![Mangalore:ತೊಕ್ಕೊಟ್ಟು ಕಾಪಿಕಾಡ್ : ಹೆದ್ದಾರಿಯನ್ನು ಅತಿಕ್ರಮಿಸಿದ ಬಾರ್ ! Mangalore:ತೊಕ್ಕೊಟ್ಟು ಕಾಪಿಕಾಡ್ : ಹೆದ್ದಾರಿಯನ್ನು ಅತಿಕ್ರಮಿಸಿದ ಬಾರ್ !](https://blogger.googleusercontent.com/img/b/R29vZ2xl/AVvXsEij1tDD8t6Us80DVL0TF4iJ3Q7YK6mmxW8I-oO7yoJDNdSEa_iM_AAw8BGPwRiYw1RSGkYxTTnURGFhfiQsvDqtoEAIMGrbhp8Sxsy7o1u4WJ6lHOzPL79IGBrBP66TcNg_un5PYMYmulk/s1600/1667014815618834-0.png)
Mangalore:ತೊಕ್ಕೊಟ್ಟು ಕಾಪಿಕಾಡ್ : ಹೆದ್ದಾರಿಯನ್ನು ಅತಿಕ್ರಮಿಸಿದ ಬಾರ್ !
Friday, October 28, 2022
ಮಂಗಳೂರು : ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಉಳ್ಳಾಲ ತಾಲೂಕಿನ ತೊಕ್ಕೊಟ್ಟು ಕಾಪಿಕಾಡ್ ನಲ್ಲಿ ಬಾರ್ ಆಂಡ್ ರೆಸ್ಟೋರೆಂಟ್ ಒಂದು ಹೆದ್ದಾರಿಯನ್ನು ಅತಿಕ್ರಮಿಸಿಕೊಂಡಿದೆ.
ಹೆದ್ದಾರಿಯನ್ನು ಅತಿ ಕ್ರಮಿಸಿ
ತಮ್ಮ ಗ್ರಾಹಕರಿಗೆ ಪಾರ್ಕಿಂಗ್ ಸ್ಥಳವಾಗಿ ಹೆದ್ದಾರಿಯ ಜಾಗಕ್ಕೆ ಇಂಟರ್ ಲಾಕ್ ಅಳವಡಿಸಿಕೊಂಡಿದೆ.
ಪಾದಚಾರಿಗಳು ನಡೆದಾಡುವ ಜಾಗವನ್ನೇ ಈ ಬಾರ್ ನವರು ಇದೀಗ ಅತಿಕ್ರಮಿಸಿಕೊಂಡಿರುವುದರಿಂದ ಜನ ಹೆದ್ದಾರಿ ರಸ್ತೆಯಲ್ಲಿ ನಡೆದಾಡಬೇಕಾದ ಸ್ಥಿತಿ ನಿರ್ಮಾಣವಾಗಿದೆ.
ಸರ್ವೀಸ್ ರಸ್ತೆಗಾಗಿ ಕಾದಿರಿಸಲಾದ ಜಾಗದಲ್ಲಿ ಬಾರ್ ನವರು ಗಾರ್ಡನ್ ಹಾಗೂ ಕೌಂಟರ್ ನಿರ್ಮಿಸಿಕೊಂಡು ಮಾಡಿಕೊಂಡು ಅತಿಕ್ರಮಣ ನಡೆಸಿದ್ದಾರೆ.
ತೊಕ್ಕೊಟ್ಟಿನಿಂದ ತಲಪಾಡಿ ತನಕದ ಹೆದ್ದಾರಿಯಲ್ಲಿ ಹೆದ್ದಾರಿ ಇಲಾಖೆಯ ಸ್ವಾಧೀನದ ಜಾಗದ ಎಲ್ಲಾ ಅಕ್ರಮ ನಿರ್ಮಾಣ ಹಾಗೂ ಒತ್ತುವರಿಯನ್ನು ಈ ಹೆದ್ದಾರಿ ನಿರ್ವಹಣೆ ಮಾಡುವ ನವಯುಗ ಕಂಪನಿಯವರು ತೆರವು ಮಾಡಿದ್ದಾರೆ. ಆದರೆ ಕಾಪಿಕಾಡ್ ನಲ್ಲಿ ಇದೊಂದು ಬಾರ್ ಆಂಡ್ ರೆಸ್ಟೋರೆಂಟ್ ನ ಒತ್ತುವರಿಯನ್ನು ಮಾತ್ರ ತೆರವುಗೊಳಿಸದಿರುವುದು ಅನೇಕ ಅನುಮಾನವನ್ನು ಹುಟ್ಟು ಹಾಕಿದೆ.
ತೊಕ್ಕೊಟ್ಟು ಓವರ್ ಬ್ರಿಡ್ಜ್ ಜಂಕ್ಷನ್ ನಿಂದ ಕಾಪಿಕಾಡ್ ತನಕ ನಿರಂತರ ಅಪಘಾತಗಳು ನಡೆಯುತ್ತಿದೆ. ಕಾಪಿಕಾಡ್ ನಲ್ಲಿ ರುವ ಅವೈಜ್ಞಾನಿಕ "ಯೂ ಟರ್ನ್ " ಕಾರಣದಿಂದಾಗಿ ನಿರಂತರ ಅಪಘಾತ ನಡೆಯುತ್ತಿದೆ.
