ಬೆಂಗಳೂರು :ಪ್ರಯಾಣಿಕರೇ ಎಚ್ಚರ! ಮೆಜೆಸ್ಟಿಕ್ ಸುತ್ತಮುತ್ತ ಕಳ್ಳರ, ಸುಲಿಗೆಕೋರರ ಹಾವಳಿ..!!

ಬೆಂಗಳೂರು :ರಾಜಧಾನಿ ಬೆಂಗಳೂರಿನ ಕೇಂದ್ರ ಭಾಗ ಅತ್ಯಂತ ಹೆಚ್ಚು ಜನ ದಟ್ಟಣೆ ಇರುವ ಪ್ರದೇಶ ಮೆಜೆಸ್ಟಿಕ್ ನಿತ್ಯ ಇಲ್ಲಿದೆ. 50 ಲಕ್ಷಕ್ಕೂ ಅಧಿಕ ಮಂದಿ ಭೇಟಿ ನೀಡುತ್ತಾರೆ. ಈ ಪ್ರದೇಶದಲ್ಲಿ ಸುತ್ತಮುತ್ತ ನಡೆದಾಡುವಾಗ ಸ್ವಲ್ಪ ಎಚ್ಚರಿಕೆ ಇರಲಿ! ಒಂದು ಕ್ಷಣ ಯಾಮಾರಿದರೂ ಜೇಬಲ್ಲಿದ್ದ ದುಡ್ಡು, ಬ್ಯಾಗ್, ಒಡವೆಗಳು ಅಥವಾ ಮೊಬೈಲ್ ಮಾಯವಾಗುತ್ತದೆ. ಇನ್ನು ತಡರಾತ್ರಿ ಓಟಾಟ ನಡೆಸುವಾಗ ರಕ್ಷಣೆ ಬಗ್ಗೆ ಒಂದು ಕೈಹೆಚ್ಚಾಗಿಯೇ ಕ್ರಮವಹಿಸಬೇಕು.
ರಾತ್ರಿ 9.30ರ ನಂತರ ಕುಡಿದು ಇಲ್ಲವೇ ಅನಾರೋಗ್ಯದಿಂದ ಯಾರಾದರೂ ಮಲಗಿದ್ದರೆ ಅವರ ಜೇಬಲ್ಲಿದ್ದುದನ್ನು ಕಿತ್ತುಕೊಳ್ಳಲಾಗುತ್ತದೆ.
ರಾತ್ರಿ ಹೊತ್ತಲ್ಲಿ ಮಹಿಳೆಯರು ಬಿಎಂಟಿಸಿ ಬಸ್ ನಿಲ್ದಾಣಕ್ಕೆ ಬಂದರೆ ಅವರನ್ನು ‘ಬೆಲೆವೆಣ್ಣು’ಗಳೆಂದು ತಿಳಿದು ಕರೆಯುವಂಥ ಅಧೋಗತಿ ಬಂದೊಂದಗಿದೆ. ಪುರುಷರು ರಾತ್ರಿ ಒಬ್ಬರೇ ನಡೆದು ಹೋಗುತ್ತಿದ್ದರೆ ಅವರನ್ನು ಅಡ್ಡಗಟ್ಟಿ ಕರೆಯುವ ಲೈಂಗಿಕ ಕಾರ್ಯಕರ್ತೆಯರು, ಲಿಂಗತ್ವ ಅಲ್ಪಸಂಖ್ಯಾತರ ಹಾವಳಿ ಹೆಚ್ಚಾಗಿದೆ. ಇಲ್ಲಿ ಓಡಾಡಿ, ಸಂಕಷ್ಟಕ್ಕೆ ತುತ್ತಾದವರು ತಮ್ಮ ಅಳಲು ತೋಡಿಕೊಳ್ಳುತ್ತಾರೆ.
ಗುಬ್ಬಿ ತೋಟದಪ್ಪ ರಸ್ತೆ, ಧನ್ವಂತರಿ ರಸ್ತೆ ಸಂಪರ್ಕ ಕಲ್ಪಿಸುವ ಪಾದಚಾರಿ ಮೇಲ್ಸೇತುವೆ, ರೈಲು ನಿಲ್ದಾಣದ ಕಡೆಗೆ ಸಾಗುವ ಅಂಡರ್ ಪಾಸ್ಗಳು ಅಪಾಯಕಾರಿ ಸ್ಥಳಗಳಾಗಿ ಪರಿವರ್ತನೆಗೊಂಡಿವೆ ಎಂಬ ದೂರುಗಳೂ ಇವೆ.
