ಉತ್ತರ ಪ್ರದೇಶ :ವಿಚ್ಛೇದನ ಕಳಂಕವಲ್ಲ': ಮಗಳನ್ನು ಡೋಲು, ನಗಾರಿಯೊಂದಿಗೆ ಮೆರವಣಿಗೆಯಲ್ಲಿ ಮನೆಗೆ ಕರೆತಂದ ನ್ಯಾಯಾಧೀಶ ತಂದೆ..!!
ಉತ್ತರ ಪ್ರದೇಶ: ನಿವೃತ್ತ ನ್ಯಾಯಧೀಶರೊಬ್ಬರು ತಮ್ಮ ಮಗಳಿಗೆ ಡಿವೋರ್ಸ್ ಸಿಕ್ಕ ಬಳಿಕ ಆಕೆಯನ್ನು ಸಂಭ್ರಮದಿಂದ ಮನೆಗೆ ಬರಮಾಡಿಕೊಂಡಿದ್ದು, ವಿಚ್ಛೇದನ ಎಂಬುದು ಕಳಂಕ ಅಲ್ಲ ಎಂಬ ಮಹತ್ವದ ಸಂದೇಶ ಸಾರಿದ್ದಾರೆ.
ಮೌನದ ಬದಲು ಸಂಭ್ರಮದಿಂದ ವಿಚ್ಛೇದನವನ್ನು ಸ್ವಾಗತಿಸಿದ ಈ ಕುಟುಂಬ, ಸಿಹಿ ಹಂಚಿ, ಮಗಳಿಗೆ ಹೂ ಮಾಲೆ ಹಾಕಿ ಡೋಲು-ನಗಾರಿಗಳೊಂದಿಗೆ ಅದ್ಧೂರಿಯಾಗಿ ಸ್ವಾಗತಿಸಿತು. ಈ ಕ್ಷಣಗಳನ್ನು ನೆನಪಿನಲ್ಲಿಡಲು ತಂದೆ ಮತ್ತು ಕುಟುಂಬದವರು 'I LOVE MY DAUGHTER' ಎಂಬ ಕಪ್ಪು ಬಣ್ಣದ ಟೀ ಶರ್ಟ್ ಧರಿಸಿದ್ದರು.
ನನ್ನ ಏಕೈಕ ಪುತ್ರಿ ಪ್ರಣೀತಾ ಶರ್ಮಾಗೆ ಉತ್ತರ ಪ್ರದೇಶದ ಮೀರತ್ನ ಕೌಟುಂಬಿಕ ನ್ಯಾಯಾಲಯ ವಿಚ್ಛೇದನ ನೀಡಿದೆ" ಎಂದು ತಂದೆ ಹಾಗು ನಿವೃತ್ತ ನ್ಯಾಯಾಧೀಶರಾದ ಜ್ಞಾನೇಂದ್ರ ಶರ್ಮಾ ಹೇಳಿದರು.
ನ್ಯಾಯಾಲಯದಿಂದ ಮನೆಯವರೆಗೆ ಮಗಳನ್ನು ಹಾಡು ಮತ್ತು ನೃತ್ಯದೊಂದಿಗೆ ಕರೆತರಲಾಯಿತು. ಮೆರವಣಿಗೆಯಯಲ್ಲಿ ಕುಟುಂಬಸ್ಥರು ಧರಿಸಿದ್ದ ಕಪ್ಪು ಟಿ ಶರ್ಟ್ನಲ್ಲಿ ಪ್ರಣೀತಾ ಅವರ ಪೋಟೋ ಜೊತೆಗೆ "ನಾನು ನನ್ನ ಮಗಳನ್ನು ಪ್ರೀತಿಸುತ್ತೇನೆ" ಎಂದು ಮುದ್ರಿಸಲಾಗಿತ್ತು.
8 ವರ್ಷಗಳ ಹಿಂದೆ ವಿವಾಹ: ಮಗಳ 8 ವರ್ಷಗಳ ನೋವು ಹಾಗೂ ಗೌರವಕ್ಕೆ ಸಂದ ವಿಜಯವಿದು ಎಂದು ತಂದೆ ತಮ್ಮ ಭಾವನೆಯನ್ನು ವ್ಯಕ್ತಪಡಿಸಿದರು. ಪ್ರಣೀತಾ ಮದುವೆ 2018ರಲ್ಲಿ ಶಹಜಹಾನ್ಪುರದ ನಿವಾಸಿ ಹಾಗೂ ಪ್ರಸ್ತುತ ಜಲಂಧರ್ನಲ್ಲಿ ನಿಯೋಜಿತರಾಗಿರುವ ಸೇನೆಯಲ್ಲಿ ಮೇಜರ್ ಆಗಿರುವ ಗೌರವ್ ಅಗ್ನಿಹೋತ್ರಿ ಅವರೊಂದಿಗೆ ನಡೆದಿತ್ತು. ಬಹಳ ಆಸೆ, ಅಷ್ಟೇ ವಿಜೃಂಭಣೆಯಿಂದ ಮಗಳನ್ನು ಮದುವೆ ಮಾಡಿಕೊಟ್ಟಿದ್ದರು. ಆದರೆ ವಿವಾಹವಾದ ಕೆಲವೇ ದಿನಗಳಲ್ಲಿ ಕಿರುಕುಳ ಆರಂಭವಾಗಿತ್ತು. ಗಂಡು ಮಗು ಜನಿಸಿದರೂ ಪರಿಸ್ಥಿತಿ ಸರಿಹೋಗಲಿಲ್ಲ. ಸುಮಾರು ಏಳು ವರ್ಷಗಳ ಕಾಲ ಅತ್ತೆ ಮನೆಯಲ್ಲಿ ಮಾನಸಿಕ ಮತ್ತು ಭಾವನಾತ್ಮಕ ಕಿರುಕುಳವನ್ನು ಸಹಿಸಿಕೊಂಡಿದ್ದಾಗಿ ಪ್ರಣೀತಾ ತಿಳಿಸಿದ್ದಾರೆ.
