ಗುಜರಾತ್ :ಬುಲೆಟ್ ವೇಗದಲ್ಲಿ ಹಾರ್ಟ್ ಟ್ರಾನ್ಸ್‌ಪ್ಲಾಂಟ್ ಮಿಷನ್; ವಂದೇ ಭಾರತ್ ವೇಗಕ್ಕೆ ಒಲಿದ ಜೀವ, ದೇಶದಲ್ಲೇ ಮೊದಲು!

ಗುಜರಾತ್ :ಬುಲೆಟ್ ವೇಗದಲ್ಲಿ ಹಾರ್ಟ್ ಟ್ರಾನ್ಸ್‌ಪ್ಲಾಂಟ್ ಮಿಷನ್; ವಂದೇ ಭಾರತ್ ವೇಗಕ್ಕೆ ಒಲಿದ ಜೀವ, ದೇಶದಲ್ಲೇ ಮೊದಲು!

ಗುಜರಾತ್ : ಭಾರತೀಯ ರೈಲ್ವೆ ದೇಶದಲ್ಲೇ ಮೊದಲ ಬಾರಿಗೆ ರೈಲಿನ ಮೂಲಕ ಜೀವಂತ ಹೃದಯವನ್ನು ಸಾಗಿಸುವ ಕಾರ್ಯವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ. ಸೂರತ್‌ನಿಂದ ಅಹಮದಾಬಾದ್‌ಗೆ ಹೃದಯವನ್ನು ಮುಂಬೈ ಸೆಂಟ್ರಲ್-ಗಾಂಧಿನಗರ ಕ್ಯಾಪಿಟಲ್ ವಂದೇ ಭಾರತ್ ಎಕ್ಸ್‌ಪ್ರೆಸ್ ಮೂಲಕ ಕೊಂಡೊಯ್ಯಲಾಯಿತು. ಇದನ್ನು ಯು.ಎನ್. ಮೆಹ್ತಾ ಇನ್‌ಸ್ಟಿಟ್ಯೂಟ್ ಆಫ್ ಕಾರ್ಡಿಯಾಲಜಿ ಅಂಡ್ ರಿಸರ್ಚ್ ಸೆಂಟರ್‌ನಲ್ಲಿ ಕಸಿ ಮಾಡಲು ಕಳುಹಿಸಲಾಗಿತ್ತು. 20901 ಸಂಖ್ಯೆಯ ರೈಲಿನ ಮೂಲಕ ಕಳುಹಿಸಲಾದ ಈ ಹೃದಯ ನಿಗದಿತ ಸಮಯದೊಳಗೆ ಅಹಮದಾಬಾದ್‌ಗೆ ತಲುಪಿತು. ಈ ಸಂಪೂರ್ಣ ಕಾರ್ಯಾಚರಣೆಗಾಗಿ ಭಾರತೀಯ ರೈಲ್ವೆ, ಗುಜರಾತ್ ಪೊಲೀಸ್, ರೈಲ್ವೆ ಭದ್ರತಾ ಪಡೆ (RPF) ಮತ್ತು ವೈದ್ಯಕೀಯ ತಂಡಗಳ ನಡುವೆ ಸಮನ್ವಯ ಸಾಧಿಸಲಾಯಿತು. ಇದರಿಂದ ಅಂಗವನ್ನು ಯಾವುದೇ ವಿಳಂಬವಿಲ್ಲದೆ ತಲುಪಿಸಲಾಯಿತು.

ಅಹಮದಾಬಾದ್ ರೈಲ್ವೆ ನಿಲ್ದಾಣಕ್ಕೆ ರೈಲು ತಲುಪಿದ ನಂತರ RPF ಮತ್ತು ಗುಜರಾತ್ ಪೊಲೀಸ್ ಪ್ಲಾಟ್‌ಫಾರ್ಮ್ ಸಂಖ್ಯೆ 1 ರಿಂದ ಯು.ಎನ್. ಮೆಹ್ತಾ ಇನ್‌ಸ್ಟಿಟ್ಯೂಟ್ ಆಫ್ ಕಾರ್ಡಿಯಾಲಜಿ ಅಂಡ್ ರಿಸರ್ಚ್ ಸೆಂಟರ್​ವರೆಗೆ ಗ್ರೀನ್ ಕಾರಿಡಾರ್ ನಿರ್ಮಿಸಿದರು. ಈ ಮೀಸಲಾದ ಮಾರ್ಗದ ಸಹಾಯದಿಂದ ಹೃದಯವನ್ನು ವೇಗವಾಗಿ ಆಸ್ಪತ್ರೆಗೆ ತಲುಪಿಸಲಾಯಿತು. ಇದರಿಂದ ನಿಗದಿತ ಸಮಯದಲ್ಲಿ ಕಸಿ ಪ್ರಕ್ರಿಯೆಯನ್ನು ಪ್ರಾರಂಭಿಸಲು ಸಾಧ್ಯವಾಯಿತು.

