Mangalore: ಪೊಲೀಸ್ ಕಸ್ಟಡಿಯಲ್ಲಿ ಸಾವಿಗೀಡಾದ ಕಳವು ಪ್ರಕರಣ ಆರೋಪಿ!
Friday, February 18, 2022
ಮಂಗಳೂರು: ಕಳವು ಪ್ರಕರಣದ ಆರೋಪಿಯೋರ್ವ ಪೊಲೀಸ್ ಕಸ್ಟಡಿಯಲ್ಲಿಯೇ ಮೃತಪಟ್ಟ ಘಟನೆ ಮಂಗಳೂರಿನಲ್ಲಿ ಬಂದರು ಪೊಲೀಸ್ ಠಾಣೆಯಲ್ಲಿ ನಡೆದಿದೆ. ಉರ್ವ ನಿವಾಸಿ ರಾಜೇಶ್ (30) ಮೃತ ಆರೋಪಿ.
ಇಂದು ಬೆಳಗ್ಗೆ ನಗರದ ಜ್ಯೋತಿ ವೃತ್ತದ ಬಳಿ ಸ್ಮಾರ್ಟ್ ಸಿಟಿ ಕಾಮಗಾರಿಯ ಕಬ್ಬಿಣದ ಸರಳುಗಳನ್ನು ಇಬ್ಬರು ಕದ್ದೊಯ್ಯುತ್ತಿದ್ದರು. ಈ ಸಂದರ್ಭ ಗಸ್ತಿನಲ್ಲಿದ್ದ ಪೊಲೀಸರು ಇಬ್ಬರನ್ನೂ ವಶಕ್ಕೆ ಪಡೆದು ಬಂದರು ಠಾಣೆಯಲ್ಲಿ ಕೂರಿಸಿದ್ದಾರೆ. ಆದರೆ, ಸಂಜೆ ವೇಳೆಗೆ ಓರ್ವ ಆರೋಪಿ ರಾಜೇಶ್ ಗೆ ತೀವ್ರ ಎದೆ ನೋವು ಕಾಣಿಸಿಕೊಂಡಿದೆ.ತಕ್ಷಣ ಪೊಲೀಸರು ವೆನ್ಲಾಕ್ ಆಸ್ಪತ್ರೆಗೆ ಗೆ ರಾಜೇಶ್ ನನ್ನು ದಾಖಲಿಸಿದ್ದಾರೆ. ತಪಾಸಣೆ ನಡೆಸಿದ ವೈದ್ಯರು ಆತ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ.
ಸುದ್ದಿ ತಿಳಿಯುತ್ತಿದ್ದಂತೆ ಆಸ್ಪತ್ರೆಗೆ ನಗರ ಪೊಲೀಸ್ ಕಮಿಷನರ್ ಎನ್.ಶಶಿಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿ ಆಸ್ಪತ್ರೆ ವೈದ್ಯರು ಮತ್ತು ಮೃತ ರಾಜೇಶ್ ಕುಟುಂಬಸ್ಥರಿಂದ ಮಾಹಿತಿ ಪಡೆದಿದ್ದಾರೆ.
ನಂತರ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಕಮಿಷನರ್ "ಘಟನೆ ಬಗ್ಗೆ ನಿಷ್ಪಕ್ಷಪಾತ ತನಿಖೆ ನಡೆಸಲಾಗುತ್ತದೆ. ಠಾಣೆಯ ಸಿಸಿ ಕ್ಯಾಮೆರಾದಲ್ಲಿ ಎಲ್ಲ ದಾಖಲೆ ಲಭ್ಯವಿರುತ್ತವೆ. ಲಾಕಪ್ ನ ಮುಂಭಾಗವೂ ಸಿಸಿ ಕ್ಯಾಮೆರಾಗಳಿವೆ. ಉತ್ತರ ವಿಭಾಗ ACP ಮಹೇಶ್ ಕುಮಾರ್ ನೇತೃತ್ವದಲ್ಲಿ ತನಿಖೆಗೆ ಆದೇಶಿಸಿದ್ದೇನೆ ಎಂದರು.