ಮಂಗಳೂರು :ಕುಂಟಿಕಾನದಲ್ಲಿ ಮಕ್ಕಳು ಕಳ್ಳರಿದ್ದಾರೆ ! ವದಂತಿ ನಂಬಿದ ಜನರಲ್ಲಿ ಆತಂಕ, ಮಕ್ಕಳಿಂದಲೇ ಶುರುವಾಗಿತ್ತು 'ಕಳ್ಳರ ಗ್ಯಾಂಗ್' ಕತೆ, ಸುಳ್ಳು ಊರು ಸುತ್ತಿದ್ದು ಕೇಳಿ ಪೊಲೀಸರು ಸುಸ್ತು !

ಮಂಗಳೂರು: ನಗರದ ಕುಂಟಿಕಾನ ಬಳಿಯಿಂದ ಮಕ್ಕಳನ್ನು ಕದ್ದೊಯ್ಯಲಾಗಿದೆ ಎಂಬ ವದಂತಿಯ ಸಂದೇಶ ಇಂದು ಬೆಳಗ್ಗಿನಿಂದ ಭಾರೀ ವೈರಲ್ ಆಗಿದ್ದು ಆಸುಪಾಸಿನಲ್ಲಿ ಸಾರ್ವಜನಿಕರು ಭಯಕ್ಕೀಡಾಗಿದ್ದರು. ಕದ್ರಿ ಪೊಲೀಸರು ಸ್ಥಳಕ್ಕೆ ತೆರಳಿ ತನಿಖೆ ನಡೆಸಿ ಅದು ಬರೀ ವದಂತಿಯೆಂದು ಸ್ಪಷ್ಟಪಡಿಸಿದ್ದಾರೆ.
ಇಂದು ಬೆಳಗ್ಗೆ ಎಜೆ ಆಸ್ಪತ್ರೆ ಬಳಿಯ ಕುಂಟಿಕಾನದಲ್ಲಿ ಓಮ್ನಿ ಕಾರಿನಲ್ಲಿ ನಾಲ್ವರು ಬಂದು ಇಬ್ಬರು ಮಕ್ಕಳನ್ನು ಕಿಡ್ನಾಪ್ ಮಾಡಿದ್ದಾರೆಂದು ಸುದ್ದಿ ಹಬ್ಬಿತ್ತು. ಯಾರೋ ಮಕ್ಕಳಿಂದ ವಿಷಯ ತಿಳಿದ ಸ್ಥಳೀಯ ಮಹಿಳೆಯೊಬ್ಬರು ಈ ಬಗ್ಗೆ ಆಡಿಯೋ ಮೆಸೇಜನ್ನು ಪರಿಸರದ ಅಂಗನವಾಡಿ ಟೀಚರಿಗೆ ಹಾಕಿದ್ದರು. ಇದನ್ನು ನಂಬಿದ ಟೀಚರ್ ಮಕ್ಕಳ ಪೋಷಕರಿದ್ದ ಗ್ರೂಪಿಗೆ ವಾಯ್ಸ್ ಮೆಸೇಜ್ ಹಾಕಿ, ಯಾರೋ ಮಕ್ಕಳು ಕಳ್ಳರಿದ್ದಾರಂತೆ, ಜಾಗ್ರತೆ ಇರುವಂತೆ ಹೇಳಿದ್ದರು. ಈ ಎರಡೂ ವಾಯ್ಸ್ ಮೆಸೇಜ್ ಭಾರೀ ವೈರಲ್ ಆಗಿದ್ದು ಕುಂಟಿಕಾನದಲ್ಲಿ ಮಕ್ಕಳು ಕಳ್ಳರಿದ್ದಾರೆಂದು ಸಂದೇಶ ಜನರಿಗೆ ಹೋಗಿತ್ತು. ಜನರು ಇದನ್ನು ಹೌದೋ ಅಲ್ಲವೋ ಎಂದು ಪರಿಶೀಲಿಸುವ ಮೊದಲು ಭಯಕ್ಕೆ ಒಳಗಾಗಿದ್ದರು.
ವಿಷಯ ತಿಳಿದ ಕದ್ರಿ ಪೊಲೀಸರು ಸ್ಥಳಕ್ಕೆ ತೆರಳಿ ತನಿಖೆ ನಡೆಸಿದ್ದು ಮಧ್ಯಾಹ್ನ ವರೆಗೂ ಸ್ಥಳೀಯ ಸಾರ್ವಜನಿಕರಿಂದ ಮಾಹಿತಿ ಸಂಗ್ರಹಿಸಿದ್ದಾರೆ. ಅಂಗನವಾಡಿ ಟೀಚರನ್ನೂ ಮಾಹಿತಿ ಕೇಳಿದ್ದಾರೆ. ಯಾರೋ ಪೋಷಕರು ಹಾಕಿದ್ದಕ್ಕೆ ಜಾಗ್ರತೆ ಇರುವಂತೆ ಮೆಸೇಜ್ ಹಾಕಿದ್ದೆ ಎಂದು ಟೀಚರ್ ತಿಳಿಸಿದ್ದಾರೆ. ಬೆಳಗ್ಗೆ ಸೈಂಟ್ ಆ್ಯನ್ಸ್ ಶಾಲೆಯ ಬಳಿ ಯಾರೋ ಹೆಣ್ಮಗು ಆಟೋದಲ್ಲಿ ಅಳುತ್ತಿರುವುದನ್ನು ನೋಡಿದ ಮಕ್ಕಳು ಒಬ್ಬರಿಗೊಬ್ಬರು ಹೇಳುತ್ತಾ 'ಮಕ್ಕಳು ಕಳ್ಳರು ಬಂದಿದ್ದಾರೆ' ಎಂದು ಹೇಳಿಕೊಂಡಿದ್ದಾರೆ. ಅದೇ ಮಾತು ಮುಂದೆ ವದಂತಿಗೆ ಕಾರಣವಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ. ಸತ್ಯ ಒಂದು ಸುತ್ತು ಬರುವಷ್ಟರಲ್ಲಿ ಸುಳ್ಳು ಇಡೀ ಊರು ಸುತ್ತಿರುತ್ತದೆ ಅನ್ನುವ ಹಾಗಾಗಿದೆ ಕತೆ. ಮಾಧ್ಯಮದ ಪ್ರಶ್ನೆಗೆ ಪೊಲೀಸ್ ಕಮಿಷನರ್ ಸುಧೀರ್ ರೆಡ್ಡಿ, ಅದೊಂದು ವದಂತಿಯಷ್ಟೇ ಎಂದು ಹೇಳಿದ್ದಾರೆ.