3 ಗಂಟೆ 45 ನಿಮಿಷಗಳಲ್ಲಿ ತಲುಪಿದ ಹೃದಯ: ಸಮಯದ ದೃಷ್ಟಿಯಿಂದ ಅತ್ಯಂತ ನಿರ್ಣಾಯಕವಾಗಿದ್ದ ಈ ಪ್ರಯಾಣಕ್ಕೆ ಸುಮಾರು 217 ನಿಮಿಷಗಳು (3 ಗಂಟೆ 45 ನಿಮಿಷಗಳು) ಬೇಕಾಯಿತು. ಇದರಿಂದಾಗಿ ಹೃದಯವನ್ನು ಯಶಸ್ವಿ ಕಸಿ ಮಾಡಲು ಅಗತ್ಯವಿರುವ ನಿಗದಿತ ಸಮಯದೊಳಗೆ ತಲುಪಿಸಲು ಸಾಧ್ಯವಾಯಿತು. ಈ ಹೃದಯದ ಜೊತೆ ಎರಡು ಮೂತ್ರಪಿಂಡಗಳು (ಕಿಡ್ನಿ) ಮತ್ತು ಒಂದು ಯಕೃತ್ತನ್ನು (ಲಿವರ್) ಸೂರತ್ ಜಿಲ್ಲೆಯ ಕಿಮ್‌ನಲ್ಲಿ ವಾಸಿಸುತ್ತಿದ್ದ ಒಡಿಶಾ ಮೂಲದ 36 ವರ್ಷದ ಜವಳಿ ಕಾರ್ಮಿಕರಿಂದ (ಟೆಕ್ಸ್‌ಟೈಲ್ ವರ್ಕರ್) ಸೂರತ್‌ನ ನ್ಯೂ ಸಿವಿಲ್ ಆಸ್ಪತ್ರೆಯಲ್ಲಿ (NCH) ಹೊರತೆಗೆಯಲಾಗಿತ್ತು. ಈ ಅಂಗಾಂಗ ದಾನದಿಂದ ನಾಲ್ಕು ರೋಗಿಗಳಿಗೆ ಹೊಸ ಜೀವನ ಸಿಗಬಹುದು ಮತ್ತು ಇದು NCH ಸೂರತ್ ನಡೆಸಿದ 96ನೇ ಅಂಗಾಂಗ ದಾನವಾಗಿದೆ ಎಂದು ಆಸ್ಪತ್ರೆಯ ಅಧಿಕಾರಿಗಳು ತಿಳಿಸಿದ್ದಾರೆ.


ಸೂರತ್‌ನಲ್ಲಿ ವಾಸಿಸುತ್ತಿದ್ದ ಒಡಿಶಾದ ವ್ಯಕ್ತಿ: ಆಸ್ಪತ್ರೆಯ ಅಧಿಕಾರಿಗಳ ಪ್ರಕಾರ, ಈ ವ್ಯಕ್ತಿ ಜುಲೈ 28 ರಂದು ತನ್ನ ಬಾಡಿಗೆ ಮನೆಯಲ್ಲಿ ತೀವ್ರವಾಗಿ ಕಾಯಿಲೆಗೆ ತುತ್ತಾಗಿದ್ದನು. ಅವನ ಆರೋಗ್ಯ ಸ್ಥಿತಿ ವೇಗವಾಗಿ ಕ್ಷೀಣಿಸಿತು. ಅವನ ಮುಖ ಒಂದು ಕಡೆಗೆ ತಿರುಗಿತು ಮತ್ತು ಕೈಕಾಲುಗಳು ಕೆಲಸ ಮಾಡುವುದನ್ನು ನಿಲ್ಲಿಸಿದವು. ಅವನನ್ನು ಮೊದಲು ಹತ್ತಿರದ ಆಸ್ಪತ್ರೆಗೆ ಕರೆದೊಯ್ಯಲಾಯಿತು ಮತ್ತು ನಂತರ ಉತ್ತಮ ಚಿಕಿತ್ಸೆಗಾಗಿ 108 ಅಂಬುಲೆನ್ಸ್ ಮೂಲಕ ಎನ್‌ಸಿಎಚ್ (NCH) ಸೂರತ್‌ಗೆ ಕಳುಹಿಸಲಾಯಿತು.


