ಕರ್ನಾಟಕ :ಎಕ್ಸಲ್ ಕಟ್ ಆಗಿ KSRTC ಬಸ್ ಪಲ್ಟಿ: ಓರ್ವ ವಿದ್ಯಾರ್ಥಿ ಸಾವು, 50 ಜನರಿಗೆ ಗಾಯ; ಶಿವಮೊಗ್ಗದಲ್ಲಿ ಬಸ್ ಪಲ್ಟಿ, ಹಲವಾರು ಜನರಿಗೆ ಗಾಯ ; ರಾಣೆಬೆನ್ನೂರಿನಲ್ಲಿ ಹೊತ್ತಿ ಉರಿದ ಬಸ್ಸು; ಪ್ರಯಾಣಿಕರು ಅಪಾಯದಿಂದ ಪಾರು..!!!
ದಾವಣಗೆರೆ: ಚಲಿಸುತ್ತಿದ್ದ ಕೆಎಸ್ಆರ್ಟಿಸಿ ಬಸ್ನ ಎಕ್ಸಲ್ ಕಟ್ ಆಗಿ ಪಲ್ಟಿಯಾಗಿರುವ ಘಟನೆ ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಮರಬನಹಳ್ಳಿ ಬಳಿ ಇಂದು ಬೆಳಗ್ಗೆ ನಡೆದಿದೆ.
ಘಟನೆಯಲ್ಲಿ ಓರ್ವ ವಿದ್ಯಾರ್ಥಿ ಸಾವನ್ನಪ್ಪಿದ್ದು, ಮತ್ತೋರ್ವನ ಸ್ಥಿತಿ ಗಂಭೀರವಾಗಿದೆ. ಇನ್ನೂ 50 ಜನರು ಗಾಯಗೊಂಡಿದ್ದಾರೆ. ದರ್ಶನ್ ಮೃತಪಟ್ಟ ವಿದ್ಯಾರ್ಥಿ ಎಂದು ಗುರುತಿಸಲಾಗಿದೆ. ಗಾಯಾಳುಗಳನ್ನು ದಾವಣಗೆರೆ ಜಿಲ್ಲಾಸ್ಪತ್ರೆ ಹಾಗೂ ಬಸವಾಪಟ್ಟಣ ಸಮುದಾಯ ಆರೋಗ್ಯ ಕೇಂದ್ರಕ್ಕೆ ರವಾನಿಸಲಾಗಿದೆ.
ಬೆಳಿಗ್ಗೆ 9:30ರ ಸುಮಾರಿಗೆ ದಾವಣಗೆರೆಯಿಂದ ಬಸವಾಪಟ್ಟಣಕ್ಕೆ ಹೋಗುತ್ತಿದ್ದಾಗ ಇದ್ದಕ್ಕಿದ್ದಂತೆ ಬಸ್ಸಿನ ಎಕ್ಸಲ್ ಕಟ್ ಆಗಿ ಪಲ್ಟಿಯಾಗಿದೆ. ತಕ್ಷಣವೇ ಸ್ಥಳೀಯರು ರಕ್ಷಣಾ ಕಾರ್ಯಾಚರಣೆ ನಡೆಸಿ, ಗಾಯಾಳುಗಳನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಬಸವಾಪಟ್ಟಣ ಪೊಲೀಸ್ ಠಾಣೆಯ ಪಿಎಸ್ಐ ಇಮ್ತಿಯಾಜ್ ಮತ್ತು ಸಿಬ್ಬಂದಿ ಘಟನಾ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದರು.
ಬೆಳಿಗ್ಗೆ 9:30ರ ಸುಮಾರಿಗೆ ಎಕ್ಸಲ್ ಕಟ್ ಆಗಿ ಅವಘಡ ನಡೆದಿದೆ. ದರ್ಶನ್ ಎಂಬ ವಿದ್ಯಾರ್ಥಿ ಸಾವನ್ನಪ್ಪಿದ್ದಾನೆ. ಮತ್ತೋರ್ವನ ಪರಿಸ್ಥಿತಿ ಗಂಭೀರವಾಗಿದೆ. ಎಲ್ಲಾ ಗಾಯಳುಗಳನ್ನು ಹತ್ತಿರದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯ ಕೆಲವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ" ಎಂದು ಪಿಎಸ್ಐ ಇಮ್ತಿಯಾಜ್ ಮಾಹಿತಿ ನೀಡಿದರು.
ಶಿವಮೊಗ್ಗದಲ್ಲಿ ಬಸ್ ಪಲ್ಟಿ: ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ರಾಜ್ಯ ಹೆದ್ದಾರಿ 766 ಸಿ ಜಯನಗರ ಚಾಮುಂಡಿ ಬೆಟ್ಟದ ತಿರುವಿನಲ್ಲಿ ಬೆಂಗಳೂರಿನಿಂದ ಕುಂದಾಪುರಕ್ಕೆ ತೆರಳುತ್ತಿದ್ದ ಸಾಗರ್ ಹೆಸರಿನ ಖಾಸಗಿ ಬಸ್ ಪಲ್ಟಿಯಾಗಿ 11 ಜನ ಗಾಯಗೊಂಡಿರುವ ಘಟನೆ ನಡೆದಿದೆ. ಚಾಲಕನ ನಿಯಂತ್ರಣ ತಪ್ಪಿ ತಿರುವಿನ ಎಡಭಾಗಕ್ಕೆ ಬಸ್ ಮಗುಚಿ ಬಿದ್ದಿದೆ. ಇದರಿಂದ ಬಸ್ನಲ್ಲಿದ್ದ 11 ಪ್ರಯಾಣಿಕರಿಗೆ ಸಣ್ಣ-ಪುಟ್ಟ ಗಾಯಗಳಾಗಿವೆ.
