ಪಾಟ್ನಾ :ಕಾರ್ಯಕ್ರಮದಲ್ಲಿ ನರ್ತಕಿ ಬಾಯಿಗೆ ನಾಣ್ಯಗಳನ್ನು ಹಾಕಿದ ಪ್ರೇಕ್ಷಕರು: ಡ್ಯಾನ್ಸರ್ ಅಸ್ವಸ್ಥ, ಆಸ್ಪತ್ರೆಗೆ ದಾಖಲು...!!
ಪಾಟ್ನಾ: ವೇದಿಕೆ ಮೇಲೆ ನೃತ್ಯ ಪ್ರದರ್ಶನ ನೀಡುವವರ ಮೇಲೆ ಪ್ರೇಕ್ಷಕರು ಹುಮ್ಮಸ್ಸಿನಲ್ಲಿ ನೋಟು ಎಸೆಯುವುದು ಸಾಮಾನ್ಯ. ಆದರೆ, ಇಲ್ಲಿ ನರ್ತಕಿಯ ಬಾಯಿಗೆ ಒತ್ತಾಯಪೂರ್ವಕವಾಗಿ ನಾಣ್ಯಗಳನ್ನು ಹಾಕಿದ ಘಟನೆ ನಡೆದಿದೆ. ಪರಿಣಾಮ ಉಸಿರುಗಟ್ಟಿ ಅಸ್ವಸ್ಥರಾಗಿದ್ದ ನರ್ತಕಿಯನ್ನು ತಕ್ಷಣವೇ ಆಸ್ಪತ್ರೆಗೆ ದಾಖಲಿಸಲಾಗಿದೆ.
ಬಿಹಾರದ ಭೋಜ್ಪುರ ಜಿಲ್ಲೆಯ ಪ್ರಧಾನ ಕಚೇರಿಯಾಗಿರುವ ಅರಾ ಪಟ್ಟಣದ ಚಂದ್ವಾ ಟೋಲಾ ಪ್ರದೇಶದಲ್ಲಿ ಗುರುವಾರ ರಾತ್ರಿ ಆಯೋಜಿಸಿದ್ದ ನೃತ್ಯ ಕಾರ್ಯಕ್ರಮದಲ್ಲಿ ಆತಂಕಕಾರಿ ಘಟನೆ ನಡೆದಿದೆ.
ಪ್ರೇಕ್ಷಕರ ಉದ್ಧಟತನ: ವಿವಿಧ ಹಿಂದಿ ಮತ್ತು ಭೋಜ್ಪುರಿ ಹಾಡುಗಳಿಗೆ ನರ್ತಕಿ ನೃತ್ಯ ಪ್ರದರ್ಶನ ಮಾಡುತ್ತಿದ್ದರು. ವೀಕ್ಷಿಸಿಲು ಜನ ಸಮೂಹವೇ ಸೇರಿತ್ತು. ನರ್ತಕಿ ನೃತ್ಯ ಮಾಡುವಾಗ ಪ್ರೇಕ್ಷಕರಲ್ಲಿದ್ದ ಕೆಲ ಪುರುಷರು ವೇದಿಕೆಗೆ ನುಗ್ಗಿದರು. ಬಳಿಕ ಡ್ಯಾನ್ಸ್ ಮಾಡುತ್ತಿದ್ದ ನರ್ತಕಿಯನ್ನು ಹಿಡಿದು, ಬಲವಂತವಾಗಿ ಬಾಯಿ ತೆರೆದು ಹಲವು ನಾಣ್ಯಗಳನ್ನು ಹಾಕಿದ್ದಲ್ಲದೇ ನುಂಗುವಂತೆ ಬಾಯಿ ಮುಚ್ಚಿಸಿದ್ದರು. ಇದರಿಂದ ಉಸಿರುಗಟ್ಟಿ ನರ್ತಕಿ ಅಸ್ವಸ್ಥರಾಗಿದ್ದರು.
ನಾಣ್ಯ ನುಂಗಿರುವ ಸಾಧ್ಯತೆ: "ನನ್ನ ಹೆಂಡತಿ ನೃತ್ಯ ಮಾಡುವಾಗ ಕೆಲ ಪ್ರೇಕ್ಷಕರು ವೇದಿಕೆಗೆ ನುಗ್ಗಿ, ಬಲವಂತವಾಗಿ ಅವಳ ಬಾಯಿಗೆ ನಾಣ್ಯಗಳನ್ನು ಹಾಕಿದರು. ಜೊತೆಗೆ ಅವಳ ಬಾಯಿ ನಾಣ್ಯಗಳಿಂದ ತುಂಬಿದ್ದರಿಂದ ಉಸಿರಾದ ತೊಂದರೆ ಉಂಟಾಗಿತ್ತು. ಆಕೆಯ ಬಾಯಿಯಿಂದ ನಾನೇ ನಾಣ್ಯಗಳನ್ನು ತೆಗೆದೆ. ಆದರೆ, ಒಂದು ಅಥವಾ ಎರಡು ನಾಣ್ಯ ನುಂಗಿದ್ದರಿಂದ ತೀವ್ರವಾಗಿ ಅಸ್ವಸ್ಥಗೊಂಡಿದ್ದಳು. ತಕ್ಷಣವೇ ನಾವು ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದೊಯ್ದಿದ್ದೇವೆ" ಎಂದು ನರ್ತಕಿಯ ಪತಿ ರಾಜು ಕುಮಾರ್ ವರದಿಗಾರರಿಗೆ ತಿಳಿಸಿದ್ದಾರೆ.
