![ಉಡುಪಿ ಸ್ಕಾರ್ಫ್ ವಿವಾದ:ಯಾವುದೇ ಕಾರಣಕ್ಕೂ ಹಿಜಾಬ್ ಧರಿಸಿ ಕಾಲೇಜು ಪ್ರವೇಶ ಇಲ್ಲ...ಪಟ್ಟು ಸಡಿಲಿಸದಿದ್ದರೆ ಆನ್ ಲೈನ್ ಕ್ಲಾಸ್ -ಉಡುಪಿ ಶಾಸಕ ರಘುಪತಿ ಭಟ್ ಉಡುಪಿ ಸ್ಕಾರ್ಫ್ ವಿವಾದ:ಯಾವುದೇ ಕಾರಣಕ್ಕೂ ಹಿಜಾಬ್ ಧರಿಸಿ ಕಾಲೇಜು ಪ್ರವೇಶ ಇಲ್ಲ...ಪಟ್ಟು ಸಡಿಲಿಸದಿದ್ದರೆ ಆನ್ ಲೈನ್ ಕ್ಲಾಸ್ -ಉಡುಪಿ ಶಾಸಕ ರಘುಪತಿ ಭಟ್](https://blogger.googleusercontent.com/img/b/R29vZ2xl/AVvXsEgMoihwNR_rTaXPJKXsuB1qs5xkfbixWAqpkES5sGnVbaAavTIGDpUCFWZm6W6C9bBSj4HQBtK3DFxVTyaZM6r5Gzz__OAE2eUWhzWnDcvUx1shbEx8kItq1lCqFgpGAfKlL5WWzzQbAYI/s1600/1643255444175917-0.png)
ಉಡುಪಿ ಸ್ಕಾರ್ಫ್ ವಿವಾದ:ಯಾವುದೇ ಕಾರಣಕ್ಕೂ ಹಿಜಾಬ್ ಧರಿಸಿ ಕಾಲೇಜು ಪ್ರವೇಶ ಇಲ್ಲ...ಪಟ್ಟು ಸಡಿಲಿಸದಿದ್ದರೆ ಆನ್ ಲೈನ್ ಕ್ಲಾಸ್ -ಉಡುಪಿ ಶಾಸಕ ರಘುಪತಿ ಭಟ್
Wednesday, January 26, 2022
ಉಡುಪಿ ಸರಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನಲ್ಲಿ ಕಳೆದ ಮೂರು ತಿಂಗಳಿನಿಂದ ನಡೆಯುತ್ತಿರುವ ಹಿಜಾಬ್ ವಿವಾದದ ಬಗ್ಗೆ ಉಡುಪಿ ಶಾಸಕ ಹಾಗೂ ಕಾಲೇಜು ಅಭಿವೃದ್ಧಿ ಸಮಿತಿ ಅಧ್ಯಕ್ಷ ಕೆ. ರಘುಪತಿ ಭಟ್ ಪ್ರತಿಕ್ರಿಯಿಸಿದ್ದಾರೆ.
ಪ್ರತಿಭಟನಾನಿರತ ವಿದ್ಯಾರ್ಥಿನಿಯರಿಗೆ ಹಿಜಾಬ್ ಹಾಕದೆ ತರಗತಿಗೆ ಹಾಜರಾಗುವಂತೆ ಮನವಿ ಮಾಡಲಾಗುವುದು. ಪಟ್ಟು ಸಡಿಲಿಸದಿದ್ದರೆ ಅವರಿಗೆ ಆನ್ಲೈನ್ ತರಗತಿಯ ವ್ಯವಸ್ಥೆ ಮಾಡಲಾಗುವುದು. ಆದರೆ ಯಾವುದೇ ಕಾರಣಕ್ಕೂ ತರಗತಿಯಲ್ಲಿ ಹಿಜಾಬ್ ಧರಿಸಿ ಪ್ರವೇಶಕ್ಕೆ ಅವಕಾಶ ನೀಡುವುದಿಲ್ಲ ಎಂದು ರಘುಪತಿ ಭಟ್ ತಿಳಿಸಿದ್ದಾರೆ.
ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಭಟ್, ಸ್ಕಾರ್ಫ್ ವಿಚಾರವಾಗಿ ಸರಕಾರ ಯಥಾಸ್ಥಿತಿ ಕಾಪಾಡುವಂತೆ ಆದೇಶ ಹೊರಡಿಸಿದ ಬೆನ್ನಲ್ಲೇ ಕಾಲೇಜು ಅಭಿವೃದ್ಧಿ ಸಮಿತಿ ನಡೆಸಿದ ಸಭೆಯ ಬಳಿಕ ನಿವೃತ್ತ ಪೊಲೀಸ್ ಅಧಿಕಾರಿ ಜಿ.ಎ. ಬಾವ ನೇತೃತ್ವದಲ್ಲಿ ಮುಸ್ಲಿಮ್ ಮುಖಂಡರನ್ನು ಭೇಟಿ ಮಾಡಿ ಚರ್ಚಿಸಿದ ಬಳಿಕ ಕಾಲೇಜು ಅಭಿವೃದ್ಧಿ ಸಮಿತಿ ಈ ನಿರ್ಧಾರವನ್ನು ತೆಗೆದುಕೊಂಡಿದೆ ಎಂದರು.
ಯಾವುದೇ ಕಾರಣಕ್ಕೂ ಸ್ಕಾರ್ಫ್ ಹಾಕಲು ಅವಕಾಶ ಕೊಡುವುದಿಲ್ಲ ಒಂದು ವೇಳೆ ಅವಕಾಶ ನೀಡಿದರೆ ಮುಂದೆ ಎಲ್ಲ ಕಾಲೇಜಿನಲ್ಲಿ ಆರಂಭವಾಗುತ್ತದೆ ಇದಕ್ಕೆ ಪ್ರತಿರೋಧವಾಗಿ ಹಿಂದೂ ವಿದ್ಯಾರ್ಥಿಗಳು ಕೇಸರಿ ಶಾಲು, ಪೇಟ ಧರಿಸಿಕೊಂಡು ಬಂದು ಮುಂದೆ ವಿವಾದಕ್ಕೆ ಎಡೆಮಾಡಿಕೊಟ್ಟಂತಾಗುತ್ತದೆ ಹಾಗೂ ಕೋಮು ಸೌಹಾರ್ದತೆಗೆ ದಕ್ಕೆ ಉಂಟಾಗುತ್ತದೆ ಎಂದು ಜಿಎ ಬಾವಾ ನೇತ್ರತ್ವದ ಮುಸ್ಲಿಂ ನಿಯೋಗಕ್ಕೆ ಮನವರಿಕೆ ಮಾಡಲಾಗಿದೆ ಎಂದರು.
ಪ್ರಾಂಶುಪಾಲರು ಮಕ್ಕಳ ಪೋಷಕರನ್ನು ಕರೆದು, ಹಿಜಾಬ್ ಧರಿಸದೆ ತರಗತಿ ಬರುವಂತೆ ಮನವಿ ಮಾಡಲಿದ್ದಾರೆ. ಈಗಾಗಲೇ ಒಂದೂವರೆ ವರ್ಷ ಹಿಜಾಬ್ ಇಲ್ಲದೆ ಅವರು ತರಗತಿಗೆ ಬಂದಿದ್ದಾರೆ. ಇನ್ನೂ ಒಂದು ತಿಂಗಳು ಮಾತ್ರ ತರಗತಿ ಇರುತ್ತದೆ.ನಂತರ ಪರೀಕ್ಷೆ ನಡೆಯುತ್ತದೆ. ಒಂದು ವೇಳೆ ವಿದ್ಯಾರ್ಥಿನಿಯರು ಹಾಗೂ ಪೋಷಕರು ಹಿಜಾಬ್ ಇಲ್ಲದೆ ಬರಲು ಒಪ್ಪದಿದ್ದರೆ ನಾವು ತರಗತಿ ಪ್ರವೇಶಕ್ಕೆ ಅವಕಾಶ ಇಲ್ಲ. ಮುಂದಿನ ವರ್ಷ ಯಾವ ಕಾಲೇಜಿಗೆ ಬೇಕಾದರೂ ಅವರು ಸೇರಿಕೊಳ್ಳಬಹುದು ಎಂದು ತಿಳಿಸಿದ್ದಾರೆ.