ಗಾಯಾಳುಗಳನ್ನು ಹೊಸನಗರ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಬಸ್ನಲ್ಲಿನ ಪ್ರಯಾಣಿಕರು ಕೊಲ್ಲೂರು ದೇವಸ್ಥಾನ, ಗೃಹಪ್ರವೇಶ, ಮದುವೆ ಸಮಾರಂಭಗಳಿಗೆ ತೆರಳುತ್ತಿದ್ದರು. ಈ ಕುರಿತು ಹೊಸನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ರಾಣೇಬೆನ್ನೂರು ಬಳಿ ಹೊತ್ತಿ ಉರಿದ ಬಸ್; ರಾಣೇಬೆನ್ನೂರು ಬಳಿ ಹೊತ್ತಿ ಉರಿದ ಬಸ್; ರಾಣೇಬೆನ್ನೂರು ತಾಲೂಕಿನ ದೇವರಗುಡ್ಡ ಗ್ರಾಮದ ಬಳಿ ರಾಜ್ಯ ಹೆದ್ದಾರಿಯಲ್ಲಿ ಬೆಂಗಳೂರಿನಿಂದ ಗದಗಕ್ಕೆ ಬರುತ್ತಿದ್ದ ಸಾರಿಗೆ ಸಂಸ್ಥೆಯ ಬಸ್ ನಲ್ಲಿ ಮೇ 5 ರಂದು ಬೆಳಗ್ಗೆ ಏಕಾಏಕಿ ಬೆಂಕಿ ಕಾಣಿಸಿಕೊಂಡು ಹೊತ್ತಿ ಉರಿದಿತ್ತು. ಆದರೆ ಚಾಲಕ ಪಕ್ಕೀರಪ್ಪ ಅವರ ಸಮಯ ಪ್ರಜ್ಞೆಯಿಂದ ಬಸ್ ನಲ್ಲಿದ್ದ 17 ಜನ ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದರು.
ಅಗ್ನಿ ಅವಘಡಕ್ಕೆ ಬ್ರೇಕ್ ಲೈನರ್ ವೈಫಲ್ಯ ಕಾರಣ: ಪ್ರಾಥಮಿಕ ತನಿಖೆಯಲ್ಲಿ ಬ್ರೇಕ್ ಲೈನರ್ ದೋಷವೇ ಬೆಂಕಿಗೆ ಕಾರಣವಾಗಿರುವ ಸಾಧ್ಯತೆ ವ್ಯಕ್ತವಾಗಿದೆ. ರಾಣೇಬೆನ್ನೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.
ಬಸ್ಗೆ ಹೊಸದಾಗಿ ಬ್ರೇಕ್ ಲೈನರ್ ಹಾಕಿಸಲಾಗಿತ್ತು. ಹರಿಹರ ಸಮೀಪ ಬಂದಾಗ ಬ್ರೇಕ್ ಲೈನರ್ ಮತ್ತು ಟೈರ್ ನಡುವೆ ಹೊಗೆ ಕಾಣಿಸಿಕೊಂಡಿದೆ. ಪ್ರಯಾಣಿಕರು ಕಂಡಕ್ಟರ್ ಮತ್ತು ಚಾಲಕನಿಗೆ ಮಾಹಿತಿ ನೀಡಿದ್ದಾರೆ. ಬ್ರೇಕ್ ಲೈನರ್ ಪರೀಕ್ಷಿಸಿದ ಚಾಲಕ ಮತ್ತು ನಿರ್ವಾಹಕ, ಗದಗದಲ್ಲಿ ಸರಿ ಮಾಡಿಸಿದರೆ ಆಯಿತು ಎಂದು ಪಯಣ ಆರಂಭಿಸಿದ್ದಾರೆ.
ನಂತರ ರಾಣೇಬೆನ್ನೂರಲ್ಲಿ ಮತ್ತೆ ಹೊಗೆ ಕಾಣಿಸಿಕೊಂಡಿದೆ. ನಂತರ ದೇವರಗುಡ್ಡದ ಬಳಿ ಬಸ್ ಟೈರ್ ಸ್ಪೋಟಗೊಂಡಿದೆ. ಲೈನರ್ ನಡುವೆ ಘರ್ಷಣೆಯಾಗಿ ಬೆಂಕಿ ಹತ್ತಿಕೊಂಡಿದೆ. ಪರಿಸ್ಥಿತಿ ಗಂಭೀರವಾಗುತ್ತಿರುವುದನ್ನು ಅರಿತ ಚಾಲಕ ಫಕ್ಕೀರಪ್ಪ ಗಡಾದ ತಕ್ಷಣ ಬಸ್ ನಿಲ್ಲಿಸಿ, ಯಾವುದೇ ಗಾಬರಿಯಾಗದೆ ಪ್ರಯಾಣಿಕರನ್ನು ಹೊರಗೆ ಬಿಡಲು ಮುಂದಾದರು. ಬಸ್ ಬಾಗಿಲು ಮೂಲಕ ಎಲ್ಲರನ್ನೂ ಇಳಿಸಲು ಸಮಯ ಸಾಲದ ಕಾರಣ, ಗಾಜು ಒಡೆದು ಪ್ರಯಾಣಿಕರನ್ನು ಹೊರ ಕಳುಹಿಸಿ ಸುರಕ್ಷಿತ ಸ್ಥಳಕ್ಕೆ ಕರೆದೊಯ್ದಿದ್ದರು.