ಜುಲೈ 30 ರಂದು ತಪಾಸಣೆಯ ನಂತರ ರೆಸಿಡೆಂಟ್ ಮೆಡಿಕಲ್ ಆಫೀಸರ್ (RMO) ಕೇತನ್ ನಾಯ್ಕ್, ಪ್ಲಾಸ್ಟಿಕ್ ಸರ್ಜನ್ ನೀಲೇಶ್ ಕಛಡಿಯಾ, ನ್ಯೂರಾಲಜಿಸ್ಟ್ ಪ್ರಯಾಗ್ ಮಕ್ವಾನಾ ಮತ್ತು ನ್ಯೂರೋಸರ್ಜನ್ ಕೇಯೂರ್ ಪ್ರಜಾಪತಿ ಅವರ ವೈದ್ಯಕೀಯ ತಂಡವು ಅವನನ್ನು 'ಬ್ರೇನ್-ಡೆಡ್' (ಮಿದುಳು ನಿಷ್ಕ್ರಿಯ) ಎಂದು ಘೋಷಿಸಿತು. ಅಂಗದಾನ ಚಾರಿಟಬಲ್ ಟ್ರಸ್ಟ್, ಸ್ವಯಂಸೇವಕ ಇಕ್ಬಾಲ್ ಕದಿವಾಲಾ ಮತ್ತು ಕೌನ್ಸಿಲರ್ ನಿರ್ಮಲಾ ಕಥುಡೆ ಅವರು ಕುಟುಂಬದವರಿಗೆ ಅಂಗಾಂಗ ದಾನದ ಮಹತ್ವವನ್ನು ವಿವರಿಸಿದರು.

"ಅಂಗಾಂಗ ಕಸಿ ಪ್ರಕ್ರಿಯೆಯಲ್ಲಿ ಪ್ರತಿಯೊಂದು ಸೆಕೆಂಡು ಕೂಡ ಅಮೂಲ್ಯವಾಗಿರುತ್ತದೆ. ವಂದೇ ಭಾರತ್ ಎಕ್ಸ್‌ಪ್ರೆಸ್‌ನ ಅತಿ ವೇಗದ ಚಲನೆಯಿಂದಾಗಿ ಕೇವಲ ಕೆಲವು ಗಂಟೆಗಳಲ್ಲಿ ಸೂರತ್‌ನಿಂದ ಅಹಮದಾಬಾದ್‌ಗೆ ಜೀವಂತ ಹೃದಯವನ್ನು ತಲುಪಿಸಿದ್ದರಿಂದಲೇ ಈ ಜೀವ ರಕ್ಷಕ ಪ್ರಯತ್ನ ಯಶಸ್ವಿಯಾಗಲು ಸಾಧ್ಯವಾಯಿತು. 77 ಯಶಸ್ವಿ ಹೃದಯ ಕಸಿ ಶಸ್ತ್ರಚಿಕಿತ್ಸೆಗಳನ್ನು ಪೂರ್ಣಗೊಳಿಸಿದ ವೈದ್ಯರ ತಂಡಕ್ಕೂ ಅಭಿನಂದನೆಗಳು." ಭೂಪೇಂದ್ರ ಪಟೇಲ್, ಗುಜರಾತ್ ಮುಖ್ಯಮಂತ್ರಿ

