ಕೇರಳ :ಅಡ್ವೆಂಚರ್ ಟ್ರಿಪ್ SSLC ಬಾಲಕಿ ಜತೆ 2 PUC ಹುಡುಗರು ಎಸ್ಕೇಪ್! ಕಾಡಿನ ಮಧ್ಯೆ ಟೆಂಟ್ ಹಾಕಿ ಮಾಡಿದ್ದೇನು?

ಕೇರಳ :ಸಾಹಸಮಯ ಟ್ರೆಕ್ಕಿಂಗ್ ಮತ್ತು ಕಾಡಿನಲ್ಲಿ ದಿನ ಕಳೆಯುವ ಹಠಕ್ಕೆ ಬಿದ್ದ ಶಾಲಾ-ಕಾಲೇಜು ವಿದ್ಯಾರ್ಥಿಗಳ ಗುಂಪೊಂದು ಎಲ್ಲರೂ ಬೆಚ್ಚಿಬೀಳುವಂತೆ ಮಾಡಿದೆ.
ಯಾರಿಗೂ ಹೇಳದೆ ಕೇಳದೆ ನಿಗೂಢವಾಗಿ ನಾಪತ್ತೆಯಾಗಿದ್ದ ಹತ್ತನೇ ತರಗತಿಯ ಬಾಲಕಿ ಮತ್ತು ಆಕೆಯ ಇಬ್ಬರು ಪಿಯುಸಿ ಸ್ನೇಹಿತರು ಕೊನೆಗೆ ದಟ್ಟ ಕಾಡಿನ ಮಧ್ಯೆ ಟೆಂಟ್ ಹಾಕಿಕೊಂಡು ಸಂಸಾರ ಹೂಡಿದ ಮಾದರಿಯಲ್ಲಿ ವಾಸಿಸುತ್ತಿದ್ದಾಗ ಪೊಲೀಸರು ಮತ್ತು ಸ್ಥಳೀಯರ ಜಂಟಿ ಕಾರ್ಯಾಚರಣೆಯಲ್ಲಿ ಸಿನಿಮೀಯ ಶೈಲಿಯಲ್ಲಿ ಸಿಕ್ಕಿಬಿದ್ದಿದ್ದಾರೆ.
ಅಡ್ವೆಂಚರ್ ಟ್ರಿಪ್ ಪ್ಲಾನ್
ಕೇರಳದ ಕೋಝಿಕ್ಕೋಡ್ ಜಿಲ್ಲೆಯ ತಾಮರಸ್ಸೇರಿ ಸುತ್ತಮುತ್ತಲಿನ ನಿವಾಸಿಗಳಾದ ಈ ಮೂವರು ವಿದ್ಯಾರ್ಥಿಗಳಲ್ಲಿ ಒಬ್ಬಳು 15 ವರ್ಷದ ಎಸ್ಎಸ್ಎಲ್ಸಿ ಬಾಲಕಿಯಾಗಿದ್ದರೆ, ಉಳಿದಿಬ್ಬರು ಪ್ರಥಮ ಮತ್ತು ದ್ವಿತೀಯ ಪಿಯುಸಿ ಓದುತ್ತಿರುವ 17 ವರ್ಷದ ಹುಡುಗರು. ಇವರೆಲ್ಲರೂ ಸೇರಿ ಯಾರಿಗೂ ತಿಳಿಯದಂತೆ ಕಾಡಿನಲ್ಲಿ ಕಳೆಯಲು ಒಂದು ವಿಚಿತ್ರ ಅಡ್ವೆಂಚರ್ ಟ್ರಿಪ್ ಪ್ಲಾನ್ ಮಾಡಿದ್ದರು.
ಆದರೆ ಪ್ರಯಾಣಕ್ಕೆ ಹಣದ ಕೊರತೆ ಎದುರಾದಾಗ, ಈ ನಾಪತ್ತೆಯಾಗಿದ್ದ ವಿದ್ಯಾರ್ಥಿಗಳು ತಮ್ಮಲ್ಲಿದ್ದ 18,000 ರೂಪಾಯಿಯ ಸ್ಮಾರ್ಟ್ಫೋನ್ ಒಂದನ್ನು ತಾಮರಸ್ಸೇರಿಯ ಸ್ಥಳೀಯ ಅಂಗಡಿಯೊಂದರಲ್ಲಿ ಕೇವಲ 10,000 ರೂಪಾಯಿಗೆ ಮಾರಾಟ ಮಾಡಿ ಹಣ ಹೊಂದಿಸಿಕೊಂಡಿದ್ದರು.
