ಮಹಾರಾಷ್ಟ್ರ :ಬಿರಿಯಾನಿ ಸೇವಿಸಿದ ಬಳಿಕ ಕಲ್ಲಂಗಡಿ ಹಣ್ಣು ತಿಂದ ಒಂದೇ ಕುಟುಂಬದ ನಾಲ್ವರು ಸಾವುbiriyani watermelon eat ofter death
ಮುಂಬೈ (ಮಹಾರಾಷ್ಟ್ರ): ದಕ್ಷಿಣ ಮುಂಬೈನಲ್ಲಿ ಒಂದೇ ಕುಟುಂಬದ ನಾಲ್ವರು ಸದಸ್ಯರು ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದಾರೆ. ಬಿರಿಯಾನಿ ತಿಂದ ನಂತರ ಕಲ್ಲಂಗಡಿ ಹಣ್ಣು ಸೇವಿಸಿದ್ದರಿಂದ ಫುಡ್ ಪಾಯಿಸನ್ ಆಗಿರುವುದು ಈ ಸಾವಿಗೆ ಕಾರಣವಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಮೃತರಲ್ಲಿ ದಂಪತಿ ಹಾಗೂ ಅವರ ಇಬ್ಬರು ಅಪ್ರಾಪ್ತ ವಯಸ್ಸಿನ ಪುತ್ರಿಯರು ಸೇರಿದ್ದಾರೆ ಎಂದು ಪೊಲೀಸರು ಖಚಿತಪಡಿಸಿದ್ದಾರೆ.
ಘಟನೆಯ ವಿವರ: ಪೊಲೀಸರು ನೀಡಿದ ಅಧಿಕೃತ ಮಾಹಿತಿಯ ಪ್ರಕಾರ, ಅಬ್ದುಲ್ಲಾ (40), ಅವರ ಪತ್ನಿ ನಸ್ರೀನ್ (35), ಮತ್ತು ಪುತ್ರಿಯರಾದ ಝೈನಾಬ್ (13) ಹಾಗೂ ಆಯೆಷಾ (16) ಮೃತರು. ಇತ್ತೀಚೆಗೆ ಈ ಕುಟುಂಬವು ತಮ್ಮ ಮನೆಯಲ್ಲಿ ಸಣ್ಣ ಸಮಾರಂಭವೊಂದನ್ನು ಏರ್ಪಡಿಸಿತ್ತು. ಈ ವೇಳೆ ಐವರು ಅತಿಥಿಗಳೊಂದಿಗೆ ಸೇರಿ ಎಲ್ಲರೂ ಬಿರಿಯಾನಿ ಸೇವಿಸಿದ್ದರು. ಅತಿಥಿಗಳು ತೆರಳಿದ ನಂತರ, ಕುಟುಂಬದ ನಾಲ್ವರು ಸದಸ್ಯರು ಕಲ್ಲಂಗಡಿ ಹಣ್ಣನ್ನು ತಿಂದಿದ್ದರು. ಅದರ ಬೆನ್ನಲ್ಲೇ, ಅವರಿಗೆ ವಾಂತಿ ಮತ್ತು ತಲೆಸುತ್ತು ಕಾಣಿಸಿಕೊಂಡಿತ್ತು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಎಪ್ರಿಲ್ 25 ರಂದು ರಾತ್ರಿ ಈ ಕುಟುಂಬವು ಸಂಬಂಧಿಕರೊಂದಿಗೆ ಔತಣಕೂಟ ಮುಗಿಸಿತ್ತು. ಊಟದ ನಂತರ ಸಂಬಂಧಿಕರು ತಮ್ಮ ಮನೆಗಳಿಗೆ ಮರಳಿದ್ದರು. ಆದರೆ, ಅಂದು ಮಧ್ಯರಾತ್ರಿ 1 ರಿಂದ 1:30 ರ ಸುಮಾರಿಗೆ ಕುಟುಂಬದ ಸದಸ್ಯರು ಕಲ್ಲಂಗಡಿ ಹಣ್ಣನ್ನು ಸೇವಿಸಿದ್ದರು. ಮರುದಿನ ಬೆಳಗ್ಗೆ ನಾಲ್ವರಿಗೂ ವಾಂತಿ ಮತ್ತು ಭೇದಿ ಕಾಣಿಸಿಕೊಂಡಿತ್ತು. ತಕ್ಷಣ ಅವರನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಯಿತು. ನಂತರ ಹೆಚ್ಚಿನ ಚಿಕಿತ್ಸೆಗಾಗಿ ಜೆ.ಜೆ. ಆಸ್ಪತ್ರೆಗೆ ವರ್ಗಾಯಿಸಲಾಯಿತು.