ಇಲ್ಲಿನ ಅಪಘಾತ ನಿಯಂತ್ರಿಸು ಸಲುವಾಗಿ ಅವೈಜ್ಞಾನಿಕ ಯೂ ಟರ್ನ್ ಮುಚ್ಚುವಂತೆ ಹಾಗೂ ತೊಕ್ಕೊಟ್ಟಿನಿಂದ ಕುಂಪಲ ಬೈಪಾಸ್ ತನಕ ಎರಡೂ ಬದಿಗಳಲ್ಲಿ ಸರ್ವೀಸ್ ರಸ್ತೆ ನಿರ್ಮಿಸುವಂತೆ
ತೊಕ್ಕೊಟ್ಟು ಹೆದ್ದಾರಿ ಸುರಕ್ಷತಾ ಹೋರಾಟ ಸಮಿತಿಯು ಆಗ್ರಹಿಸಿತ್ತು.
ಸಮಿತಿಯು ಈ ಹಿನ್ನೆಲೆಯಲ್ಲಿ ಶಾಸಕರು, ಸಂಸದರು, ಜಿಲ್ಲಾಧಿಕಾರಿ, ಹೆದ್ದಾರಿ ಪ್ರಾಧಿಕಾರಕ್ಕೆ ಮನವಿ ನೀಡಿತ್ತು.
ಸಮಿತಿಯ ಮನವಿಯ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಹಾಗೂ ಹೆದ್ದಾರಿ ಪ್ರಾಧಿಕಾರದ ಯೋಜನಾ ಅಧಿಕಾರಿ ಸ್ಥಳ ಪರಿಶೀಲನೆ ಕೂಡ ನಡೆಸಿದ್ದಾರೆ. ಜಿಲ್ಲಾಧಿಕಾರಿ ಅವರು ಆಯೋಜಿಸಿದ ಜಿಲ್ಲಾ ರಸ್ತೆ ಸುರಕ್ಷತಾ ಸಮಿತಿಯ ಸಭೆಯಲ್ಲಿ ಈ ರಸ್ತೆಯಲ್ಲಿನ ಅಪಘಾತ ನಿಯಂತ್ರಿಸುವ ಬಗ್ಗೆ ಪ್ರಸ್ತಾಪ ಕೂಡ ಆಗಿದೆ.
ಸಂಸದರ ಸೂಚನೆಯಂತೆ ಹೆದ್ದಾರಿ ಪ್ರಾಧಿಕಾರದ ಹಾಗೂ ಹೋರಾಟ ಸಮಿತಿಯ ಸಭೆಯನ್ನು ಆಯೋಜಿಸಲಾಗಿತ್ತು. ಈ ಸಭೆಯಲ್ಲಿ ತಾತ್ಕಾಲಿಕವಾಗಿ ಹೆದ್ದಾರಿ ಬದಿಯಲ್ಲಿ ಪಾದಚಾರಿ ರಸ್ತೆಯನ್ನು ನಿರ್ಮಿಸುವ ಬಗ್ಗೆ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಭರವಸೆ ನೀಡಿದ್ದರು. ಈ ಸಭೆಯಲ್ಲಿ ಬಾರ್ ನವರು ರಸ್ತೆಯನ್ನು ಅತಿಕ್ರಮಣ ಮಾಡಿರುವ ಬಗ್ಗೆ ಪ್ರಸ್ತಾಪವಾಗಿತ್ತು. ತಕ್ಷಣವೇ ಬಾರ್ ನವರು ಮಾಡಿರುವ ಎಲ್ಲಾ ಅಕ್ರಮ ನಿರ್ಮಾಣ ಹಾಗೂ ರಸ್ತೆ ಅತಿಕ್ರಮಣವನ್ನು ತೆರವುಗೊಳಿಸುವಂತೆ ಹೆದ್ದಾರಿ ಪ್ರಾಧಿಕಾರದ ಯೋಜನಾ ಅಧಿಕಾರಿ ಲಿಂಗೇ ಗೌಡ ಅವರು ಸಭೆಯಲ್ಲಿ ಉಪಸ್ಥಿತಿರಿದ್ದ ನವಯುಗ ಕಂಪೆನಿ ಅಧಿಕಾರಿಗಳಿಗೆ ಸೂಚನೆ ನೀಡಿದ್ದರು. ಈ ಸಭೆ ನಡೆದು 5 ದಿನವಾದರೂ ಬಾರ್ ಆಂಡ್ ರೆಸ್ಟೋರೆಂಟ್ ನವರು ಮಾಡಿರುವ ಅಕ್ರಮ ನಿರ್ಮಾಣ , ಅತಿಕ್ರಮಣದ ಬಗ್ಗೆ ಯಾವುದೇ ಕ್ರಮ ಜರುಗಿಸಲಾಗಿಲ್ಲ.
ಈ ನಡುವೆ ಅ.26 ರಂದು ಹೆದ್ದಾರಿ ಪ್ರಾಧಿಕಾರವು ತಲಪಾಡಿಯಿಂದ ಕುಂದಾಪುರ ತನಕ ಹೆದ್ದಾರಿ ಬದಿಯ ಎಲ್ಲಾ ಅತಿಕ್ರಮಣಗಳನ್ನು ತೆರವು ಮಾಡುವಂತೆ ನವಯುಗ ಕಂಪೆನಿಗೆ ಆದೇಶ ಹೊರಡಿಸಿದೆ.
ಹೆದ್ದಾರಿ ಇಲಾಖೆಯ ಲಿಖಿತ ಆದೇಶ ಜಾರಿಯಾದರೂ ತೊಕ್ಕೊಟ್ಟು ಕಾಪಿಕಾಡ್ ನಲ್ಲಿ ಬಾರ್ ನವರು ಮಾಡಿರುವ ಅತಿಕ್ರಮಣವನ್ನು ತೆರವುಗೊಳಿಸಲು ಯಾಕೆ ವಿಳಂಬ ಮಾಡಲಾಗುತ್ತಿದೆ ಅನ್ನುವುದು ಪ್ರಶ್ನೆಯಾಗಿದೆ.