ತುಮಕೂರಿನಿಂದ ಹದಿನೆಂಟರ ಹರೆಯದ ಯುವತಿಯೊಬ್ಬಳು ಮನೆ ಬಿಟ್ಟು ಬಂದಿದ್ದರು. ಎಲ್ಲಿಗೆ ಹೋಗಬೇಕು ಎಂದು ಗೊತ್ತಾಗದೇ ಮೆಜೆಸ್ಟಿಕ್ನಲ್ಲಿ ಕುಳಿತಿದ್ದ ಆಕೆ ಸ್ಪಲ್ಪ ಹೊತ್ತಿನಲ್ಲೇ ಪರಿಚಯವಾಗಿದ್ದ ಯುವತಿ ಜೊತೆಗೆ ಹೋಗಿದ್ದರು. ತುಮಕೂರಿನಲ್ಲಿ ನಾಪತ್ತೆ ಪ್ರಕರಣ ದಾಖಲಾಗಿತ್ತು. ಅಲ್ಲಿನ ಪೊಲೀಸರು ಯುವತಿಯನ್ನು ಹುಡುಕುತ್ತಾ ಬಂದು ಮೆಜೆಸ್ಟಿಕ್ನಲ್ಲಿ ಪತ್ತೆ ಹಚ್ಚಿದ್ದರು. ಆ ಯುವತಿ ಅದಾಗಲೇ ವೇಶ್ಯಾವಾಟಿಕೆಯ ದಂದೆಯಲ್ಲಿ ಸಿಲುಕಿಯಾಗಿತ್ತು.
ವಿಜಯಪುರದ ಇನ್ನೊಂದು ಹುಡುಗಿ ಎಸ್ಎಸ್ಎಲ್ಸಿ ಮುಗಿಸಿ ನಂತರ ಓದು ಮುಂದುವರಿಸಬೇಕು ಎಂದು ಕನಸು ಕಟ್ಟಿಕೊಂಡಿದ್ದಳು. ಆದರೆ, ಹೆತ್ತವರಿಗೆ ಮಗಳಿಗೆ ಮದುವೆ ಮಾಡುವ ತವಕ. ಸಂಬಂಧಿಕ ಹುಡುಗನೊಂದಿಗೆ ಮಾತುಕತೆ ನಡೆಸಿ ನಿಶ್ಚಿತಾರ್ಥಕ್ಕೆ ದಿನ ನಿಗದಿ ಮಾಡಿದ್ದರು.
ಮದುವೆಯಾಗಲು ಮನಸ್ಸಿಲ್ಲದ ಹುಡುಗಿ ನಿಶ್ಚಿತಾರ್ಥದ ಎರಡು ದಿನ ಮುಂಚೆಯೇ ಬಸ್ ಹತ್ತಿ ನೇರವಾಗಿ ಮೆಜೆಸ್ಟಿಕ್ಗೆ ಬಂದಿಳಿದಿದ್ದಳು. ಮುಂದಿನ ದಾರಿ ಗೊತ್ತಾಗದೇ ಅಳುತ್ತಾ ಕುಳಿತಿದ್ದಳು. ಕೆಲಸಕ್ಕೆ ಹೊರಟಿದ್ದ ಖಾಸಗಿ ಸಂಸ್ಥೆಯ ಉದ್ಯೋಗಿ ಮಹಿಳೆಯೊಬ್ಬರು ಈಕೆಯನ್ನು ನೋಡಿ ವಿಚಾರಿಸಿದರು. ತಮ್ಮ ಮೊಬೈಲ್ ಸಂಖ್ಯೆ ನೀಡಿ, ‘ನನ್ನ ಕೆಲಸಕ್ಕೆ ತಡವಾಗಿದೆ. ಏನಾದರೂ ಸಹಾಯ ಬೇಕಾದರೆ ಫೋನು ಮಾಡು. ಯಾರೂ ಕರೆದರೂ ಹೋಗಬೇಡ’ ಎಂದು ತಿಳಿಸಿ ಬಸ್ ಹತ್ತಿ ತಮ್ಮ ಕೆಲಸಕ್ಕೆ ತೆರಳಿದ್ದರು.
