![ಮಂಗಳೂರು: ಅಂತಾರಾಷ್ಟ್ರೀಯ ಸ್ವಿಮ್ಮಿಂಗ್ ಫೂಲ್ ಉದ್ಘಾಟನೆಗೆ ತಡವಾಗಿ ಹೇಳಿಕೆ - ವೇದಿಕೆಯಲ್ಲೇ ಸ್ಮಾರ್ಟ್ ಸಿಟಿ ಅಧಿಕಾರಿಗಳ ವಿರುದ್ಧ ಸಂಸದ ನಳಿನ್ ಗರಂ ಮಂಗಳೂರು: ಅಂತಾರಾಷ್ಟ್ರೀಯ ಸ್ವಿಮ್ಮಿಂಗ್ ಫೂಲ್ ಉದ್ಘಾಟನೆಗೆ ತಡವಾಗಿ ಹೇಳಿಕೆ - ವೇದಿಕೆಯಲ್ಲೇ ಸ್ಮಾರ್ಟ್ ಸಿಟಿ ಅಧಿಕಾರಿಗಳ ವಿರುದ್ಧ ಸಂಸದ ನಳಿನ್ ಗರಂ](https://blogger.googleusercontent.com/img/b/R29vZ2xl/AVvXsEgRoQ6M36rhA5hv1QuHWjSKL3pd2BKRhY-T2EboSL4wy0TyR-cAvVr2KFWdFPTBvbhddiddRFXFplFmKhKpTH8fLfCmDHl9euZ_POTWfhzEZ1C7AXhrOtQluY5I35fdAVFhPIylD0JMOUY/s1600/1700843672492343-0.png)
ಮಂಗಳೂರು: ಅಂತಾರಾಷ್ಟ್ರೀಯ ಸ್ವಿಮ್ಮಿಂಗ್ ಫೂಲ್ ಉದ್ಘಾಟನೆಗೆ ತಡವಾಗಿ ಹೇಳಿಕೆ - ವೇದಿಕೆಯಲ್ಲೇ ಸ್ಮಾರ್ಟ್ ಸಿಟಿ ಅಧಿಕಾರಿಗಳ ವಿರುದ್ಧ ಸಂಸದ ನಳಿನ್ ಗರಂ
Friday, November 24, 2023
ಮಂಗಳೂರು: ನಗರದ ಎಮ್ಮೆಕೆರೆಯ ಅಂತಾರಾಷ್ಟ್ರೀಯ ಮಟ್ಟದ ಈಜುಕೊಳ ಉದ್ಘಾಟನಾ ಸಮಾರಂಭಕ್ಕೆ ತಡವಾಗಿ ಹೇಳಿಕೆ ನೀಡಿರುವುದಕ್ಕೆ ದ.ಕ.ಜಿಲ್ಲಾ ಸಂಸದ ನಳಿನ್ ಕುಮಾರ್ ಕಟೀಲು ಅವರು ಸ್ಮಾರ್ಟ್ ಸಿಟಿ ಅಧಿಕಾರಿಗಳ ವಿರುದ್ಧ ಈಜುಕೊಳ ಉದ್ಘಾಟನಾ ಸಮಾರಂಭದ ವೇದಿಕೆಯಲ್ಲಿಯೇ ಗರಂ ಆಗಿದ್ದಾರೆ.
ನಗರದ ಎಮ್ಮೆಕೆರೆಯಲ್ಲಿ ಅಂತರಾಷ್ಟ್ರೀಯ ಮಟ್ಟದ ಸ್ವಿಮ್ಮಿಂಗ್ ಪೂಲ್ ಉದ್ಘಾಟನಾ ಸಮಾರಂಭದ ವೇದಿಕೆಯಲ್ಲಿ ಈ ಘಟನೆ ನಡೆದಿದೆ. ಇದೇ ಸಭೆಯಲ್ಲಿದ್ದ ಸಚಿವ ಭೈರತಿ ಸುರೇಶ್ ಅವರು ತಕ್ಷಣ ಅಧಿಕಾರಿಯನ್ನು ಕರೆದು ಕ್ಲಾಸ್ ತೆಗೆದುಕೊಂಡಿದ್ದಾರೆ.
