![ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವಾರಾಂತ್ಯದಲ್ಲಿ ಭಾರೀ ಜನ ಸೇರುವ ಕಾರ್ಯಕ್ರಮಗಳನ್ನು ಮುಂದೂಡಲು DC ಮನವಿ ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವಾರಾಂತ್ಯದಲ್ಲಿ ಭಾರೀ ಜನ ಸೇರುವ ಕಾರ್ಯಕ್ರಮಗಳನ್ನು ಮುಂದೂಡಲು DC ಮನವಿ](https://blogger.googleusercontent.com/img/b/R29vZ2xl/AVvXsEh5mG2JVTBsWqLPvrx2KIF4k0AGbF7sbpWuAscUpy54-_rSE84GD_E97UpF1oPTff6GANL57fVuHmmQqFGP-591hRO1xfZADImzI5j66XiH8xh96wb3iAdr2feUJOvptYbPzrL32-EiE3g/s1600/1641393486686573-0.png)
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವಾರಾಂತ್ಯದಲ್ಲಿ ಭಾರೀ ಜನ ಸೇರುವ ಕಾರ್ಯಕ್ರಮಗಳನ್ನು ಮುಂದೂಡಲು DC ಮನವಿ
Wednesday, January 5, 2022
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈ ವಾರ ವೀಕೆಂಡ್ ಕರ್ಫ್ಯೂಗೆ ಪೂರ್ವ ನಿಗದಿತ ಕಾರ್ಯಕ್ರಮದಲ್ಲಿ ಮದುವೆ ಸಮಾರಂಭ, ಯಕ್ಷಗಾನ ಕಾರ್ಯಕ್ರಮಗಳಿಗೆ ಸರಕಾರದ ಮಾರ್ಗಸೂಚಿಯನ್ವಯ ಅವಕಾಶ ನೀಡಲಾಗುತ್ತದೆ. ಆದರೆ ಹೊರಾಂಗಣದಲ್ಲಿ 200 ಮಂದಿಗೆ ಹಾಗೂ ಒಳಾಂಗಣದಲ್ಲಿ 100 ಮಂದಿ ಜನ ಸೇರಲು ಮಾತ್ರ ಅವಕಾಶ ಕಲ್ಪಿಸಲಾಗುವುದು ಎಂದು ದ.ಕ.ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಹೇಳಿದರು.
ತಮ್ಮ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಂದಿನ ವಾರದ ವಾರಾಂತ್ಯದ ಮದುವೆ, ಯಕ್ಷಗಾನ ಮುಂತಾದ ಕಾರ್ಯಕ್ರಮಗಳಿಗೆ ಯಾವುದೇ ಅವಕಾಶ ಇರುವುದಿಲ್ಲ. ವೀಕೆಂಡ್ ನಲ್ಲಿ ದೇವಸ್ಥಾನ ಪ್ರವೇಶಕ್ಕೆ ಅವಕಾಶ ಇರುವುದಿಲ್ಲ. ಆದರೆ ನಿತ್ಯದ ಸೇವೆಗಳಿಗೆ ಅವಕಾಶ ಇದೆ. ಭಾರೀ ಜನಸಂಖ್ಯೆ ಸೇರುವ ಕಂಬಳ, ಉರೂಸ್, ಧರ್ಮನೇಮ, ಬ್ರಹ್ಮಕಲಶ, ಚರ್ಚ್ ಗಳ ಸಮಾರಂಭಗಳನ್ನು ಮುಂದೂಡುವಂತೆ ಜಿಲ್ಲಾಧಿಕಾರಿ ಮನವಿ ಮಾಡಿದರು.
ವಾರಾಂತ್ಯದಲ್ಲಿ ಅಂಗಡಿಗಳು ತೆರದಿದ್ದು, ಸಾರ್ವಜನಿಕರು ತಮ್ಮ ಮನೆಯ ಹತ್ತಿರದಲ್ಲಿ ಇರುವ ಅಂಗಡಿಗಳಿಗೆ ತೆರಳಿ ದಿನಸಿ ಸಾಮಾಗ್ರಿಗಳನ್ನು ಖರೀದಿಸಲು ಅವಕಾಶವಿದೆ. ಶಾಲೆಗಳಿಗೆ ಕಾಲೇಜುಗಳಿಗೆ ರಜೆಯಿದ್ದು, ಪರೀಕ್ಷೆ ಇರುವವರು ಹಾಲ್ ಟಿಕೆಟ್ ತೋರಿಸಿ ಹೋಗಬಹುದು. ನಿತ್ಯ ಓಡಾಟ ಮಾಡುವ ಪ್ರಯಾಣಿಕರಿಗೆ ತೊಂದರೆ ಆಗುವ ಹಿನ್ನೆಲೆಯಲ್ಲಿ ಕೇರಳ ಗಡಿಗಳನ್ನು ಸದ್ಯಕ್ಕೆ ಮುಚ್ಚಲಾಗುತ್ತಿಲ್ಲ.ಆದರೆ ಬಾರ್ಡರ್ ನಲ್ಲಿ ಹೆಚ್ಚಿನ ಪೊಲೀಸ್ ನಿಯೋಜನೆ ಮಾಡಿ ಚೆಕ್ ಮಾಡಲಾಗುತ್ತದೆ ಎಂದು ಡಾ.ಕೆ.ವಿ.ರಾಜೇಂದ್ರ ಹೇಳಿದರು.