![ಮಂಗಳೂರು: ನಗರದ ಸ್ಮಾರ್ಟ್ ಸಿಟಿ ಅನುದಾನದಲ್ಲಿ ಅಸೆಟ್ಸ್ ತರುವ ಯೋಜನೆಗಳಿಲ್ಲ - ಸಚಿವ ಭೈರತಿ ಸುರೇಶ್ ಅಪಸ್ವರ ಮಂಗಳೂರು: ನಗರದ ಸ್ಮಾರ್ಟ್ ಸಿಟಿ ಅನುದಾನದಲ್ಲಿ ಅಸೆಟ್ಸ್ ತರುವ ಯೋಜನೆಗಳಿಲ್ಲ - ಸಚಿವ ಭೈರತಿ ಸುರೇಶ್ ಅಪಸ್ವರ](https://blogger.googleusercontent.com/img/b/R29vZ2xl/AVvXsEjSuOjNFVBoi7CX3rUJGqDsyY1jr1m2qIijAkW_FkJBzM_TzPzmXOT2lWXx87G84yli2YSwO2jh9txdMe56JYpQt6g5OKgAHb_bxMt2J-UBlqm3O6ts9ttyMJQ-IgNbw0LYbtBjcSmpKe0/s1600/1700834168833131-0.png)
ಮಂಗಳೂರು: ನಗರದ ಸ್ಮಾರ್ಟ್ ಸಿಟಿ ಅನುದಾನದಲ್ಲಿ ಅಸೆಟ್ಸ್ ತರುವ ಯೋಜನೆಗಳಿಲ್ಲ - ಸಚಿವ ಭೈರತಿ ಸುರೇಶ್ ಅಪಸ್ವರ
Friday, November 24, 2023
ಮಂಗಳೂರು: ನಗರದ ಸ್ಮಾರ್ಟ್ ಸಿಟಿ ಯೋಜನೆಯಡಿ ಜನತೆಗೆ ಲಾಭ ತರುವ ಯಾವ ಯೋಜನೆಯನ್ನೂ ತಂದಿಲ್ಲ. ಸ್ಮಾರ್ಟ್ ಸಿಟಿಯಿಂದ ಮಂಗಳೂರಿಗೆ ಒಂದು ಸಾವಿರ ಕೋಟಿ ಅನುದಾನ ಬಂದಿದೆ. ಆದರೆ ಅಸೆಟ್ಸ್ ಕ್ರಿಯೇಟ್ ಆಗುವ ಯಾವ ಯೋಜನೆಯನ್ನು ಮಾಡಿಲ್ಲ ಎಂದು ನಗರದ ಸ್ಮಾರ್ಟ್ ಸಿಟಿ ಕಾಮಗಾರಿ ಬಗ್ಗೆ ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ್ ಅಪಸ್ವರವೆತ್ತಿದರು.
ನಗರದ ಎಮ್ಮೆಕೆರೆಯಲ್ಲಿ ನಿರ್ಮಾಣವಾಗಿರುವ ಅಂತಾರಾಷ್ಟ್ರೀಯ ಮಟ್ಟದ ಈಜುಕೊಳವನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದ ಅವರು, ಹುಬ್ಬಳ್ಳಿ ಧಾರವಾಡ ಸೇರಿದಂತಡ ಬೇರೆ ಕಡೆಗಳಲ್ಲಿ ನಾವು ಆದಾಯ ತರುವ ಯೋಜನೆಗಳನ್ನು ತಂದಿದ್ದೇವೆ. ಕನಿಷ್ಟ ಪಕ್ಷ ಪ್ರವಾಸೋದ್ಯಮಕ್ಕಾದ್ರೂ 100 ಕೋಟಿ ಇಡಬೇಕಿತ್ತು. ಅದೂ ಆಗಿಲ್ಲ, ಪಾಲಿಕೆಗೆ ಲಾಭ ಬರುವ ಯೋಜನೆ ಮಾಡಿಲ್ಲ. ಈ ಬಗ್ಗೆ ಗಮನ ಹರಿಸುತ್ತೇವೆ ಎಂದರು.
