![ಮಂಗಳೂರು: ಸುರತ್ಕಲ್ NITK ಟೋಲ್ ಗೇಟ್ ತೆರವಿಗೆ ಸಂಸದ ನಳಿನ್ ಮನವಿ ಮಂಗಳೂರು: ಸುರತ್ಕಲ್ NITK ಟೋಲ್ ಗೇಟ್ ತೆರವಿಗೆ ಸಂಸದ ನಳಿನ್ ಮನವಿ](https://blogger.googleusercontent.com/img/b/R29vZ2xl/AVvXsEizWC5LkMeFYO2bSC0Q6HdXxQHdWijSw9jBa2SuOLZQHJTeUJnzV5KOTqF3ME4TFAJfwHP_1v6GkbbI3c4e6_RjNpIx3afhDyG1gQtfKL-_Zr-m-JmSdYdCUNxURHaA4MlErA9X7t4kFcU/s1600/1646146016820270-0.png)
ಮಂಗಳೂರು: ಸುರತ್ಕಲ್ NITK ಟೋಲ್ ಗೇಟ್ ತೆರವಿಗೆ ಸಂಸದ ನಳಿನ್ ಮನವಿ
Tuesday, March 1, 2022
ಮಂಗಳೂರು : ಸುರತ್ಕಲ್ ಎನ್ಐಟಿಕೆ ಬಳಿಯಿರುವ ಟೋಲ್ ಗೇಟ್ ಅನ್ನು ಹೆಜಮಾಡಿ ಟೋಲ್ ಗೇಟ್ ನೊಂದಿಗೆ ವಿಲೀನಗೊಳಿಸಬೇಕು ಅಥವಾ ಶೀಘ್ರದಲ್ಲೇ ತೆರವು ಮಾಡಬೇಕೆಂದು ದ.ಕ.ಜಿಲ್ಲಾ ಸಂಸದ ನಳಿನ್ ಕುಮಾರ್ ಕಟೀಲ್ ಆಗ್ರಹಿಸಿದ್ದಾರೆ
ನಗರದ ಕುಲಶೇಖರ ಕೋರ್ಡೆಲ್ ಹಾಲ್ ಆವರಣದಲ್ಲಿ 3,163 ಕೋಟಿ ರೂ. ಮೊತ್ತದ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಚಾಲನಾ ಕಾರ್ಯಕ್ರಮದಲ್ಲಿ ಮಾತನಾಡಿದ ನಳಿನ್, ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ 30 ಕಿ.ಮೀ.ನಲ್ಲಿ 3 ಟೋಲ್ ಗೇಟ್ ಗಳು ಕಾರ್ಯಾಚರಿಸುತ್ತಿದೆ. ಆದ್ದರಿಂದ ಸುರತ್ಕಲ್ ಎನ್ಐಟಿಕೆ ಟೋಲ್ ಗೇಟ್ ಅನ್ನು ಹೆಜಮಾಡಿ ಟೋಲ್ ಗೇಟ್ ನೊಂದಿಗೆ ವಿಲೀನಗೊಳಿಸಿ ಅಥವಾ ತೆರವುಗೊಳಿಸಿ ಎಂದು ಆಗ್ರಹಿಸಿದರು.
ದೇಶದ ಹೆದ್ದಾರಿ ಕಾಮಗಾರಿಗಳಿಗೆ ಕೇಂದ್ರ ಸಚಿವ ನಿತಿನ್ ಗಡ್ಕರಿಯವರು ಕುದುರೆಯ ವೇಗವನ್ನು ನೀಡಿದ್ದಾರೆ. ಮುಂದಿನ ದಿನಗಳಲ್ಲಿ ದೇಶದ ರಸ್ತೆಗಳು ಅಮೇರಿಕಾ ಮಾದರಿಯಲ್ಲಿ ಅಭಿವೃದ್ಧಿ ಹೊಂದಲಿದೆ. ದ.ಕ.ಜಿಲ್ಲೆಯಲ್ಲಿ ಹಲವು ವರ್ಷಗಳಿಂದ ಬೇಡಿಕೆಯಲ್ಲಿರುವ ನಂತೂರು ಪ್ಲೈ ಓವರ್ ನಿರ್ಮಾಣ ಕಾಮಗಾರಿ, ಮುಲ್ಕಿ-ಕಟೀಲು-ಬಿ.ಸಿ.ರೋಡ್-ತಲಪಾಡಿ ಬೈಪಾಸ್ ರಸ್ತೆ ಕಾಮಗಾರಿ, ಬೆಳ್ತಂಗಡಿಯಲ್ಲಿ 4ಕಿ.ಮೀ.ಚತುಷ್ಪಥ ಕಾಮಗಾರಿ ನಡೆಸಬೇಕೆಂದು ಸಿಎಂಗೆ ಸಂಸದ ನಳಿನ್ ಕುಮಾರ್ ಕಟೀಲು ಮನವಿ ಮಾಡಿದರು.