ಚೆನ್ನೈ :ಅಕ್ರಮ ಸಂಬಂಧಕ್ಕೆ ಅಡ್ಡಿಯಾದ ಮಾವ ; ಪೆಟ್ರೋಲ್ ಸುರಿದು ಜೀವಂತ ಸುಟ್ಟು ಹಾಕಿದ ಸೊಸೆಯ ಪ್ರಿಯಕರ, ಬೆಂಕಿ ಕೆನ್ನಾಲಿಗೆಯಲ್ಲಿ ಬಿದ್ದು ಒದ್ದಾಡಿದ ದೃಶ್ಯ ವೈರಲ್!

ಚೆನ್ನೈ : ತಮಿಳುನಾಡಿನ ಕಡಲೂರು ಜಿಲ್ಲೆಯ ಕಡಂಪುಲಿಯೂರು ಗ್ರಾಮದಲ್ಲಿ ಭೀಕರ ಹತ್ಯೆ ನಡೆದಿದ್ದು ತನ್ನ ಅಕ್ರಮ ಸಂಬಂಧಕ್ಕೆ ಅಡ್ಡಿಯಾದ ಮಾವನನ್ನೇ ಸೊಸೆಯ ಪ್ರಿಯಕರ ಜೀವಂತ ಸುಟ್ಟು ಹಾಕಿದ್ದಾನೆ.
ಮಾಲಿಗಂಪಟ್ಟು ಗ್ರಾಮದ ನಿವಾಸಿ 70 ವರ್ಷದ ರೈತ ರಾಜೇಂದ್ರನ್ ಬೆಂಕಿಯ ಕೆನ್ನಾಲಿಗೆಯಲ್ಲಿ ಸುಟ್ಟು ಹೋಗಿದ್ದಾರೆ. ರಾಜೇಂದ್ರನ್ ಅವರನ್ನು ದುಷ್ಕರ್ಮಿಗಳ ಗುಂಪೊಂದು ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಹತ್ಯೆ ಮಾಡಿದೆ. ರಾಜೇಂದ್ರನ್ ಅವರು ತಮ್ಮ ಸ್ನೇಹಿತ ಕಂದನ್ ಜೊತೆ ಬೈಕ್ನಲ್ಲಿ ಪ್ರಯಾಣಿಸುತ್ತಿದ್ದ ವೇಳೆ, ವ್ಯಾನ್ನಲ್ಲಿ ಬಂದ ದುಷ್ಕರ್ಮಿಗಳು ಅವರನ್ನು ಅಡ್ಡಗಟ್ಟಿದ್ದಾರೆ. ಅಪಾಯವನ್ನು ಅರಿತ ಕಂದನ್ ಸ್ಥಳದಿಂದ ಪರಾರಿಯಾಗಿದ್ದು, ಒಂಟಿಯಾದ ರಾಜೇಂದ್ರನ್ ಮೇಲೆ ದಾಳಿ ನಡೆಸಿದ ಆರೋಪಿಗಳು ಅವರ ಮೈಮೇಲೆ ಪೆಟ್ರೋಲ್ ಸುರಿದು ಜೀವಂತವಾಗಿ ಬೆಂಕಿ ಹಚ್ಚಿ ಸುಟ್ಟಿದ್ದಾರೆ.
ಬೆಂಕಿಯ ಜ್ವಾಲೆಯಲ್ಲಿ ರಾಜೇಂದ್ರನ್ ನಡು ರಸ್ತೆಯಲ್ಲೇ ಓಡುತ್ತಾ ಸಹಾಯಕ್ಕಾಗಿ ಕಿರುಚಿರುವ ದೃಶ್ಯಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು ನೋಡುಗರ ಎದೆ ನಡುಗಿಸುವಂತಿವೆ. ಹೃದಯವಿದ್ರಾವಕ ಘಟನೆಯ ದೃಶ್ಯಗಳು ಸಿಸಿಟಿವಿಗಳಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿವೆ.
ಪ್ರಾಥಮಿಕ ತನಿಖೆಯಲ್ಲಿ, ಈ ಹತ್ಯೆಗೆ ಕೌಟುಂಬಿಕ ಕಲಹ ಮತ್ತು ಅನೈತಿಕ ಸಂಬಂಧವೇ ಕಾರಣ ಎಂದು ಪೊಲೀಸರು ತಿಳಿಸಿದ್ದಾರೆ. ರಾಜೇಂದ್ರನ್ ಅವರ ಸೊಸೆಯೊಂದಿಗೆ ಮಣಿಕಂಠನ್ ಎಂಬ ವ್ಯಕ್ತಿ ಅಕ್ರಮ ಸಂಬಂಧ ಹೊಂದಿದ್ದನೆಂಬ ಆರೋಪಗಳಿವೆ. ಇದನ್ನು ರಾಜೇಂದ್ರನ್ ತೀವ್ರವಾಗಿ ವಿರೋಧಿಸಿದ್ದರಿಂದಲೇ ದ್ವೇಷ ಸಾಧಿಸಲು ಮಣಿಕಂಠನ್ ತನ್ನ ಸಹಚರರೊಂದಿಗೆ ಭೀಕರವಾಗಿ ಕೊಲೆ ಮಾಡಿಸಿದ್ದಾನೆ ಎಂದು ಪೊಲೀಸರು ಶಂಕಿಸಿದ್ದಾರೆ. ತ್ವರಿತ ಕಾರ್ಯಾಚರಣೆ ನಡೆಸಿದ ಪೊಲೀಸರು ಮಣಿಕಂಠನ್, ಅವನ ಸಹಚರರು ಹಾಗೂ ರಾಜೇಂದ್ರನ್ ಅವರ ಸೊಸೆ ಸಹಿತ ನಾಲ್ವರನ್ನು ಬಂಧಿಸಿದ್ದಾರೆ.