ಸಮಾಜಕ್ಕೊಂದು ಶ್ರೇಷ್ಠ ಸಂದೇಶ: ಮಗಳ ನಿರ್ಧಾರ ಹಾಗೂ ವಿಚ್ಛೇದನದ ತೀರ್ಪಿನಿಂದ ಭಾವೋದ್ವೇಗಕ್ಕೊಳಗಾದ ತಂದೆ, ಸಮಾಜಕ್ಕೆ ಬಲವಾದ ಸಂದೇಶ ನೀಡಿದ್ದಾರೆ.
ಹೆಣ್ಣೆಂದರೆ ಯಾವುದೋ ವಸ್ತುವಲ್ಲ. ಆಕೆ ತನ್ನ ಗಂಡನ ಮನೆಯಲ್ಲಿ ಸಂತಸದಿಂದ ಜೀವನ ನಡೆಸುತ್ತಿಲ್ಲ ಎಂದಾದರೆ ಅವಳನ್ನು ಅಲ್ಲಿಯೇ ಇರುವಂತೆ ಬಲವಂತ ಮಾಡುವುದು ತಪ್ಪು. ಅವಳನ್ನು ಮತ್ತೆ ಆಕೆಯ ತವರು ಮನೆಗೆ ಗೌರವದಿಂದ ಮರಳಿ ಮನೆಗೆ ಕರೆತರುವುದು ಪ್ರತಿಯೊಬ್ಬ ತಂದೆಯ ಕರ್ತವ್ಯ. ನಾವು ಜೀವನಾಂಶ ಅಥವಾ ಬೇರೇನನ್ನೂ ಬಯಸಲಿಲ್ಲ. ನನ್ನ ಮಗಳನ್ನು ಮರಳಿ ಕರೆತಂದೆ. - ಜ್ಞಾನೇಂದ್ರ ಶರ್ಮಾ, ತಂದೆ
ಮಹಿಳೆಯರಿಗೆ ಪ್ರಣೀತಾ ಸಲಹೆ: "ಮೌನ ಮುರಿಯಿರಿ, ಸುಮ್ಮನಿರಬೇಡಿ. ಯಾವುದೇ ರೀತಿಯ ಕಿರುಕುಳವನ್ನು ಸಹಿಸಿಕೊಂಡು ಸುಮ್ಮನಿರುವುದು ನಮಗೆ ನಾವೇ ಮಾಡಿಕೊಳ್ಳುವ ಅನ್ಯಾಯ. ಮದುವೆಗೂ ಮುನ್ನ ಆರ್ಥಿಕವಾಗಿ ಸ್ವತಂತ್ರರಾಗಿ, ಸದೃಢರಾಗಿ" ಎಂದು ಪ್ರಣೀತಾ ಶರ್ಮಾ ಕರೆ ನೀಡಿದರು.
ಈ ಎಲ್ಲಾ ಬದಲಾವಣೆಯ ಬಳಿಕ ಪ್ರಣೀತಾ ತಮ್ಮ ಕುಟುಂಬವನ್ನು ದೊಡ್ಡ ಶಕ್ತಿ ಎಂದು ಬಣ್ಣಿಸಿದರು. ಇವರು 2022ರಲ್ಲಿ ಅಪಘಾತದಲ್ಲಿ ತಮ್ಮ ಸಹೋದರನನ್ನು ಕಳೆದುಕೊಂಡಿದ್ದರು. ಈಗ ತನ್ನ ವಿಚ್ಛೇದನ. ಇಷ್ಟಾದರೂ ಕುಟುಂಬ ತನ್ನೊಂದಿಗೆ ಬೆಂಬಲವಾಗಿ ಇರುವುದಕ್ಕೆ ಪ್ರಣೀತಾ ಸಾರ್ಥಕ ಭಾವನೆ ವ್ಯಕ್ತಪಡಿಸಿದರು.
ಮನೋವಿಜ್ಞಾನದಲ್ಲಿ ಸ್ನಾತಕೋತ್ತರ ಪದವೀಧರೆಯಾದ ಪ್ರಣೀತಾ, ತೇಜ್ಗಢಿಯಲ್ಲಿರುವ ಪ್ರಣವ್ ವಶಿಷ್ಠ ನ್ಯಾಯಾಂಗ ಅಕಾಡೆಮಿಯಲ್ಲಿ ಹಣಕಾಸು ನಿರ್ದೇಶಕಿಯಾಗಿದ್ದಾರೆ.