ಪಿಲಾರಿನಲ್ಲಿ ಯುವಕ ಆತ್ಮಹತ್ಯೆ: ಡೆತ್ನೋಟ್ನಲ್ಲಿ ಮೂವರ ಹೆಸರು ಉಲ್ಲೇಖ, ಉಳ್ಳಾಲ ಠಾಣೆಯಲ್ಲಿ ಪ್ರಕರಣ
Wednesday, August 5, 2026
ಅವಿವಾಹಿತ ಯುವಕನೊಬ್ಬ ಮನೆಯಲ್ಲೇ ಫ್ಯಾನಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಸೋಮೇಶ್ವರ ಸಮೀಪದ ಪಿಲಾರು ಸರ್ಕಾರಿ ಶಾಲೆ ಬಳಿ ನಡೆದಿದೆ. ಮೃತ ಯುವಕ ಬರೆದಿದ್ದ ಎನ್ನಲಾದ ಡೆತ್ನೋಟ್ನಲ್ಲಿ ಮೂವರು ಯುವಕರ ಹೆಸರನ್ನು ಉಲ್ಲೇಖಿಸಿರುವ ಹಿನ್ನೆಲೆಯಲ್ಲಿ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆತ್ಮಹತ್ಯೆ ಮಾಡಿಕೊಂಡವರು ನಿತಿನ್ ಕುಮಾರ್ ಯಾನೆ ನೀತು (35) ಎಂದು ಗುರುತಿಸಲಾಗಿದೆ. ಮೂಲತಃ ಕೋಟೆಕಾರು ಕೊಂಡಾಣ ಮಿತ್ರನಗರ ನಿವಾಸಿಯಾಗಿದ್ದ ನಿತಿನ್, ಪಿಲಾರಿನಲ್ಲಿರುವ ತನ್ನ ಭಾವ ಪ್ರಶಾಂತ್ ಪಕ್ಕಳ ಅವರ ಮನೆಯಲ್ಲಿ ಕಳೆದ ಮೂರು ವರ್ಷಗಳಿಂದ ವಾಸವಿದ್ದನು. ತೊಕ್ಕೊಟ್ಟು ಕಾಪಿಕಾಡಿನ ಕ್ಯಾಟರಿಂಗ್ ಸಂಸ್ಥೆಯೊಂದರಲ್ಲಿ ಕೆಲಸ ಮಾಡುತ್ತಿದ್ದ ನಿತಿನ್, ಕಳೆದ ಐದು ವರ್ಷಗಳಿಂದ ಕಾಲಿನ ವೆರಿಕೋಸ್ ಸಮಸ್ಯೆಯಿಂದ ಬಳಲುತ್ತಿದ್ದರು ಎನ್ನಲಾಗಿದೆ.
ಮೂರು ದಿನಗಳಿಂದ ಜ್ವರದಿಂದ ಬಳಲುತ್ತಿದ್ದ ನಿತಿನ್ ಮನೆಯಲ್ಲೇ ವಿಶ್ರಾಂತಿಯಾಗಿದ್ದರು. ಮಂಗಳವಾರ ರಾತ್ರಿ ಊಟ ಮುಗಿಸಿ ಕೋಣೆಗೆ ತೆರಳಿದ ಅವರು, ಬುಧವಾರ ಬೆಳಗ್ಗೆ ಫ್ಯಾನಿಗೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.
ನಿತಿನ್ ಧರಿಸಿದ್ದ ಪ್ಯಾಂಟ್ ಜೇಬಿನಲ್ಲಿ ಚೀಟಿಯೊಂದು ಪತ್ತೆಯಾಗಿದ್ದು, ಅದರಲ್ಲಿ “ನನ್ನ ಸಾವಿಗೆ ಚರಣ್, ಪುಟ್ಟ, ಕಾರ್ತಿಕ್ ಕಾರಣ” ಎಂದು ಬರೆಯಲಾಗಿದೆ ಎನ್ನಲಾಗಿದೆ. ಈ ಮೂವರ ಕಿರುಕುಳ ಮತ್ತು ದುಷ್ಟ ಪ್ರೇರಣೆಯಿಂದಲೇ ಆತ್ಮಹತ್ಯೆ ನಡೆದಿದೆ ಎಂದು ಆರೋಪಿಸಲಾಗಿದೆ.