ನರ್ತಕಿ ಉಸಿರಾಟದ ತೊಂದರೆ ಮತ್ತು ವಾಕರಿಕೆಯಿಂದ ಬಳಲುತ್ತಿದ್ದರು. ಪ್ರೇಕ್ಷಕರು ಭದ್ರತಾ ವ್ಯವಸ್ಥೆಗಳನ್ನು ಉಲ್ಲಂಘಿಸಿರುವುದು ಗೊತ್ತಾಗಿದೆ.
ವೈದ್ಯರು ಹೇಳಿದ್ದಿಷ್ಟು: "ಗುರುವಾರ ರಾತ್ರಿ 9 ರಿಂದ 11 ಗಂಟೆಯ ನಡುವೆ ರೋಗಿಯು ಆಸ್ಪತ್ರೆಗೆ ಬಂದಾಗ ಕರ್ತವ್ಯದಲ್ಲಿದ್ದ ವೈದ್ಯರು ಪರೀಕ್ಷಿಸಿದರು. ನಾಣ್ಯವನ್ನು ನುಂಗಿ ಅಸ್ವಸ್ಥತೆ ಅನುಭವಿಸುತ್ತಿರುವ ಬಗ್ಗೆ ದೂರು ಬಂದ ಹಿನ್ನೆಲೆ ಅಲ್ಲಿ ಎಂಡೋಸ್ಕೋಪಿ ಸೌಲಭ್ಯವಿರಲಿಲ್ಲ. ಕಾರಣ, ಬೇರೆ ಆಸ್ಪತ್ರೆಗೆ ಕಳುಹಿಸಲಾಗಿದೆ" ಎಂದು ಭೋಜ್ಪುರ ಸಿವಿಲ್ ಸರ್ಜನ್ ಶಿವೇಂದ್ರ ಕುಮಾರ್ ಸಿನ್ಹಾ ಅವರು ಈಟಿವಿ ಭಾರತಕ್ಕೆ ಮಾಹಿತಿ ನೀಡಿದ್ದಾರೆ.
ರೋಗಿಯ ಹೆಸರನ್ನು ಬಹಿರಂಗಪಡಿಸಲಿಲ್ಲ, ಆದರೆ ವೈದ್ಯಕೀಯ ಸಲಹೆಯ ಮೇರೆಗೆ ಹೆಚ್ಚಿನ ಚಿಕಿತ್ಸೆಗಾಗಿ ಅವರೊಂದಿಗೆ ಇದ್ದ ಜನರು ಅವಳನ್ನು ಕರೆದುಕೊಂಡು ಹೋದರು ಎಂದು ಹೇಳಿದರು.
ಘಟನೆ ಬಗ್ಗೆ ಎಎಸ್ಪಿ ಪ್ರತಿಕ್ರಿಯೆ ಹೀಗಿದೆ: ಈ ಘಟನೆಯ ಬಗ್ಗೆ ನಮಗೆ ಯಾವುದೇ ಮಾಹಿತಿ ಇಲ್ಲ. ಯಾರೂ ಈ ಬಗ್ಗೆ ದೂರು ನೀಡಿಲ್ಲ. ಚಂದ್ವಾ ಟೋಲಾ ಪ್ರದೇಶದಲ್ಲಿ ಇಂತಹ ಕಾರ್ಯಕ್ರಮಗಳನ್ನು ಆಯೋಜಿಸುವ ಕೆಲವು ರೆಸಾರ್ಟ್ಗಳಿವೆ. ನಮಗೆ ಯಾವುದೇ ದೂರು ಅಥವಾ ಮಾಹಿತಿ ಬಂದರೆ ತನಿಖೆಯ ಪ್ರಾರಂಭಿಸುತ್ತೇವೆ. ಇಂತಹ ಕಾರ್ಯಕ್ರಮಗಳಲ್ಲಿನ ಭದ್ರತಾ ವ್ಯವಸ್ಥೆ ಪರಿಶೀಲಿಸಲಾಗುವುದು ಎಂದು ಭೋಜ್ಪುರದ ಹೆಚ್ಚುವರಿ ಪೊಲೀಸ್ ಸೂಪರಿಂಟೆಂಡೆಂಟ್ (ಎಎಸ್ಪಿ) ರಾಜ್ಕುಮಾರ್ ಅವರು ಈಟಿವಿ ಭಾರತಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ.