Mangalore: ಸಿಎಂ ಬೊಮ್ಮಾಯಿ, ಸಚಿವ ಸುನಿಲ್ ಕುಮಾರ್ ರಿಂದ ಬಿಲ್ಲವ ಸಮುದಾಯಕ್ಕೆ ವಂಚನೆ: ಶ್ರೀ ಪ್ರಣವಾನಂದ ಸ್ವಾಮೀಜಿ

Mangalore: ಸಿಎಂ ಬೊಮ್ಮಾಯಿ, ಸಚಿವ ಸುನಿಲ್ ಕುಮಾರ್ ರಿಂದ ಬಿಲ್ಲವ ಸಮುದಾಯಕ್ಕೆ ವಂಚನೆ: ಶ್ರೀ ಪ್ರಣವಾನಂದ ಸ್ವಾಮೀಜಿ

ಮಂಗಳೂರು: ಸಿಎಂ ಬೊಮ್ಮಾಯಿ ಹಾಗೂ ಸಚಿವ ಸುನಿಲ್ ಕುಮಾರ್ ಬಿಲ್ಲವ ನಿಗಮ ಮಂಡಳಿ ಸ್ಥಾಪನೆ ಮಾಡದೆ ಕೇವಲ 5 ಕೋಟಿ ರೂ. ಅನುಮಾನದಲ್ಲಿ ಸಮುದಾಯ ಭವನ ನಿರ್ಮಾಣ ಮಾಡುತ್ತೇವೆ ಎಂದು ಹೇಳಿ ಈಡಿಗ ಬಿಲ್ಲವ ಸಮುದಾಯಕ್ಕೆ ವಂಚನೆ ಮಾಡಿದ್ದಾರೆ ಎಂದು ಮಂಗಳೂರಿನಲ್ಲಿಂದು ಕಲಬುರಗಿ ಬ್ರಹ್ಮಶ್ರೀ ನಾರಾಯಣ ಗುರು ಶಕ್ತಿಪೀಠದ ಶ್ರೀ ಪ್ರಣವಾನಂದ ಸ್ವಾಮೀಜಿ ಹೇಳಿದರು.

ಸಚಿವ ಸುನಿಲ್ ಕುಮಾರ್, ಸಮುದಾಯವನ್ನು ಸಂಪೂರ್ಣ ದಾರಿ ತಪ್ಪಿಸಿ, ತಮ್ಮ ರಾಜಕೀಯ ಲಾಭಕ್ಕೆ ಬಿಲ್ಲವ ಸಮುದಾಯವನ್ನು ಬಲಿ ಕೊಡುತ್ತಿದ್ದಾರೆ. ಯಾಕೆ ಅವರಿಗೆ 500 ಕೋಟಿ ರೂ. ಅನುದಾನದಲ್ಲಿ ನಿಗಮ ಮಂಡಳಿ ಸ್ಥಾಪಿಸಲು‌ ಸಾಧ್ಯವಿಲ್ಲ.‌ ಆದ್ದರಿಂದ ಮುಂದಿನ ದಿನಗಳಲ್ಲಿ ಬಿಲ್ಲವ ಸಮುದಾಯದ ಪ್ರತಿಯೊಂದು ಮನೆಗೂ ತೆರಳಿ ಜಾಗೃತಿ ಮೂಡಿಸುವ ಕಾರ್ಯ ಮಾಡಿ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಗೆ ತಕ್ಕ ಪಾಠ ಕಲಿಸುತ್ತೇವೆ ಎಂದು ಹೇಳಿದರು.

ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ, ಕಾಂಗ್ರೆಸ್ ಪಕ್ಷಗಳು ದ.ಕ.ಜಿಲ್ಲೆಯಲ್ಲಿ ಬಿಲ್ಲವ ಸಮುದಾಯದ ಕನಿಷ್ಠ ಪಕ್ಷ 3 ಮಂದಿ ಅಭ್ಯರ್ಥಿಗಳಿಗಾದರೂ ಟಿಕೆಟ್ ನೀಡಬೇಕು. ಬಿಲ್ಲವ ಸಮುದಾಯವನ್ನು ರಾಜಕೀಯವಾಗಿ ಬಳಸುವುದನ್ನು ನಾವು ಸಹಿಸೋಲ್ಲ. ಬಿಜೆಪಿಯ ಬ್ರಾಹ್ಮಣಶಾಹಿ ನೇತಾರರ ದಾಸರಾಗಿ ಬಿಲ್ಲವ ಸಮುದಾಯದ ಮಂತ್ರಿಗಳು ಕೆಲಸ ಮಾಡುತ್ತಿದ್ದಾರೆ. 

ಪ್ರವೀಣ್ ನೆಟ್ಟಾರು ಪತ್ನಿಗೆ ಸಿಎಂ ಕಚೇರಿಯಲ್ಲಿ ಕೆಲಸ ಕೊಡುವ ಬದಲು ಖಾಯಂ ಉದ್ಯೋಗ ನೀಡಿ. ನಾರಾಯಣ ಗುರುಗಳ ಹೆಸರನ್ನು ಮೆಟ್ರೋ, ಬಸ್ ತಂಗುದಾಣಕ್ಕೆ ಇಡುವ ಬದಲು ವಿಧಾನಸಭೆಯ ಅಂಗಣದಲ್ಲಿ ಅವರ ಮೂರ್ತಿಯನ್ನು ಪ್ರತಿಷ್ಠಾಪಿಸಿ. ಬಿಲ್ಲವ, ಈಡಿಗ ಸಮುದಾಯದ ಕೋಟ, ಓಟು ಬೇಕು ಬಿಲ್ಲವರು, ಈಡಿಗರು ಬೇಡ. ಸ್ವತಂತ್ರ ಭಾರತದಲ್ಲಿ ಹಿಂದುಳಿದ ವರ್ಗದ ಸಮುದಾಯದ ಮಂದಿ ಅತಂತ್ರರಾಗಿ ಬದುಕುತ್ತಿದ್ದಾರೆ‌. ಆದ್ದರಿಂದ ನಾನು ಮುಂದಿನ ದಿನಗಳಲ್ಲಿ ವಿಧಾನಸಭೆಗೆ ಪಾದಯಾತ್ರೆ ಮಾಡುವ ಬಗ್ಗೆ 15 ದಿನಗಳಲ್ಲಿ ನಿರ್ಧರಿಸಲಿದ್ದೇನೆ. ಅಲ್ಲದೆ ದ.ಕ.ಜಿಲ್ಲೆಯ ಎಲ್ಲಾ ಬಿಲ್ಲವ ಸಂಘಟನೆಗಳ ಮೂಲಕ ಬೃಹತ್ ಹೋರಾಟ ನಡೆಸಲಿದ್ದೇವೆ ಎಂದು ಶ್ರೀ ಪ್ರಣವಾನಂದ ಸ್ವಾಮೀಜಿ ಹೇಳಿದರು.

ಬಿಲ್ಲವ, ಈಡಿಗ ಸಮುದಾಯದ ಕುಲಕಸುಬು ಶೇಂದಿಯನ್ನು ದ.ಕ., ಉಡುಪಿ ಸೇರಿದಂತೆ ರಾಜ್ಯಾದ್ಯಂತ 29 ಜಿಲ್ಲೆಗಳಲ್ಲಿ ‌ಬಂದ್ ಮಾಡಲಾಗಿದೆ. ನಮ್ಮ ಸಮುದಾಯದಲ್ಲಿ 3 ಸಾವಿರ ಮಂದಿಯಲ್ಲಿ ಬಾರ್ ಲೈಸೆನ್ಸ್ ಇದೆ. 10 ಸಾವಿರ ಲೈಸೆನ್ಸ್ ಬೇರೆ ಸಮುದಾಯದವರಲ್ಲಿದೆ. ಆದ್ದರಿಂದ ರಾಜ್ಯಾದ್ಯಂತ ಬಿಲ್ಲವ, ಈಡಿಗ ಸಮುದಾಯಕ್ಕೆ ಶೇಂದಿ ಇಳಿಸಿ ಮಾರಾಟ ಮಾಡಲು ಸರಕಾರ ಅನುಮತಿ ನೀಡಬೇಕು. ಅದಾಗುವುದಿಲ್ಲವೇ ಸರಕಾರಕ್ಕೆ ತಾಕತ್ತಿದ್ದರೆ 13 ಸಾವಿರ ಬಾರ್, ವೈನ್ ಶಾಪ್, ಗುಟ್ಕ ಪಾನ್, ಪಬ್ ಬಂದ್ ಮಾಡಲಿ ಎಂದರು.

2023ರಲ್ಲಿ ರಾಜ್ಯದ ಸಿಎಂ ಬಿಲ್ಲವ, ಈಡಿಗ ಸಮುದಾಯದವರೇ ಆಗಲಿದ್ದಾರೆ ಎಂಬುದಕ್ಕೆ ಯಾವುದೇ ಅನುಮಾನವಿಲ್ಲ. ಈಗಲೂ ಉಪ ಮುಖ್ಯಮಂತ್ರಿ ಸ್ಥಾನಕ್ಕೆ ಬಿಲ್ಲವ ಸಮುದಾಯಕ್ಕೆ ಹಕ್ಕು ಇದೆ‌. ಬಿಜೆಪಿ ಸರಕಾರ ಬಿಲ್ಲವ ಸಮುದಾಯಕ್ಕೆ ಮೂಗಿಗೆ ತುಪ್ಪ ಸವರುವ ಕಾರ್ಯ ಮಾಡಿದ್ದೇ ಆದಲ್ಲಿ ಚುನಾವಣೆಯ ಸಂದರ್ಭದಲ್ಲಿ ಈ ಸಮುದಾಯ ತಕ್ಕ ಪಾಠ ಕಲಿಸಲಿದೆ ಎಂದುಶ್ರೀ ಪ್ರಣವಾನಂದ ಸ್ವಾಮೀಜಿ ಹೇಳಿದರು.

Ads on article

Advertise in articles 1

advertising articles 2

Advertise under the article