ಆರೋಗ್ಯ :ಮಧುಮೇಹದಿಂದ ನರಗಳಿಗೆ ಹಾನಿ ಉಂಟಾದಾಗ ದೇಹದಲ್ಲಿ ಕಾಣಿಸಿವ ಚಿಹ್ನೆಗಳು ಯಾವುವು?; ನರಗಳಿಗೆ ಹಾನಿ ತಡೆಗಟ್ಟುವುದು ಹೇಗೆ?

ಆರೋಗ್ಯ :ದೇಶದಲ್ಲಿ ಮಧುಮೇಹ ಕಾಯಿಲೆ ಹೊಂದಿರುವವರ ಸಂಖ್ಯೆ ಹೆಚ್ಚಾಗುತ್ತಿರುವುದು ತುಂಬಾ ಕಳವಳಕಾರಿ ವಿಷಯವಾಗಿದೆ. ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿರ್ವಹಿಸುವುದು ಸಮತೋಲಿತ ಆಹಾರವನ್ನು ಸೇವಿಸುವುದು, ಮೂತ್ರಪಿಂಡದ ಕಾರ್ಯವನ್ನು ನಿರ್ಣಯಿಸುವುದು ಹಾಗೂ ದೃಷ್ಟಿ ನಷ್ಟವನ್ನು ಹೆಚ್ಚಾಗಿ ಮಧುಮೇಹದ ಬಗ್ಗೆ ಚರ್ಚಿಸಲಾಗುತ್ತದೆ. ಅನೇಕ ಜನರು ನಿರ್ಲಕ್ಷಿಸುವ ಮಧುಮೇಹದ ಪರಿಣಾಮಗಳಲ್ಲಿ ಒಂದು ನರ ಹಾನಿಯು ಕೂಡ ಒಂದಾಗಿದೆ. ಇದನ್ನು ಮಧುಮೇಹ ನರರೋಗ ಎಂದು ಹೇಳಲಾಗುತ್ತದೆ.
ಮಧುಮೇಹದಿಂದ ಬಳಲುತ್ತಿರುವ ಅನೇಕ ಜನರು ಮಧುಮೇಹ ನರರೋಗದ ಆರಂಭಿಕ ಲಕ್ಷಣಗಳನ್ನು ಗುರುತಿಸಲು ವಿಫಲರಾಗುತ್ತಾರೆ. ಮಧುಮೇಹ ನರರೋಗದಲ್ಲಿ ಚಿಕ್ಕ ಚಿಹ್ನೆಗಳು ಕಾಣಿಸುತ್ತವೆ. ಅನೇಕ ಜನರು ಅವುಗಳ ಬಗ್ಗೆ ಹೆಚ್ಚು ಗಮನ ಹರಿಸುವುದಿಲ್ಲ. ಈ ಚಿಹ್ನೆಗಳು ದೈನಂದಿನ ಚಟುವಟಿಕೆಗಳು, ಚಲನಶೀಲತೆ ಹಾಗೂ ಆರೋಗ್ಯದ ಮೇಲೆ ತುಂಬಾ ಪರಿಣಾಮ ಬೀರುವ ಮಟ್ಟವನ್ನು ತಲುಪುವವರೆಗೆ ಅಪಾಯ ಸೃಷ್ಟಿಸುತ್ತವೆ. ಮಧುಮೇಹ ನರರೋಗದ ಆರಂಭಿಕ ಕಾಣಿಸುವ ಚಿಹ್ನೆ ಲಕ್ಷಣಗಳೇನು? ತಡೆಗಟ್ಟುವ ಕ್ರಮಗಳು ಹಾಗೂ ಗಮನಿಸಬೇಕಾದ ಇತರ ವಿವರಗಳ ಕುರಿತು ಆರೋಗ್ಯ ತಜ್ಞರು ತಿಳಿಸುವುದೇನು ಎಂಬುದನ್ನು ತಿಳಿದುಕೊಳ್ಳೋಣ.
