ತುಮಕೂರು :ಯುವಕರಿಂದ ಗಲಾಟೆ: ಮನನೊಂದು ರಾತ್ರೋರಾತ್ರಿ ಮಠ ತೊರೆದ ಶ್ರೀಗಳು!

ತುಮಕೂರು: ಪ್ಲೆಕ್ಸ್ ವಿಚಾರಕ್ಕೆ ನಡೆದ ಕ್ಷುಲ್ಲಕ ಗಲಾಟೆ ಈಗ ದೊಡ್ಡ ತಿರುವು ಪಡೆದುಕೊಂಡಿದೆ. ಅಪಾರ ಭಕ್ತರನ್ನ ಹೊಂದಿರುವ ಬೆಳ್ಳಾವಿ ಮಠದ ಸ್ವಾಮೀಜಿಯವರ ಮೇಲೆ ಗ್ರಾಮದ ಯುವಕರೇ ಗಲಾಟೆ ಮಾಡಿದ್ದು, ಇದರಿಂದ ಮನನೊಂದ ಸ್ವಾಮೀಜಿ ಮಠವನ್ನೇ ತೊರೆದಿರುವ ಘಟನೆ ತುಮಕೂರಿನಲ್ಲಿ ನಡೆದಿದೆ.
ತುಮಕೂರು ತಾಲೂಕಿನ ಬೆಳ್ಳಾವಿ ಕಾರದ ಮಠದ ಆವರಣದಲ್ಲಿ ಎರಡು ದಿನಗಳ ಹಿಂದೆ ಗ್ರಾಮದ ವೀರಗಾಸೆ ವೀರೇಶ್ ಎಂಬ ಯುವಕನ ಹುಟ್ಟುಹಬ್ಬಕ್ಕೆ ಶುಭಕೋರಿ ಪ್ಲೆಕ್ಸ್ ಕಟ್ಟಲಾಗಿತ್ತು. ಆದರೆ, ಯಾರೋ ಕಿಡಿಗೇಡಿಗಳು ಈ ಪ್ಲೆಕ್ಸ್ ಅನ್ನು ಹರಿದು ಹಾಕಿದ್ದರು. ಇದರಿಂದ ರೊಚ್ಚಿಗೆದ್ದ ಯುವಕರ ಗುಂಪು ನೇರವಾಗಿ ಮಠಕ್ಕೆ ನುಗ್ಗಿ, ಪ್ಲೆಕ್ಸ್ ಹರಿದವರನ್ನು ಪತ್ತೆ ಹಚ್ಚಲು ಸಿಸಿಟಿವಿ ದೃಶ್ಯಾವಳಿ ತೋರಿಸುವಂತೆ ವೀರಬಸವ ಸ್ವಾಮೀಜಿಯವರ ಮೇಲೆ ತೀವ್ರ ಗಲಾಟೆ ನಡೆಸಿದ್ದಾರೆ.
ಯುವಕರ ಅತಿರೇಕದ ವರ್ತನೆಯಿಂದ ಮಠದ ಆವರಣದಲ್ಲೇ ನಡೆದ ಗಲಾಟೆಯಿಂದ ವೀರಬಸವ ಸ್ವಾಮೀಜಿಯವರು ತೀವ್ರವಾಗಿ ಮನನೊಂದು ಯಾರೂ ಇಲ್ಲದ ವೇಳೆ ಮೊಬೈಲ್ ಸ್ವಿಚ್ ಆಫ್ ಮಾಡಿ ರಾತ್ರೋರಾತ್ರಿ ಮಠ ತೊರೆದಿದ್ದಾರೆ. ಎರಡು ದಿನಗಳಿಂದ ಯಾರ ಸಂಪರ್ಕಕ್ಕೂ ಸಿಗದ ಶ್ರೀಗಳು ಗುಟ್ಟಾಗಿ ಕ್ಯಾತಸಂದ್ರದ ಸಿದ್ದಗಂಗಾ ಮಠಕ್ಕೆ ತೆರಳಿ ಅಲ್ಲಿ ಆಶ್ರಯ ಪಡೆದಿದ್ದಾರೆ.
ಇತ್ತ ಮಠದಲ್ಲಿ ಸ್ವಾಮೀಜಿ ಕಾಣಿಸದಿದ್ದಾಗ ಗಾಬರಿಗೊಂಡ ಆಡಳಿತ ಮಂಡಳಿಯು ಬೆಳ್ಳಾವಿ ಪೊಲೀಸ್ ಠಾಣೆಯಲ್ಲಿ ಸ್ವಾಮೀಜಿ ನಾಪತ್ತೆಯಾಗಿರುವ ಬಗ್ಗೆ ದೂರು ದಾಖಲಿಸಿತ್ತು. ಪೊಲೀಸರು ತನಿಖೆ ಆರಂಭಿಸಿದಾಗ ಶ್ರೀಗಳು ಸಿದ್ದಗಂಗಾ ಮಠದಲ್ಲಿ ಸುರಕ್ಷಿತವಾಗಿರುವುದು ಪತ್ತೆಯಾಗಿದೆ. ಸ್ವಾಮೀಜಿಯವರ ಈ ದಿಢೀರ್ ನಿರ್ಧಾರಕ್ಕೆ ಯುವಕರ ಅತಿರೇಕದ ವರ್ತನೆ, ಮಾನಸಿಕ ಕಿರುಕುಳವೇ ಕಾರಣ ಎನ್ನಲಾಗಿದೆ.