ಐತಿಹಾಸಿಕ ಕ್ಷಣಕ್ಕೆ ಅಧಿಕಾರಿಗಳ ಹರ್ಷ: ಅಹಮದಾಬಾದ್‌ನ ವಿಭಾಗೀಯ ರೈಲ್ವೆ ವ್ಯವಸ್ಥಾಪಕ (ಡಿಆರ್‌ಎಂ) ವೇದ್ ಪ್ರಕಾಶ್ ಮಾತನಾಡಿ, ಈ ಕಾರ್ಯಾಚರಣೆಯು ಭಾರತೀಯ ರೈಲ್ವೆಗೆ ಅತ್ಯಂತ ಹೆಮ್ಮೆಯ ಕ್ಷಣವಾಗಿದೆ. ವಂದೇ ಭಾರತ್ ಎಕ್ಸ್‌ಪ್ರೆಸ್ ಮೂಲಕ ಸೂರತ್‌ನಿಂದ ಅಹಮದಾಬಾದ್‌ಗೆ ಜೀವಂತ ಹೃದಯವನ್ನು (ಲೈವ್ ಹಾರ್ಟ್) ಸುರಕ್ಷಿತವಾಗಿ ಮತ್ತು ಸಮಯಕ್ಕೆ ಸರಿಯಾಗಿ ತಲುಪಿಸಿರುವುದು ಭಾರತೀಯ ರೈಲ್ವೆಗೆ ಅಪಾರ ಹೆಮ್ಮೆ ಮತ್ತು ತೃಪ್ತಿಯ ವಿಷಯವಾಗಿದೆ ಎಂದು ಅವರು ಹೇಳಿದರು.

‘ಯಕೃತ್ತು (ಲಿವರ್) ಮತ್ತು ಎರಡೂ ಮೂತ್ರಪಿಂಡಗಳನ್ನು (ಕಿಡ್ನಿ) ರಸ್ತೆ ಮಾರ್ಗದ ಮೂಲಕ ಅಹಮದಾಬಾದ್‌ನ ‘ಇನ್‌ಸ್ಟಿಟ್ಯೂಟ್ ಆಫ್ ಕಿಡ್ನಿ ಡಿಸೀಸಸ್ ಅಂಡ್ ರಿಸರ್ಚ್ ಸೆಂಟರ್’ (IKDRC) ಗೆ ತಲುಪಿಸಲಾಯಿತು, ಹಾಗೆಯೇ ಹೃದಯವನ್ನು ರೈಲಿನ ಮೂಲಕ ‘ಯು.ಎನ್. ಮೆಹ್ತಾ ಇನ್‌ಸ್ಟಿಟ್ಯೂಟ್ ಆಫ್ ಕಾರ್ಡಿಯಾಲಜಿ ಅಂಡ್ ರಿಸರ್ಚ್ ಸೆಂಟರ್’ ಗೆ ಕೊಂಡೊಯ್ಯಲಾಯಿತು. ಭಾರತೀಯ ರೈಲ್ವೆ, ಗುಜರಾತ್ ರಾಜ್ಯ ಪೊಲೀಸ್, ರೈಲ್ವೆ ಸುರಕ್ಷಾ ಪಡೆ (RPF) ಮತ್ತು ವೈದ್ಯಕೀಯ ತಂಡಗಳ ಪರಸ್ಪರ ಸಹಕಾರದಿಂದ ಈ ಕಾರ್ಯಾಚರಣೆ ಸಾಧ್ಯವಾಯಿತು.’ ಭಾರತೀಯ ರೈಲ್ವೆ

ಇಂತಹ ಜೀವ ರಕ್ಷಕ ಕಾರ್ಯಾಚರಣೆಗಳಲ್ಲಿ ಪ್ರತಿ ಕ್ಷಣವೂ ಅತ್ಯಂತ ಪ್ರಮುಖವಾಗಿರುತ್ತದೆ. ಭಾರತೀಯ ರೈಲ್ವೆ, ಆರ್‌ಪಿಎಫ್ (RPF), ಗುಜರಾತ್ ರಾಜ್ಯ ಪೊಲೀಸ್ ಮತ್ತು ವೈದ್ಯಕೀಯ ತಂಡಗಳ ನಡುವಿನ ಅತ್ಯುತ್ತಮ ಸಮನ್ವಯದಿಂದಾಗಿ ಈ ಮಿಷನ್ ಯಶಸ್ವಿಯಾಗಿದೆ. ವ್ಯಕ್ತಿಯೊಬ್ಬರ ಜೀವ ಉಳಿಸುವಲ್ಲಿ ಪಾತ್ರ ವಹಿಸುವುದು ನಮಗೆ ಕೇವಲ ಜವಾಬ್ದಾರಿಯಷ್ಟೇ ಅಲ್ಲ, ಬದಲಿಗೆ ಸೇವೆ ಮತ್ತು ಮಾನವೀಯತೆಯ ಅತ್ಯುನ್ನತ ಕರ್ತವ್ಯವಾಗಿದೆ ಎಂದು ವೇದ್ ಪ್ರಕಾಶ್ ತಿಳಿಸಿದರು.