ಅಷ್ಟೇ ಅಲ್ಲ, ಪೊಲೀಸ್ ಸೈಬರ್ ಸೆಲ್ ತಮ್ಮನ್ನು ಮೊಬೈಲ್ ಲೊಕೇಶನ್ ಮೂಲಕ ಹಿಂಬಾಲಿಸಬಾರದು ಎಂಬ ಚಾಲಾಕಿತನದಿಂದ ತಮ್ಮ ಬಳಿ ಇದ್ದ ಇನ್ನುಳಿದ ಎರಡು ಫೋನ್ಗಳನ್ನು ಸ್ವಿಚ್ ಆಫ್ ಮಾಡಿದ್ದರು. ಕಾಡಿನಲ್ಲಿ ಹಲವು ದಿನಗಳ ಕಾಲ ಯಾರಿಗೂ ಸಿಗದೆ ಬದುಕಲು ಬೇಕಾದ ಟಾರ್ಪಲ್ ಶೀಟ್, ಅಕ್ಕಿ, ಬ್ರೆಡ್, ಚಾಕು ಹಾಗೂ ಅಡುಗೆ ಪಾತ್ರೆಗಳನ್ನು ಮೊದಲೇ ಸಿದ್ಧಪಡಿಸಿಕೊಂಡು ಹೊರಟಿದ್ದರು.
ರಬ್ಬರ್ ತೋಟದಲ್ಲಿ ಸಮವಸ್ತ್ರ ಪತ್ತೆ
ಕಳೆದ ಗುರುವಾರ ಬೆಳಿಗ್ಗೆ ಎಂದಿನಂತೆ ಶಾಲೆಗೆ ಹೋಗುವುದಾಗಿ ಹೇಳಿ ಮನೆಯಿಂದ ಹೊರಟಿದ್ದ ಹತ್ತನೇ ತರಗತಿಯ ಬಾಲಕಿ ಸಂಜೆಯಾದರೂ ಮನೆಗೆ ಮರಳದಿದ್ದಾಗ ಪೋಷಕರು ಗಾಬರಿಗೊಂಡಿದ್ದಾರೆ. ಅತ್ತ ಶಾಲೆಯಲ್ಲೂ ಆಕೆ ಗೈರಾಗಿದ್ದ ವಿಷಯ ತಿಳಿದು ಹುಡುಕಾಟ ನಡೆಸಿದಾಗ, ಶಾಲೆಯ ಸಮೀಪದ ರಬ್ಬರ್ ತೋಟವೊಂದರಲ್ಲಿ ಬಾಲಕಿಯ ಶಾಲಾ ಸಮವಸ್ತ್ರ ಪತ್ತೆಯಾಗಿದೆ.
ಇದೇ ಸಮಯದಲ್ಲಿ ಅದೇ ಶಾಲೆಯ ಇಬ್ಬರು ಪಿಯುಸಿ ವಿದ್ಯಾರ್ಥಿಗಳು ಸಹ ತಮ್ಮ ದ್ವಿಚಕ್ರ ವಾಹನಗಳೊಂದಿಗೆ ನಾಪತ್ತೆಯಾಗಿರುವುದು ಬೆಳಕಿಗೆ ಬಂದಿದೆ. ಈ ವೇಳೆ ರಬ್ಬರ್ ಟ್ಯಾಪಿಂಗ್ ಕೆಲಸಗಾರನೊಬ್ಬ ಈ ಮೂವರು ವಿದ್ಯಾರ್ಥಿಗಳು ಅನುಮಾನಾಸ್ಪದವಾಗಿ ಓಡಾಡುತ್ತಿರುವುದನ್ನು ಕಂಡು ತನ್ನ ಮೊಬೈಲ್ನಲ್ಲಿ ಫೋಟೋ ಕ್ಲಿಕ್ ಮಾಡಿ ಶಾಲಾ ಸಿಬ್ಬಂದಿಗೆ ಕಳುಹಿಸಿದ್ದ ಪ್ರಮುಖ ಸುಳಿವಾಗಿ ಪರಿಣಮಿಸಿತು. ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ, ಮಕ್ಕಳು ತಮ್ಮ ಸ್ಕೂಟರ್ಗಳಲ್ಲಿ ಲಕ್ಕಿಡಿ ಪಾಸ್ ದಾಟಿ ವಯನಾಡು ಜಿಲ್ಲೆಯ ಕಡೆಗೆ ಪ್ರಯಾಣ ಬೆಳೆಸಿರುವುದು ದೃಢಪಟ್ಟಿತು.