ಸ್ವಿಮ್ಮಿಂಗ್ ಫೂಲ್ ಉದ್ಘಾಟನೆ ಇಂದು ಇದ್ದರೆ, ನಿನ್ನೆ ಬಂದು ಸ್ಮಾರ್ಟ್ ಸಿಟಿ ಅಧಿಕಾರಿಗಳು ಹೇಳಿಕೆ ನೀಡಿದ್ದಾರೆ. ಆದ್ದರಿಂದ ಈ ಕಾರ್ಯಕ್ರಮದ ಉದ್ಘಾಟನೆಯ ಬಗ್ಗೆ ನನಗೆ ನಿನ್ನೆವರೆಗೆ ಯಾವುದೇ ಮಾಹಿತಿಯೇ ಇರಲಿಲ್ಲ. ಇಂದು ಬೆಳಗ್ಗೆ ತನಗೆ ದೆಹಲಿ ಕಾರ್ಯಕ್ರಮ ಫಿಕ್ಸ್ ಆಗಿತ್ತು. ನಾನು ಅಲ್ಲಿಗೆ ತೆರಳಬೇಕಿತ್ತು. ಆದರೆ ನಿನ್ನೆ ಹೇಳಿಕೆ ಬಂದಿದ್ದರಿಂದ ನಾನು ಸಚಿವರಿಗೆ ಅಗೌರವ ತೋರಬಾರದೆಂದು ಕಾರ್ಯಕ್ರಮಕ್ಕೆ ಬಂದಿದ್ದೇನೆ. ಇಲ್ಲದಿದ್ದಲ್ಲಿ ರಾಜ್ಯ ಸರ್ಕಾರದ ಯಾವುದೇ ಕಾರ್ಯಕ್ರಮಕ್ಕೂ ನಾನು ಬರೋದಿಲ್ಲ. ಇದು ಕೇಂದ್ರ ಸರಕಾರದ ಯೋಜನೆಯಾದ್ದರಿಂದ ಪ್ರೋಟೋಕಾಲ್ ಪ್ರಕಾರ ನಾನು ಇಲ್ಲಿ ಇರಲೇಬೇಕು. ಆದರೆ ಕೇಂದ್ರದ ಸ್ಮಾರ್ಟ್ ಸಿಟಿ ಕಾರ್ಯಕ್ರಮಕ್ಕೆ ನನ್ನನ್ನೇ ತಡವಾಗಿ ಅಹ್ವಾನಿಸಲಾಗಿದೆ. ಸಚಿವರ ಡೇಟ್ ಫಿಕ್ಸ್ ಆದ ತಕ್ಷಣ ನಮ್ಮಲ್ಲಿ ಬಂದು ಬರೆಸಿ ನನಗೆ ತಿಳಿಸಬೇಕು. ಮುಂದೆ ಈ ತಪ್ಪುಗಳಾಗಬಾರದು ಎಂದು ಸ್ಮಾರ್ಟ್ ಸಿಟಿ ಅಧಿಕಾರಿಗಳಿಗೆ ನಳಿನ್ ಕುಮಾರ್ ಕಟೀಲು ತಾಕೀತು ಮಾಡಿದರು.
ಈ ವೇಳೆ ಅಧಿಕಾರಿಗಳನ್ನು ತಮ್ಮ ಬಳಿ ಕರೆಯಿಸಿದ ಸಚಿವ ಭೈರತಿ ಸುರೇಶ್ ಅವರು, ಸಂಸದ ನಳಿನ್ ರನ್ನು ತಡವಾಗಿ ಅಹ್ವಾನಿಸಿದ್ದಕ್ಕೆ ಅಧಿಕಾರಿಗಳಿಗೆ ಕ್ಲಾಸ್ ತೆಗೆದುಕೊಂಡರು.