ಆನಂತರ ಸಂತೈಸುವ ನೆಪದಲ್ಲಿ ಹಲವು ಮಹಿಳೆಯರು, ಯುವತಿಯರು ಕರೆದಿದ್ದರೂ ಈ ಹುಡುಗಿ ವಿಚಲಿತಳಾಗದೇ ಕುಳಿತಿದ್ದಳು. ಸಂಜೆ ವಾಪಸ್ಸಾದ ಆ ಮಹಿಳೆ ಸ್ಥಳೀಯ ಬಿಎಂಟಿಸಿ ಸಹಿತ ವಿವಿಧ ಅಧಿಕಾರಿಗಳ ನೆರವಿನೊಂದಿಗೆ ‘ಸಖಿ’ ಕೇಂದ್ರಕ್ಕೆ ಕರೆದುಕೊಂಡು ಹೋದರು. ಮರುದಿನ ಹೆತ್ತವರಿಗೆ ಬಾಲ್ಯ ವಿವಾಹ ಮಾಡಿದರೆ ಶಿಕ್ಷೆ ಏನು ಎಂಬುದರ ಅರಿವು ಮೂಡಿಸಿ ಯುವತಿಯನ್ನು ಊರಿಗೆ ಕಳುಹಿಸಿಕೊಡಲಾಯಿತು.
ಇತ್ತೀಚೆಗೆ ಗಂಡ, ಹೆಂಡತಿ ಮತ್ತು ಮಗ ರಾತ್ರಿ 10 ಗಂಟೆಯ ಸುಮಾರಿಗೆ ಬಿಎಂಟಿಸಿ ಬಸ್ ನಿಲ್ದಾಣಕ್ಕೆ ಬಂದಿದ್ದರು. ಮಗ ತಿಂಡಿ ಬೇಕು ಎಂದು ಕೇಳಿದ ಎಂಬ ಕಾರಣಕ್ಕೆ ಅಲ್ಲೇ ಪಕ್ಕದಲ್ಲಿದ್ದ ಅಂಗಡಿಯಿಂದ ತಿಂಡಿ ಖರೀದಿಸಲು ಗಂಡ ಮತ್ತು ಮಗ ಹೋಗಿದ್ದರು. ಮಹಿಳೆ ಅಲ್ಲಿಂದ ಕೇವಲ 10 ಅಡಿ ದೂರದಲ್ಲಿ ನಿಂತಿದ್ದರು. ಅದೇ ಹೊತ್ತಿಗೆ ಬಂದ ಪುರುಷನೊಬ್ಬ ಆ ಮಹಿಳೆಯಲ್ಲಿ ‘ಬರ್ತೀರಾ’ ಎಂದು ಕೇಳಿದ್ದ. ಕೂಡಲೇ ಆ ಮಹಿಳೆ ತನ್ನ ಗಂಡನನ್ನು ಕರೆದರು. ಅದನ್ನು ನೋಡಿ ಅಪರಿಚಿತ ಪುರುಷ ನಾಪತ್ತೆಯಾದ. ಈ ಕುಟುಂಬವು ಪೊಲೀಸರಿಗೆ ಈ ಘಟನೆಯನ್ನು ವಿವರಿಸಿದರೂ ಯಾವುದೇ ಪ್ರಯೋಜನವಾಗಲಿಲ್ಲ.
ಇಂಥ ಘಟನೆಗಳು ನಿರಂತರವಾಗಿ ನಡೆಯುತ್ತಿದ್ದರೂ ನಿಯಂತ್ರಿಸಲು ಯಾವುದೇ ಪ್ರಯತ್ನ ಆಗುತ್ತಿಲ್ಲ. ಪೊಲೀಸ್ ಬೀಟ್ ಇದೆಯಾದರೂ ಅವರು ಸುಮ್ಮನೆ ಬಂದು ಹೋಗುತ್ತಾರೆ. ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಬಿಎಂಟಿಸಿ ನೌಕಕರರೊಬ್ಬರು ಅಸಹಾಯಕತೆ ತೋಡಿಕೊಂಡರು.