ಚಿತ್ರದುರ್ಗ:ವರ್ಷ ಲಿವಿಂಗ್ ಟುಗೆದರ್ ಇದ್ದು, ಈಗ ಬೇರೆ ಮದುವೆಯಾಗಲು ಹೊರಟ ಯುವತಿ – ಮುಂದೇನಾಯ್ತು?

ಚಿತ್ರದುರ್ಗ :ಆರು ವರ್ಷಗಳ ಕಾಲ ಲಿವ್-ಇನ್ ರಿಲೇಶನ್ಶಿಪ್ನಲ್ಲಿದ್ದ ಪ್ರೇಮಿಗಳಿಬ್ಬರ ನಡುವಿನ ವಿವಾದ ಬೀದಿಗೆ ಬಂದಿದೆ. ಒಂದೇ ಮನೆಯಲ್ಲಿ ಜೀವನ ನಡೆಸಿ, ಈಗ ಕಾರಣವಿಲ್ಲದೇ ಕೈಕೊಟ್ಟು ಬೇರೊಬ್ಬನ ಜೊತೆ ಮದುವೆಗೆ ಸಿದ್ಧಳಾಗಿದ್ದಾಳೆ ಎಂದು ಆರೋಪಿಸಿ ಯುವಕನೋರ್ವ ರಂಪಾಟ ನಡೆಸಿರುವ ಘಟನೆ ಚಿತ್ರದುರ್ಗ ನಗರದ ಹೊರವಲಯದಲ್ಲಿರುವ ಮಾಳಪ್ಪನಹಟ್ಟಿಯಲ್ಲಿ ನಡೆದಿದೆ.
ರವಿಕುಮಾರ್ ಮತ್ತು ಯುವತಿ ಇಬ್ಬರೂ ಬೆಂಗಳೂರಿನಲ್ಲಿ ಒಟ್ಟಿಗೆ ಬಿ.ಇ ಹಾಗೂ ಎಂ.ಟೆಕ್ ವ್ಯಾಸಂಗ ಮಾಡಿದ್ದರು. ಬಳಿಕ ಇಬ್ಬರೂ ಒಂದೇ ಕಂಪನಿಯಲ್ಲಿ ಉದ್ಯೋಗ ಮಾಡುತ್ತಿದ್ದರು. ಈ ಪರಿಚಯ ಪ್ರೇಮಕ್ಕೆ ತಿರುಗಿತ್ತು. ಪರಿಣಾಮವಾಗಿ ಕಳೆದ 6 ವರ್ಷಗಳಿಂದ ಬೆಂಗಳೂರಿನಲ್ಲಿ ಒಂದೇ ಮನೆಯಲ್ಲಿ ವಾಸವಿದ್ದೆವು ಎಂದು ರವಿಕುಮಾರ್ ಹೇಳಿಕೊಂಡಿದ್ದಾರೆ. ‘ಆದರೆ, ಈಗ ಯಾವುದೇ ಬಲವಾದ ಕಾರಣವಿಲ್ಲದೇ ಆಕೆ ನನಗೆ ಕೈಕೊಟ್ಟಿದ್ದಾಳೆ. ನನ್ನನ್ನು ದೂರವಿಟ್ಟು ಬೇರೊಬ್ಬ ಯುವಕನ ಜೊತೆ ಮದುವೆಯಾಗಲು ಸಿದ್ಧತೆ ನಡೆಸುತ್ತಿದ್ದಾಳೆ ಎಂದು ರವಿಕುಮಾರ್ ಅಳಲು ತೋಡಿಕೊಂಡಿದ್ದಾರೆ.
ಈ ಬಗ್ಗೆ ನಾನು ಈಗಾಗಲೇ ನ್ಯಾಯಾಲಯದ ಮೊರೆ ಹೋಗಿದ್ದೇನೆ. ಪ್ರಕರಣ ಕೋರ್ಟ್ನಲ್ಲಿದ್ದರೂ, ತೀರ್ಪು ಬರುವ ಮುನ್ನವೇ ಆಕೆ ಮತ್ತು ಆಕೆಯ ಮನೆಯವರು ಮದುವೆ ಮಾಡಲು ಮುಂದಾಗಿದ್ದಾರೆ. ಪ್ರೇಯಸಿ ತೇಜಸ್ವಿನಿ ಹಾಗೂ ಆಕೆಯ ಕುಟುಂಬಸ್ಥರು ನನಗೆ ಅನ್ಯಾಯ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಈಗಾಗಲೇ ಈ ವಿಷಯ ಕೋರ್ಟ್ ಅಂಗಳದಲ್ಲಿದೆ. ಇದೇ ತಿಂಗಳು 28ರಂದು (ಫೆಬ್ರವರಿ 28) ವಿಚಾರಣೆ ಇದೆ. ನಾವು ಏನೇ ಉತ್ತರಿಸುವುದಿದ್ದರೂ ಕೋರ್ಟ್ನಲ್ಲೇ ಉತ್ತರಿಸುತ್ತೇವೆ. ಅದನ್ನು ಬಿಟ್ಟು ಹೀಗೆ ಮನೆ ಮುಂದೆ ಬಂದು ಗಲಾಟೆ ಮಾಡುವುದಲ್ಲ. ಈತನ ಧರಣಿ ಮತ್ತು ರಂಪಾಟದ ವಿರುದ್ಧ ನಾವು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸುತ್ತೇವೆ’ ಎಂದು ಯುವತಿಯ ಪೋಷಕರು ಎಚ್ಚರಿಸಿದ್ದಾರೆ.