ಮಂಗಳೂರಿನಲ್ಲಿ ಇನ್ನೂ 24 ಕೆಲಸಗಳು ಪ್ರಗತಿಯಲ್ಲಿದೆ. ಮೂರು ಯೋಜನೆಗಳಿಗೆ ಕೇಂದ್ರ ಸರ್ಕಾರದಿಂದ ಅನುಮತಿ ದೊರಕಿಲ್ಲ. ಸ್ಮಾರ್ಟ್ ಸಿಟಿ ಎಂಡಿಯವರು ಇದನ್ನು ಸಂಸದರ ಗಮನಕ್ಕೆ ತಂದು ಅನುಮತಿ ಕೊಡಿಸಬೇಕು. ರಾಜಕೀಯ ಅಭಿವೃದ್ಧಿ ಕಾರ್ಯಕ್ಕೆ ಅಡ್ಡಿಯಾಗಬಾರದು. ಕಾಂಗ್ರೆಸ್ ಸರ್ಕಾರ ರಾಜಕೀಯ ಬಿಟ್ಟು ಅನುದಾನ ನೀಡಲಿದೆ ಎಂದು ಭೈರತಿ ಸುರೇಶ್ ಹೇಳಿದರು.
ಸಚಿವ ಭೈರತಿ ಸುರೇಶ್ ಅಪಸ್ವರಕ್ಕೆ ವೇದಿಕೆಯಲ್ಲೇ ಸ್ಪಷ್ಟನೆ ನೀಡಿದ ದ.ಕ.ಜಿಲ್ಲಾ ಸಂಸದ ನಳಿನ್ ಕುಮಾರ್, ಸಚಿವರು ಮಂಗಳೂರಿನಲ್ಲಿ ಸ್ಮಾರ್ಟ್ ಸಿಟಿ ಅನುದಾನದಿಂದ ಆದಾಯ ತರುವ ಯೋಜನೆಗಳನ್ನು ಮಾಡಿಲ್ಲ ಅಂದರು. ಆದರೆ ಆಗ ನಮ್ಮಲ್ಲಿ ಇದ್ದಿದ್ದು ನಿಮ್ಮದೇ ಕಾಂಗ್ರೆಸ್ ಶಾಸಕ ಜೆ.ಆರ್.ಲೋಬೊ ಅವರು. ಮಂಗಳೂರು ಸ್ಮಾರ್ಟ್ ಸಿಟಿಗೆ ಆಯ್ಕೆಯಾದ ಬಳಿಕ ಲೋಬೊರೊಂದಿಗೆ ಚರ್ಚೆ ನಡೆಸಲಾಗಿತ್ತು. ಆದರೆ ಆಗ ಹಾಕಿರುವ ಯೋಜನೆಗಳಲ್ಲಿ ಇದೆಲ್ಲ ಇರಲಿಲ್ಲ. ಆದರೆ ವೇದವ್ಯಾಸ ಕಾಮತ್ ಶಾಸಕರಾದ ಬಳಿಕ ಅಭಿವೃದ್ಧಿ ವೇಗಗೊಂಡಿದೆ ಎಂದರು.
ಮಾರುಕಟ್ಟೆ ಸೇರಿದಂತೆ ಹಲವು ಸ್ಮಾರ್ಟ್ ಸಿಟಿ ಕಾಮಗಾರಿಗಳು ನಡೆಯುತ್ತಿದೆ. ಅಭಿವೃದ್ಧಿಯೊಂದಿಗೆ ಆದಾಯ ತರೋ ಯೋಜನೆಗಳನ್ನು ಮಾಡಲಾಗುತ್ತಿದೆ. ಅಭಿವೃದ್ಧಿ ಕಾರ್ಯದಲ್ಲಿ ಯಾವುದೇ ರಾಜಕೀಯವಿಲ್ಲ. ಆದರೆ ವಾಟರ್ ಫ್ರಂಟ್ ಕಾಮಗಾರಿಗೆ ಕೆಲ ಖಾಸಗಿ ವ್ಯಕ್ತಿಗಳ ತಡೆಯಿದೆ. ಅದನ್ನು ಸಚಿವರು ಸಭೆ ನಡೆಸಿ ಸರಿ ಪಡಿಸಬೇಕು. ನಂತೂರು ಫ್ಲೈ ಓವರ್ ಕಾಮಗಾರಿ ಆರು ತಿಂಗಳಿನಿಂದ ಬಾಕಿಯಿದೆ. ಇಲ್ಲಿ ಮರ ಕಡಿದರೆ ಪ್ರತಿಭಟನೆ ಆಗುತ್ತೆ, ಭೂ ಸ್ವಾಧೀನ ಸಮಸ್ಯೆಯಿದೆ. 28 ಕಿ.ಮೀ. ಹೆದ್ದಾರಿ ಅಭಿವೃದ್ಧಿಗೆ 40 ಕಡೆ ಕೇಸ್ ಹಾಕಿದ್ದಾರೆ. ಇದರಿಂದ ಹಲವು ಕಡೆ ರಾಷ್ಟ್ರೀಯ ಹೆದ್ದಾರಿ ಕೆಲಸ ನಿಂತಿದೆ ಎಂದು ನಳಿನ್ ಕುಮಾರ್ ಕಟೀಲು ಹೇಳಿದರು.