಸ್ಟೋರೆಂಟ್ ಇನ್ನಿತರ ವಾಣಿಜ್ಯ, ವ್ಯವಹಾರಗಳಿಗೆ ದೊಡ್ಡ ಮಟ್ಟದ ಹೊಡೆತ ಬಿದ್ದಿದೆ.