ಏನಿದು ಮಧುಮೇಹ ನರರೋಗ?: ರಕ್ತದಲ್ಲಿ ಗ್ಲೂಕೋಸ್ ಮಟ್ಟ ಹೆಚ್ಚಾದಾಗ ನರಮಂಡಲಕ್ಕೆ ಅಗತ್ಯವಾದ ಪೋಷಕಾಂಶಗಳನ್ನು ಪೂರೈಸುವ ಸಣ್ಣ ರಕ್ತನಾಳಗಳಿಗೆ ಹಾನಿಯಾದಾಗ ಈ ಸ್ಥಿತಿ ಉಂಟಾಗುತ್ತದೆ. ಮಧುಮೇಹ ನರರೋಗ ಕ್ರಮೇಣ ಬೆಳವಣಿಗೆಯಾಗುತ್ತದೆ. ಮಧುಮೇಹ ನರರೋಗದಲ್ಲಿ ದೇಹದ ವ್ಯವಸ್ಥೆಗಳು ರೋಗದ ಉತ್ತುಂಗ ಹಂತವನ್ನು ತಲುಪಿದಾಗ ನರ ಮಾರ್ಗಗಳು ಹಾನಿಗೊಳಗಾಗುತ್ತವೆ. ಈ ಸ್ಥಿತಿಯಿಂದ ಬಳಲುತ್ತಿರುವ ವ್ಯಕ್ತಿಯು ದೇಹದಾದ್ಯಂತ ಮರಗಟ್ಟುವಿಕೆ ಹಾಗೂ ಜುಮ್ಮೆನಿಸುವಿಕೆ ಅನುಭವಿಸುತ್ತಾನೆ. ಮಧುಮೇಹ ನರರೋಗವು ಸಾಮಾನ್ಯವಾಗಿ ಮೊದಲು ಕೈ, ಕಾಲುಗಳಲ್ಲಿನ ನರಗಳ ಮೇಲೆ ಪರಿಣಾಮ ಬೀರುತ್ತದೆ. ಬಳಿಕ ಸ್ಥಿತಿ ಹದಗೆಟ್ಟಂತೆ ಜೀರ್ಣಕ್ರಿಯೆಯ ಮೇಲೆ ನಕಾರಾತ್ಮಕ ಪರಿಣಾಮ ಉಂಟು ಮಾಡುತ್ತದೆ. ಜೊತೆಗೆ ಮೂತ್ರ ವಿಸರ್ಜನೆಯ ಸಮಸ್ಯೆಗಳಿಗೆ ಕೂಡ ಕಾರಣವಾಗುತ್ತದೆ.

ಆರಂಭಿಕ ಚಿಹ್ನೆಗಳು ಯಾವುವು?: ಮಧುಮೇಹ ನರರೋಗದಲ್ಲಿ ನರ ಹಾನಿಯ ಚಿಹ್ನೆಗಳು ಮೊದಲು ಕೈ ಹಾಗೂ ಕಾಲುಗಳ ನರಗಳಲ್ಲಿ ಕಂಡುಬರುತ್ತವೆ. ಈ ಸ್ಥಿತಿಯು ಕಾಲ್ಬೆರಳುಗಳಲ್ಲಿ ಸಂವೇದನೆಯ ನಷ್ಟವನ್ನು ಉಂಟುಮಾಡುತ್ತದೆ. ಜುಮ್ಮೆನಿಸುವಿಕೆ, ಸುಡುವಿಕೆ ಹಾಗೂ ನೋವನ್ನು ಉಂಟುಮಾಡುತ್ತದೆ. ಕ್ರಮೇಣ ಮರಗಟ್ಟುವಿಕೆಗೆ ಕಾರಣವಾಗುತ್ತದೆ. ಸ್ಥಿತಿಯ ನಂತರ ಸಕ್ಕರೆ ಮಟ್ಟವು ಮಿತಿಯನ್ನು ಮೀರಿ ಏರಿದಾಗ ನರಗಳು ದುರ್ಬಲಗೊಳ್ಳುತ್ತವೆ. ಮುಂದುವರೆದಂತೆ ನರಗಳ ಹಾನಿಯ ಅಪಾಯ ಹೆಚ್ಚಾಗುತ್ತದೆ ಎಂದು ತಜ್ಞರು ತಿಳಿಸುತ್ತಾರೆ.
