ಗಂಗಾವತಿ: ಅಪರೂಪದ ಬೆಕ್ಕಿನ ತಳಿ ಪತ್ತೆ;ಪ್ರಾಣಿ ಪ್ರಿಯರಲ್ಲಿ ಹೆಚ್ಚಿದ ಕುತೂಹಲ..!!
ಗಂಗಾವತಿ: ಪ್ರಾಕೃತಿಕ ಸಿರಿ, ಸಮೃದ್ಧ ಬೆಟ್ಟ-ಗುಡ್ಡ, ಯಥೇಚ್ಛ ಮರಗಿಡಗಳ ಹಚ್ಚಹಸಿರಿನಿಂದ ಕಂಗೊಳಿಸುತ್ತಿರುವ ಪರಿಸರದಿಂದಾಗಿ ಗಂಗಾವತಿ - ಆನೆಗೊಂದಿ ಪ್ರದೇಶದ ಭಾಗ ವೈವಿಧ್ಯಮಯ ವನ್ಯಜೀವಿಗಳ ಆವಾಸ ಸ್ಥಾನದಂತಾಗಿದೆ. ಅದರಲ್ಲೂ ವಿಶೇಷವಾಗಿ ತುಂಗಭದ್ರಾ ನದಿಯಲ್ಲಿ ಕಾಣ ಸಿಗುವ ಅಪರೂಪದ ನೀರುನಾಯಿ, ಬೆಡ್ಡಗುಡ್ಡಗಳಲ್ಲಿನ ಚಿರತೆ, ಕರಡಿ ಹೀಗೆ ಬಗೆ ಬಗೆಯ ಪ್ರಾಣಿ ಸಂಕುಲದಿಂದ ಇದು ಸಮೃದ್ಧವಾಗಿದೆ.
ಪ್ರಾಣಿಪ್ರೀಯರಲ್ಲಿ ಕುತೂಹಲ ಹೆಚ್ಚಿದ ಹೊಸ ತಳಿಯ ಬೆಕ್ಕು: ಇದೀಗ ಇಲ್ಲಿ ಅಪರೂಪದ ಬೆಕ್ಕಿನ ತಳಿಗಳು ಪತ್ತೆಯಾಗುತ್ತಿರುವುದು ಪ್ರಾಣಿ ಪ್ರಿಯರ ಕುತೂಹಲಕ್ಕೆ ಕಾರಣವಾಗಿದೆ. ಗಂಗಾವತಿಯ ಜಯನಗರ-ಸಿದ್ಧಿಕೇರಿ ಬೆಟ್ಟದ ಪ್ರದೇಶದಲ್ಲಿ ಅಪರೂಪದ ಬೆಕ್ಕಿನ ತಳಿಯ ಸಂತತಿಗಳಿರುವುದನ್ನು ಅರಣ್ಯ ಇಲಾಖೆಯ ಅಧಿಕಾರಿಗಳು ಪತ್ತೆ ಹಚ್ಚಿದ್ದಾರೆ. ಈ ಬಗ್ಗೆ ಸ್ವತಃ ಅಧಿಕಾರಿಗಳು ಖಚಿತ ಪಡಿಸಿದ್ದಾರೆ.
ಅಧಿಕಾರಿಗಳಿಗೆ ಈ ಭಾಗದಲ್ಲಿ ಅಪರೂಪದ ಬೆಕ್ಕುಗಳು ಸಂಚರಿಸುತ್ತಿರುವುದು ಗೋಚರಿಸಿದೆ. ಸಿದ್ದಿಕೇರಿ ರಸ್ತೆಯಲ್ಲಿರುವ ಗಾಯಕ್ವಾಡ್ ಎಂಬುವವರ ಫಾರ್ಮ್ಹೌಸ್ ಸಮೀಪದ ಭತ್ತದ ಗದ್ದೆ ಮತ್ತು ಜನವಸತಿ ಪ್ರದೇಶದಲ್ಲಿ ಮರಿ ಚಿರತೆ ಓಡಾಡುತ್ತಿದೆ ಎಂದು ಮಾಲಿಕ ಗೀರೀಶ್ ಗಾಯಕ್ವಾಡ್ ಆತಂಕ ವ್ಯಕ್ತಪಡಿಸಿದ್ದರು.
ಮಲಬಾರ್, ಪಾಮ್ ಸಿವೆಟ್: ಗಸ್ತಿಗೆ ಹೋದ ಅರಣ್ಯ ಸಿಬ್ಬಂದಿ ಅದು ಚಿರತೆ ಮರಿಯಲ್ಲ ಎಂಬುದನ್ನು ಖಚಿತ ಪಡಿಸಿಕೊಂಡಿದ್ದಾರೆ. ಅದು ಕಾಡು ಬೆಕ್ಕು. ಕಾಮನ್ ಜಂಗಲ್ ಕ್ಯಾಟ್, ಲೆಪರ್ಡರ್ ಕ್ಯಾಟ್, ಮಲಬಾರ್ ಸಿವೆಟ್ ಕ್ಯಾಟ್, ಪಾಮ್ ಸಿವೆಟ್ ಕ್ಯಾಟ್ ಹೀಗೆ ನಾನಾ ಬಗೆಯ ಕಾಡು ಬೆಕ್ಕುಗಳಿವೆ ಎಂಬುವುದನ್ನು ಪತ್ತೆ ಹಚ್ಚಿದ್ದಾರೆ.
ಅದು ಅಪರೂಪದ ಬೆಕ್ಕು ಅಥವಾ ಕಾಡು ಬೆಕ್ಕು ಎಂಬುದನ್ನು ಲಿಖಿತ ಪೂರ್ವಕ ಮಾಹಿತಿ ನೀಡಲು ಸಿದ್ಧ ಎಂದು ಹೇಳಿಕೊಂಡಿರುವ ಅರಣ್ಯ ಇಲಾಖೆಯ ಅಧಿಕಾರಿಗಳು, ಚಿರತೆ ಎಂದು ಜನರು ಭಯಬೀಳುವುದು ಬೇಡ ಎಂದು ಹೇಳಿದ್ದಾರೆ. ವದಂತಿಗಳಿಂದ ಜನರಲ್ಲಿ ಭಯದ ವಾತಾವರಣ ಸೃಷ್ಟಿಯಾಗುತ್ತಿದೆ. ಅಂತಹ ವದಂತಿಗಳಿಗೆ ಕಿವಿಕೊಡಬೇಡಿ, ಕಾಡುಪ್ರಾಣಿಗಳ ಬಗ್ಗೆ ಸುಖಾಸುಮ್ಮನೆ ದ್ವೇಷ ಭಾವನೆ ಬೆಳೆಸಿಕೊಳ್ಳಬಾರದು ಎಂದು ಮನವಿ ಮಾಡಿಕೊಂಡಿದ್ದಾರೆ.