ಮಿಷನ್‌ಗಾಗಿ ಈ ರೀತಿ ರಚಿಸಲಾಯಿತು ತಂಡ: ರೈಲ್ವೆ ಆಡಳಿತದ ಪ್ರಕಾರ, ವಂದೇ ಭಾರತ್ ಎಕ್ಸ್‌ಪ್ರೆಸ್‌ನ ವೇಗ, ಸಮಯಪಾಲನೆ ಮತ್ತು ವಿಶ್ವಾಸಾರ್ಹತೆಯೇ ಮುಖ್ಯ ಕಾರಣಗಳಾಗಿದ್ದವು. ಇದರಿಂದಾಗಿ ಅಂಗಾಂಗವನ್ನು ಕಸಿ ಮಾಡಲು ಅಗತ್ಯವಿರುವ ಸೀಮಿತ ಸಮಯದೊಳಗೆ ನಿಗದಿತ ಸ್ಥಳಕ್ಕೆ ತಲುಪಿಸಲು ಸಾಧ್ಯವಾಯಿತು. ಈ ಮಿಷನ್‌ನಲ್ಲಿ ಭಾರತೀಯ ರೈಲ್ವೆಯ ಹಲವು ಇಲಾಖೆಗಳೊಂದಿಗೆ ವೈದ್ಯರು, ಅಂಗಾಂಗ ಕಸಿ ಸಂಯೋಜಕರು (ಆರ್ಗನ್ ಟ್ರಾನ್ಸ್‌ಪ್ಲಾಂಟ್ ಕೋಆರ್ಡಿನೇಟರ್ಸ್), ಆರ್‌ಪಿಎಫ್ (RPF) ಸಿಬ್ಬಂದಿ, ಗುಜರಾತ್ ರಾಜ್ಯ ಪೊಲೀಸ್ ಅಧಿಕಾರಿಗಳು ಮತ್ತು ಇತರ ಅಧಿಕಾರಿಗಳು ಭಾಗವಹಿಸಿದ್ದರು.

ಎಲ್ಲಾ ಸಂಸ್ಥೆಗಳ ನಡುವಿನ ನಿಕಟ ಸಮನ್ವಯದ ಕಾರಣದಿಂದಾಗಿ ಈ ಸಮಯ-ಸೂಕ್ಷ್ಮ ಕಾರ್ಯಾಚರಣೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಲು ಸಾಧ್ಯವಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕಸಿ ಪ್ರಕ್ರಿಯೆಗಾಗಿ ರೈಲಿನ ಮೂಲಕ ಜೀವಂತ ಹೃದಯವನ್ನು (ಲೈವ್ ಹಾರ್ಟ್) ಕೊಂಡೊಯ್ದಿರುವುದು ದೇಶದಲ್ಲೇ ಇದೇ ಮೊದಲ ಬಾರಿಯಾಗಿದೆ. ಇದು ಪ್ರಯಾಣಿಕ ಮತ್ತು ಸರಕು ಸೇವೆಗಳ ಜೊತೆಗೆ ತುರ್ತು ವೈದ್ಯಕೀಯ ಲಾಜಿಸ್ಟಿಕ್ಸ್‌ನಲ್ಲೂ ರೈಲ್ವೆ ನೆಟ್‌ವರ್ಕ್‌ನ ಪಾತ್ರವನ್ನು ಮತ್ತಷ್ಟು ಹೆಚ್ಚಿಸಿದೆ.

Ads on article

Advertise in articles 1

advertising articles 2

Advertise under the article