ದುರದೃಷ್ಟವಶಾತ್, ಚಿಕಿತ್ಸೆ ಫಲಕಾರಿಯಾಗದೆ ನಾಲ್ವರೂ ಸಾವನ್ನಪ್ಪಿದ್ದಾರೆ. ಮೃತದೇಹಗಳ ಮರಣೋತ್ತರ ಪರೀಕ್ಷೆ ನಡೆಸಲಾಗಿದ್ದು, ಸಾವಿಗೆ ನಿಖರವಾದ ಕಾರಣವೇನು ಎಂಬುದು ಹಿಸ್ಟೋಪಾಥಾಲಜಿ ವರದಿ ಬಂದ ನಂತರವಷ್ಟೇ ತಿಳಿಯಲಿದೆ. ಈ ಮಧ್ಯೆ, ಜೆ.ಜೆ. ಮಾರ್ಗ್ ಪೊಲೀಸ್ ಠಾಣೆಯಲ್ಲಿ ಅಸಹಜ ಸಾವು ಎಂದು ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಉಪ ಪೊಲೀಸ್ ಕಮಿಷನರ್ (ಡಿಸಿಪಿ) ಪ್ರವೀಣ್ ಮುಂಡೆ ತಿಳಿಸಿದ್ದಾರೆ.
ಕಲ್ಲಂಗಡಿ ಹಣ್ಣು ಸೇವನೆ: ಕಲ್ಲಂಗಡಿಯಲ್ಲಿರುವ ಪ್ರೋಟೀನ್ಗಳು ಕೆಲವು ವ್ಯಕ್ತಿಗಳಲ್ಲಿ ಅಲರ್ಜಿಯ ಪ್ರತಿಕ್ರಿಯೆಗಳನ್ನು ಉಂಟುಮಾಡಬಹುದು. ಈ ಸ್ಥಿತಿಯನ್ನು 'ಲ್ಯಾಟೆಕ್ಸ್ ಫ್ರೂಟ್ ಸಿಂಡ್ರೋಮ್' ಎಂದು ಕರೆಯಲಾಗುತ್ತದೆ. ಇದು ಕಲ್ಲಂಗಡಿಯಲ್ಲಿ ಕಂಡುಬರುವ ಪ್ರೊಫಿಲಿನ್ಗಳು ಹಾಗೂ ಇತರ ಪ್ರೋಟೀನ್ಗಳಿಂದ ಉಂಟಾಗುತ್ತದೆ.
ಆರೋಗ್ಯವಂತ ವ್ಯಕ್ತಿಗಳಿಗೆ ಬೇಸಿಗೆಯಲ್ಲಿ ಕಲ್ಲಂಗಡಿ ಅತ್ಯುತ್ತಮ ಆಯ್ಕೆಯಾಗಿದೆ. ಇದು ನಿರ್ಜಲೀಕರಣವನ್ನು ತಡೆಯಲು ಸಹಾಯ ಮಾಡುತ್ತದೆ. ಆರೋಗ್ಯ ಪ್ರಯೋಜನಗಳನ್ನು ನೀಡುತ್ತದೆ. ಮೂತ್ರಪಿಂಡದ ಅಸ್ವಸ್ಥತೆಗಳು ಇಲ್ಲವೇ ತೀವ್ರ ಜೀರ್ಣಕಾರಿ ಸಮಸ್ಯೆಗಳಿರುವ ವ್ಯಕ್ತಿಗಳು ಕಲ್ಲಂಗಡಿ ಸೇವಿಸುವುದು ಸೂಕ್ತವೇ ಎಂದು ನಿರ್ಧರಿಸಲು ವೈದ್ಯರನ್ನು ಸಂಪರ್ಕಿಸಬೇಕು ಎಂಬುದು ತಜ್ಞರ ಸಲಹೆಯಾಗಿದೆ.