ರಾಂಚಿ :ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದ ಕಾರು; ಒಂದೇ ಕುಟುಂಬದ ಐವರ ದುರ್ಮರಣ!
Thursday, June 11, 2026

ರಾಂಚಿ: ಜಾರ್ಖಂಡ್ನ ಸಿಮ್ಡೆಗಾ ಜಿಲ್ಲೆಯಲ್ಲಿ ಗುರುವಾರ (ಜೂನ್ 11) ವೇಗವಾಗಿ ಬಂದ ಇನೋವಾ ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯ ಬೃಹತ್ ಮರಕ್ಕೆ ಭೀಕರವಾಗಿ ಡಿಕ್ಕಿ ಹೊಡೆದ ಪರಿಣಾಮ, ಒಂದೇ ಕುಟುಂಬದ ಐವರು (Road Accident) ಮೃತಪಟ್ಟಿದ್ದು, ಕಾರಿನಲ್ಲಿದ್ದ ಇತರ ನಾಲ್ವರು ತೀವ್ರವಾಗಿ ಗಾಯಗೊಂಡಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಈ ಭೀಕರ ದುರ್ಘಟನೆ ಸಿಮ್ಡೆಗಾ ಜಿಲ್ಲೆಯ ಕೊಲೆಬಿರಾ ಪೊಲೀಸ್ ಠಾಣಾ ವ್ಯಾಪ್ತಿಯ ಅಘರ್ಮಾ ಎಂಬಲ್ಲಿ ಸಂಭವಿಸಿದ್ದು, ಜಾರ್ಖಂಡ್ನ ನಿವಾಸಿಗಳಾದ ಒಂದೇ ಕುಟುಂಬದ ಸದಸ್ಯರು ಕಾರಿನಲ್ಲಿ ಪ್ರಯಾಣಿಸುತ್ತಿದ್ದಾಗ ಈ ಅಪಘಾತ ಸಂಭವಿಸಿದೆ. ಕಾರು ಅಘರ್ಮಾ ಪ್ರದೇಶದ ಹೆದ್ದಾರಿಯಲ್ಲಿ ಸಾಗುತ್ತಿದ್ದಾಗ, ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಪಕ್ಕದಲ್ಲಿದ್ದ ಮರಕ್ಕೆ ಅತ್ಯಂತ ವೇಗವಾಗಿ ಮುಖಾಮುಖಿ ಡಿಕ್ಕಿ ಹೊಡೆದಿದೆ.
ಮೃತರ ವಿವರ: ಕಣ್ಣೀರಾದ ಸಂಬಂಧಿಕರು
ಅಪಘಾತದಲ್ಲಿ ಮೃತಪಟ್ಟವರನ್ನು ಲೋಹರ್ದಗಾ ಜಿಲ್ಲೆಯ ನಿವಾಸಿಗಳಾದ ಗುಲಾಮ್ ಮುಸ್ತಫಾ ಮತ್ತು ಅವರ ಪತ್ನಿ ಗುಲ್ಶನ್ ಅರಾ ಎಂದು ಗುರುತಿಸಲಾಗಿದೆ. ಇವರೊಂದಿಗೆ ಅನಬ್ಯಾ ಪರ್ವೀನ್ (3), ಆಯ್ರಾ ನಾಜ್ (18 ತಿಂಗಳು) ಮತ್ತು ಎಂಡಿ ಅರ್ಶ್ ಹಶ್ಮಿ (8) ಮೂರು ಮಕ್ಕಳು ಪ್ರಾಣ ಕಳೆದುಕೊಂಡಿದ್ದಾರೆ.
ಈ ಭೀಕರ ಅಪಘಾತದಲ್ಲಿ ಬದುಕುಳಿದ ಇತರ ನಾಲ್ವರು ಪ್ರಯಾಣಿಕರನ್ನು ರಾಂಚಿಯ ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು, ಅವರಲ್ಲಿ ಇಬ್ಬರ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ.
ಪ್ರಾಥಮಿಕ ತನಿಖೆಯ ಪ್ರಕಾರ, ವಾಹನದ ಅತಿ ವೇಗವೇ ಈ ಭೀಕರ ಅಪಘಾತಕ್ಕೆ ಪ್ರಮುಖ ಕಾರಣ ಎಂದು ಶಂಕಿಸಲಾಗಿದೆ. ಪೊಲೀಸರು ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದು, ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