ಮಂಗಳೂರು :ಕರಾವಳಿ ಉತ್ಸವದ ಅಂಗವಾಗಿ ಮೂರು ದಿನಗಳ ಸ್ಟ್ರೀಟ್ ಫುಡ್ ಫೆಸ್ಟ್; ನಗರದ ಕದ್ರಿ ಪಾರ್ಕಿನ ಮುಖ್ಯ ರಸ್ತೆಯಲ್ಲಿ ಸ್ಟ್ರೀಟ್ ಫುಡ್ ಫೆಸ್ಟ್ ಗೆ ಚಾಲನೆ ನೀಡಿದ ಖ್ಯಾತ ಚೆಫ್ ಶ್ರೀಯಾ ಶೆಟ್ಟಿ...!
Friday, January 30, 2026
ನಗರದ ಕದ್ರಿ ಪಾರ್ಕ್ ಮುಖ್ಯ ರಸ್ತೆಯಲ್ಲಿ ನಡೆಯುತ್ತಿರುವ ಕಾರ್ಯಕ್ರಮಕ್ಕೆ ಖ್ಯಾತ ಚೆಫ್ ಶ್ರೀಯಾ ಶೆಟ್ಟಿ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಕರಾವಳಿ ಕರ್ನಾಟಕದ ಜನತೆಯ ಆಹಾರ ಅಭಿರುಚಿಯು ಬಹಳ ವಿಶಿಷ್ಟವಾಗಿದೆ. ತಿಂಡಿ ತಿನಿಸುಗಳ ಬಗ್ಗೆ ಇಲ್ಲಿನ ಜನರ ಪ್ರೀತಿಯು ಆಹಾರ ಸಂಸ್ಕೃತಿಯನ್ನು ಎತ್ತರಕ್ಕೆ ಕೊಂಡೊಯ್ದಿದೆ. ವೈವಿಧ್ಯಮಯ ಖಾದ್ಯಗಳಿಗೆ ಕರಾವಳಿಯು ಹೆಸರುವಾಸಿಯಾಗಿದೆ ಎಂದು ಹೇಳಿದರು.
ಜಿಲ್ಲಾಧಿಕಾರಿ ದರ್ಶನ್ ಎಚ್ ವಿ ಮಾತನಾಡಿ, ಈ ವರ್ಷದ ಕರಾವಳಿ ಉತ್ಸವದ ಅಂಗವಾಗಿ ನಡೆದ ಎಲ್ಲ ಕಾರ್ಯಕ್ರಮಗಳಿಗೆ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದಾರೆ. ಮುಂದಿನ ದಿನಗಳಲ್ಲಿ ಇನ್ನಷ್ಟು ವೈವಿಧ್ಯಮಯ ಕಾರ್ಯಕ್ರಮಗಳನ್ನು ನಡೆಸಲಾಗುವುದು ಎಂದರು.
ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಜನರಲ್ ಮ್ಯಾನೇಜರ್ ರಾಜೇಂದ್ರ ಕುಮಾರ್, ಡಿ ಜಿ ಎಂ ತೇಜಸ್ವಿನಿ, ಮಂಗಳೂರು ಉಪ ವಿಭಾಗಾಧಿಕಾರಿ ಮೀನಾಕ್ಷಿ ಆರ್ಯ, ಯತೀಶ್ ಬೈಕಂಪಾಡಿ ಮತ್ತಿತರರು ಇದ್ದರು.
*3 ದಿನಗಳ ಸ್ಟ್ರೀಟ್ ಫುಡ್ ಫೆಸ್ಟ್*
ಸ್ಟ್ರೀಟ್ ಫುಡ್ ಫೆಸ್ಟ್ ಕಾರ್ಯಕ್ರಮ ಇಂದಿನಿಂದ ಭಾನುವಾರದವರೆಗೆ ಕದ್ರಿ ಪಾರ್ಕ್ ಮುಖ್ಯ ರಸ್ತೆಯಲ್ಲಿ ನಡೆಯಲಿದ್ದು, ಆಕರ್ಷಕ ತಿಂಡಿ ತಿನಿಸುಗಳು, ಚಾಟ್ಸ್, ಪಾನೀಯಗಳು, ಸಸ್ಯಹಾರ ಮತ್ತು ಮಾಂಸಾಹಾರ ಖಾದ್ಯಗಳ ಸ್ಟಾಲ್ ಗಳನ್ನು ಒಳಗೊಂಡಿದೆ. ಮೊದಲ ದಿನವೇ ಭಾರಿ ಸಂಖ್ಯೆಯಲ್ಲಿ ಸಾರ್ವಜನಿಕರು ಪಾಲ್ಗೊಂಡಿದ್ದರು.