![ಮಂಗಳೂರು: ನನ್ನ ಟಿಕೆಟ್ ಅನ್ನು ಡಿಕೆಶಿ ಮಾರಾಟ ಮಾಡಿದ್ದಾರೆ - ಟಿಕೆಟ್ ವಂಚಿತ ಮೊಯ್ದೀನ್ ಬಾವಾ ಮಂಗಳೂರು: ನನ್ನ ಟಿಕೆಟ್ ಅನ್ನು ಡಿಕೆಶಿ ಮಾರಾಟ ಮಾಡಿದ್ದಾರೆ - ಟಿಕೆಟ್ ವಂಚಿತ ಮೊಯ್ದೀನ್ ಬಾವಾ](https://blogger.googleusercontent.com/img/b/R29vZ2xl/AVvXsEg9kxzP-OL1y1ccRV97IztxzCF1tDYGY8KNQDGY9tbJH-VAu5UdQq2aEaTXdLfP08_0kmSW_gWDl-rTUMH5JdCbMzgrLeoA4ShOnQW1N-RTKCLJOiqdmnDQKz2hI3AyyWjiijEYTPuQSyI/s1600/1681970288995742-0.png)
ಮಂಗಳೂರು: ನನ್ನ ಟಿಕೆಟ್ ಅನ್ನು ಡಿಕೆಶಿ ಮಾರಾಟ ಮಾಡಿದ್ದಾರೆ - ಟಿಕೆಟ್ ವಂಚಿತ ಮೊಯ್ದೀನ್ ಬಾವಾ
Wednesday, April 19, 2023
ಮಂಗಳೂರು: ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ನನ್ನ ಟಿಕೆಟ್ ಕೈತಪ್ಪಲು ನೇರ ಹೊಣೆಯಾಗಿದ್ದು, ಅವರು ಟಿಕೆಟ್ ಅನ್ನು ಮಾರಾಟ ಮಾಡಿದ್ದಾರೆ ಎಂದು ಟಿಕೆಟ್ ವಂಚಿತ ಮಾಜಿ ಶಾಸಕ ಮೊಯ್ದಿನ್ ಬಾವಾ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಾನೇನು ತಪ್ಪು ಮಾಡಿದ್ದೇನೆ ಡಿಕೆಶಿಯವರೇ ಎಂದು ಪ್ರಶ್ನಿಸಿದ ಅವರು, ನನ್ನನ್ನು ವೈರಿಯಾಗಿ ಕಾಡಿ ಪಕ್ಷದ ಚಟುವಟಿಕೆಯಲ್ಲಿ ಎಲ್ಲೂ ಕಂಡು ಬಾರದ ಇನಾಯತ್ ಅಲಿ ಎಂಬಂತಹ ವ್ಯಕ್ತಿಯನ್ನು ತಂದು ಟಿಕೆಟ್ ಕೊಡುವ ಆಶ್ವಾಸನೆ ನೀಡುತ್ತಾರೆ. ಆತ ಬಿಜೆಪಿ ವಿರುದ್ಧ ಹೋರಾಟ ಮಾಡಿದ್ದಲ್ಲ. ಮೊಯ್ದಿನ್ ಬಾವಾರ ಕಾರ್ಯಕರ್ತರನ್ನು, ಅಭಿಮಾನಿಗಳನ್ನು ವಿಭಾಗ ಮಾಡಿ ಹಣದ ಆಮಿಷವೊಡ್ಡಿ ಹೊರಗಡೆಯವರನ್ನು ತಂದು ಪ್ರಚಾರ ಮಾಡಲು ಆರಂಭಿಸಿದ್ದಾರೆ.
ಟಿಕೆಟ್ ಕೈತಪ್ಪಲು ಕರಾವಳಿ ಭಾಗದಲ್ಲಿ ಏಕಾಂಗಿ ಶಾಸಕನೆಂದು ಬೀಗುತ್ತಿರುವ ಮಾನ್ಯರೊಬ್ಬರು ಕಾರಣ ಎಂದು ಯು.ಟಿ.ಖಾದರ್ ಅವರ ಹೆಸರು ಹೇಳದೆ ಕಿಡಿಕಾರಿದರು. ಅದೇ ರೀತಿ ಶಿವಮೊಗ್ಗದಲ್ಲಿ ಪಕ್ಷವನ್ನು ಮುಳುಗಿಸಿ ಈಗ ಎಂಎಲ್ ಸಿ ಆದವರೊಬ್ಬರೂ ಇದರಲ್ಲಿ ಸೇರಿಕೊಂಡಿದ್ದಾರೆ. ರಾಹುಲ್ ಗಾಂಧಿಯವರು ಮಾಡಿರುವ ಸರ್ವೇಯನ್ನು 7% ಜನರಿಗೆ ಕೊಡುವಂತಹ ಕಾರ್ಯ ಆಗುತ್ತಿದೆ. ಡಿಕೆಶಿಯೊಬ್ಬರನ್ನು ಬಿಟ್ಟು ಸಿದ್ದರಾಮಯ್ಯ ಸೇರಿದಂತೆ ಸಿಸಿ ಕಮಿಟಿಯವರೆಲ್ಲರೂ ನನಗೆ ಪೂರ್ತಿ ಆಶೀರ್ವಾದ ಮಾಡಿದ್ದರು. ಆದರೆ ಇದೀಗ ಕಾರ್ಯಕರ್ತರ ಒತ್ತಡದಂತೆ ನಾನು ಜೆಡಿಎಸ್ ಪಕ್ಷ ಸೇರುತ್ತಿದ್ದೇನೆ. ಆದ್ದರಿಂದ ಈ ರಾಜ್ಯದಲ್ಲಿ ಅತ್ಯುತ್ತಮ ನಾಯಕ, ಒಳ್ಳೆಯ ಮನಸ್ಥಿತಿಯಿರುವ ಡಿ.ಕೆ.ಕುಮಾರಸ್ವಾಮಿಯವರ ಆಶೀರ್ವಾದವನ್ನು ಇಂದು ಬೆಳಗ್ಗೆ ಪಡೆದು ಜೆಡಿಎಸ್ ಸೇರ್ಪಡೆಗೊಂಡಿದ್ದೇನೆ. ಕಾಂಗ್ರೆಸ್ ಪಕ್ಷಕ್ಕೆ ನೋವಿನಲ್ಲಿ ಬಹಿರಂಗವಾಗಿ ರಾಜಿನಾಮೆ ಸಲ್ಲಿಸಿರುವ ನಾನು ಇಂದು ಮಧ್ಯಾಹ್ನ 1ಗಂಟೆಗೆ ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದಿಂದ ನಾಮಪತ್ರ ಸಲ್ಲಿಸಲಿದ್ದೇನೆ ಎಂದು ಹೇಳಿದರು.