ತೀವ್ರ ತನಿಖೆ ನಡೆಸಿದ ಸೈಬರ್ ಸೆಲ್ ಮತ್ತು ಪೊಲೀಸ್ ತಂಡಕ್ಕೆ ವಯನಾಡಿನ ವಡುವಾಂಚಲ್ನ ಚಿತ್ರಗಿರಿ ಎಂಬ ಅರಣ್ಯ ಪ್ರದೇಶದಲ್ಲಿ ಮಕ್ಕಳಿರುವ ಬಗ್ಗೆ ಖಚಿತ ಮಾಹಿತಿ ಲಭ್ಯವಾಯಿತು. ಸುಮಾರು ಐದು ಎಕರೆ ವಿಸ್ತೀರ್ಣದ ದಟ್ಟ ಬೆಟ್ಟದ ಇಳಿಜಾರಿನಲ್ಲಿ ಮೂವರೂ ಟೆಂಟ್ ಹಾಕಿಕೊಂಡು ತಂಗಿದ್ದರು. ಶುಕ್ರವಾರ ತಡರಾತ್ರಿ ಪೊಲೀಸರು, ಪೋಷಕರು ಮತ್ತು ಸ್ಥಳೀಯರ ಸಮ್ಮುಖದಲ್ಲಿ ಕಾಡಿನೊಳಗೆ ಕಾರ್ಯಾಚರಣೆ ನಡೆಸಿದಾಗ ರಾತ್ರಿ 8 ಗಂಟೆ ಸುಮಾರಿಗೆ ಚಿತ್ರಗಿರಿ ಶಾಲೆಯ ಬಳಿಯ ಅರಣ್ಯದಲ್ಲಿ ಮೊದಲು ಒಬ್ಬ ವಿದ್ಯಾರ್ಥಿ ಪತ್ತೆಯಾಗಿದ್ದಾನೆ.
ಪೊಲೀಸ್ ಮತ್ತು ಸ್ಥಳೀಯರ ದಂಡು ಬಂದಿರುವುದನ್ನು ಗಮನಿಸಿದ ಇನ್ನುಳಿದ ಇಬ್ಬರು ವಿದ್ಯಾರ್ಥಿಗಳು ತಮ್ಮ ಸ್ಕೂಟರ್ ಹತ್ತಿ ಅಲ್ಲಿಂದ ಅತಿ ವೇಗವಾಗಿ ಪರಾರಿಯಾಗಲು ಯತ್ನಿಸಿದ್ದಾರೆ. ಆದರೆ ಸ್ಥಳೀಯರು ಬಿಡದೆ ಸಿನಿಮೀಯ ಶೈಲಿಯಲ್ಲಿ ತಮ್ಮ ವಾಹನಗಳಲ್ಲಿ ಬೆನ್ನಟ್ಟಿ, ತಡರಾತ್ರಿ ಪಡಿವಾಯಲ್ ಎಂಬಲ್ಲಿ ಅವರನ್ನು ತಡೆದು ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಬಳಿಕ ಮಕ್ಕಳನ್ನು ಮೆಪ್ಪಾಡಿ ಪೊಲೀಸ್ ಠಾಣೆಗೆ ಕರೆದೊಯ್ದು, ಅಗತ್ಯ ಕಾನೂನು ಪ್ರಕ್ರಿಯೆ ಹಾಗೂ ಕೌನ್ಸೆಲಿಂಗ್ ಮುಗಿಸಿ ಪೋಷಕರ ವಶಕ್ಕೆ ಒಪ್ಪಿಸಲಾಗಿದೆ. ಹದಿಹರೆಯದವರ ಇಂತಹ ಬೇಜವಾಬ್ದಾರಿ ನಡವಳಿಕೆ ಹೆತ್ತವರನ್ನು ತೀವ್ರ ಆತಂಕಕ್ಕೆ ತಳ್ಳಿದೆ.