ಮುಂದುವರೆದಂತೆ ಕಂಡುಬರುವ ಲಕ್ಷಣಗಳಿವು: ಮಧುಮೇಹ ನರರೋಗದ ಸ್ಥಿತಿ ಮುಂದುವರೆದಂತೆ ನರ ಹಾನಿಯ ಲಕ್ಷಣಗಳು ಮತ್ತಷ್ಟು ತೀವ್ರವಾಗುತ್ತವೆ. ನಿಮ್ಮ ದೇಹದಲ್ಲಿ ಗಾಯಗಳು ಗುಣವಾಗದಿರುವಂತಹ ಗಂಭೀರ ವೈದ್ಯಕೀಯ ಸಮಸ್ಯೆಗಳಿಗೆ ಕಾರಣವಾಗುವ ಸೋಂಕುಗಳನ್ನು ಬೆಳೆಯುವ ಅಪಾಯ ಕೂಡ ಹೆಚ್ಚಿರುತ್ತದೆ. ರಾತ್ರಿಯಲ್ಲಿ ತೀಕ್ಷ್ಣವಾದ ಕಾಲು ನೋವು, ಸ್ನಾಯು ದೌರ್ಬಲ್ಯ ಹಾಗೂ ನೋವಿನಿಂದ ಇತರರು ನಿದ್ರಾಹೀನತೆಯ ಸಮಸ್ಯೆಯನ್ನು ಎದುರಿಸಬಹುದು. ಕೈ ಮತ್ತು ಕಾಲುಗಳನ್ನು ಮೀರಿ, ಮಧುಮೇಹ ನರರೋಗವು ಜೀರ್ಣಕ್ರಿಯೆ, ಮೂತ್ರಕೋಶ ನಿಯಂತ್ರಣ, ಹೃದಯ ಬಡಿತ, ರಕ್ತದೊತ್ತಡ ನಿಯಂತ್ರಣದ ಮೇಲೆ ಪರಿಣಾಮ ಉಂಟು ಮಾಡುತ್ತದೆ. ದೇಹದಾದ್ಯಂತ ನರಗಳ ಪಾತ್ರ ಪ್ರಮುಖವಾಗಿದೆ. ನಿರ್ಲಕ್ಷ್ಯ ತೋರಿದರೆ ನರ ಹಾನಿಯ ಅಪಾಯ ಮತ್ತಷ್ಟು ಹೆಚ್ಚಾಗುತ್ತದೆ. ಜೊತೆಗೆ ಗಂಭೀರ ಆರೋಗ್ಯ ಸ್ಥಿತಿಗೂ ಕಾರಣವಾಗುತ್ತದೆ ಎಂದು ವೈದ್ಯ ಡಾ.ಕುಮಾರ ಕಂಠೀಮಠ ವಿವರಿಸುತ್ತಾರೆ.

ಮಧುಮೇಹ ನರರೋಗದಿಂದ ಉಂಟಾಗುವ ಪರಿಣಾಮಗಳೇನು?: ರಕ್ತದಲ್ಲಿನ ದೀರ್ಘಕಾಲೀನ ಅನಿಯಂತ್ರಿತ ಸಕ್ಕರೆ ಮಟ್ಟಗಳು ಮಧುಮೇಹ ನರರೋಗದ ಅಪಾಯವನ್ನು ಗಮನಾರ್ಹವಾಗಿ ಹೆಚ್ಚಿಸುತ್ತವೆ. ಈಗಾಗಲೇ ಮಧುಮೇಹದಿಂದ ಬಳಲುತ್ತಿರುವ ಹಲವು ಜನರು ಈ ಸ್ಥಿತಿಯನ್ನು ಅನುಭವಿಸಬಹುದು. ಅಧಿಕ ರಕ್ತದೊತ್ತಡ, ಬೊಜ್ಜು, ಕೊಲೆಸ್ಟ್ರಾಲ್ ಮಟ್ಟ ಏರಿಕೆ ಹಾಗೂ ಕೆಟ್ಟ ಜೀವನಶೈಲಿ ಇರುವವರಲ್ಲಿ ವೇಗವಾಗಿ ಬೆಳೆಯುತ್ತದೆ. ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಪರೀಕ್ಷಿಸುವ ಮೊದಲು ಆರೋಗ್ಯಕರ ಜೀವನಶೈಲಿ ಅನುಸರಿಸುವುದು ಮುಖ್ಯವಾಗುತ್ತದೆ. ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿರ್ವಹಿಸಲು ಆರೋಗ್ಯಕರ ಜೀವನಶೈಲಿ, ಸಮತೋಲಿತ ಆಹಾರ, ವ್ಯಾಯಾಮ, ಔಷಧಗಳು ತುಂಬಾ ಮುಖ್ಯ. ಇವುಗಳನ್ನು ಪಾಲಿಸುವುದರಿಂದ ನರಗಳಿಗೆ ಆಗುವ ಹಾನಿಯನ್ನು ಸುಧಾರಿಸಲು ಸಾಧ್ಯವಾಗುತ್ತದೆ.
