ದೊಡ್ಡಬಳ್ಳಾಪುರ :ಹೆಂಡತಿಯನ್ನು ಕೊಲೆ ಮಾಡಿ ಪರಾರಿಯಾಗಿದ್ದ ಗಂಡನ ಶವ ಕೊಳೆತ ಸ್ಥಿತಿಯಲ್ಲಿ ಪತ್ತೆ..!!

ದೊಡ್ಡಬಳ್ಳಾಪುರ :ಹೆಂಡತಿಯನ್ನು ದೊಡ್ಡಬಳ್ಳಾಪುರದ ಲಾಡ್ಜ್ಗೆ ಕರೆದುಕೊಂಡು ಬಂದು ಉಸಿರುಟಕಟಿಸಿ ಕೊಲೆ ಮಾಡಿ ಬಳಿಕ ಪರಾರಿಯಾಗಿದ್ದ ಗಂಡ ಆತ್ಮಹತ್ಯೆ ಮಾಡಿಕೊಂಡಿದ್ದು, ಅವನ ಸಂಪೂರ್ಣ ಕೊಳೆತ ಸ್ಥಿತಿಯಲ್ಲಿದ್ದ ಶವ ಮದುಗೆರೆ ಗ್ರಾಮದಲ್ಲಿ ಸಿಕ್ಕಿದೆ.
ದೊಡ್ಡಬಳ್ಳಾಪುರದಲ್ಲಿ ಪತ್ನಿ ವಿದ್ಯಾಳನ್ನು ಕೊಲೆ ಮಾಡಿದ್ದ ಆನಂದ್, ಗೌರಿಬಿದನೂರು ತಾಲೂಕಿನ ಸ್ವಗ್ರಾಮ ಮದುಗೆರೆ ಗ್ರಾಮದ ಕೆರೆಯ ಬದಿಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಸೆಪ್ಟಂಬರ್ 15ರಂದು ದೊಡ್ಡಬಳ್ಳಾಪುರದ ಲಾಡ್ಜ್ನಲ್ಲಿ 23 ವರ್ಷದ ವಿದ್ಯಾಳನ್ನು ಐಡಿ ಕಾರ್ಡ್ ಟ್ಯಾಗ್ನಿಂದ ಕತ್ತು ಬಿಗಿದು ಕೊಲೆ ಮಾಡಿದ್ದ ಆನಂದ್ ಬಳಿಕ ಪರಾರಿಯಾಗಿದ್ದ. ಸೆಪ್ಟೆಂಬರ್ 16ರಂದು ಪ್ರಕರಣ ಬೆಳಕಿಗೆ ಬಂದಿತ್ತು. ಪರಾರಿಯಾಗಿದ್ದ ಆನಂದ್ ಸ್ವಗ್ರಾಮ ಮದುಗೆರೆ ಗ್ರಾಮದ ಕೆರೆಯಲ್ಲಿ ಶವವಾಗಿ ಪತ್ತೆಯಾಗಿದ್ದಾನೆ.
ಕೆರೆಯ ಬಳಿ ಬೈಕ್ ಬಿಟ್ಟು, ಮದ್ಯ ಸೇವಿಸಿ ಜಾಲಿ ಮರ ಹತ್ತಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಜಾಲಿ ಮರದ ಬುಡದಲ್ಲಿ ಮದ್ಯದ ಬಾಟಲಿ, ಸಿಗರೇಟ್ ಪ್ಯಾಕೆಟ್ ಪತ್ತೆಯಾಗಿದ್ದು, ಆನಂದ್ ಜೇಬಿನಲ್ಲಿ ಆತನ ಹಾಗೂ ವಿದ್ಯಾಳ ಮೊಬೈಲ್ಗಳು ಸಿಕ್ಕಿವೆ. ಸಂಪೂರ್ಣ ಕೊಳೆತ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿದೆ. ಗೌರಿಬಿದನೂರು ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.