![ಮಂಗಳೂರು: ಗ್ರಾಪಂಗಳಲ್ಲಿ ರಾಷ್ಟ್ರಧ್ವಜಸ್ತಂಭ ನಿರ್ಮಾಣ ಕಾರ್ಯವನ್ನು ಒಂದೇ ಕಂಪೆನಿಗೆ ವಹಿಸಿರುವುದು ತಕ್ಷಣ ರದ್ದಾಗಲಿ: ಖಾದರ್ ಆಗ್ರಹ ಮಂಗಳೂರು: ಗ್ರಾಪಂಗಳಲ್ಲಿ ರಾಷ್ಟ್ರಧ್ವಜಸ್ತಂಭ ನಿರ್ಮಾಣ ಕಾರ್ಯವನ್ನು ಒಂದೇ ಕಂಪೆನಿಗೆ ವಹಿಸಿರುವುದು ತಕ್ಷಣ ರದ್ದಾಗಲಿ: ಖಾದರ್ ಆಗ್ರಹ](https://blogger.googleusercontent.com/img/b/R29vZ2xl/AVvXsEh3EEjDTAVPohxgHPUncBecVoRupWNAhI_72Sdoh91mzyezA_xBFCpBy8txuO9lQaQDcA8GlCl55UOWCdiY-Iu_UUCxbFLt7TyggYw2Vx98JXUZOcKSZrUBPuodLX_j7iFCxZ0c021PwFY/s1600/1665313132634825-0.png)
ಮಂಗಳೂರು: ಗ್ರಾಪಂಗಳಲ್ಲಿ ರಾಷ್ಟ್ರಧ್ವಜಸ್ತಂಭ ನಿರ್ಮಾಣ ಕಾರ್ಯವನ್ನು ಒಂದೇ ಕಂಪೆನಿಗೆ ವಹಿಸಿರುವುದು ತಕ್ಷಣ ರದ್ದಾಗಲಿ: ಖಾದರ್ ಆಗ್ರಹ
Sunday, October 9, 2022
ಮಂಗಳೂರು: ರಾಜ್ಯದ ಪ್ರತೀ ಗ್ರಾಪಂನ ಅನುದಾನದಲ್ಲಿ 3.50ಲಕ್ಷ ರೂ. ಧ್ವಜಸ್ತಂಭ ನಿರ್ಮಾಣಕ್ಕೆ ಮೀಸಲಿಟ್ಟು ಒಂದೇ ಕಂಪೆನಿಗೆ ನೀಡಬೇಕೆಂದು ಹೊಸ ನಿಯಮವನ್ನು ಜಾರಿಗೊಳಿಸಲಾಗಿದೆ. ಇದರ ಕಾಮಗಾರಿಯನ್ನು ಒಂದೇ ಕಂಪೆನಿಗೆ ನೀಡಬೇಕೆಂದು ಒತ್ತಾಯಿಸಲಾಗುತ್ತಿದೆ. ಸರಕಾರಕ್ಕೆ ರಾಷ್ಟ್ರಧ್ವಜದಲ್ಲಿ 40% ಕಮಿಷನ್ ಬೇಕೇ ಎಂದು ವಿಧಾನಸಭೆಯ ವಿಪಕ್ಷ ನಾಯಕ ಯು.ಟಿ.ಖಾದರ್ ಆಗ್ರಹಿಸಿದರು.
ನಗರದ ಸರ್ಕ್ಯೂಟ್ ಹೌಸ್ ನಲ್ಲಿ ಮಾತನಾಡಿದ ಅವರು, ರಾಷ್ಟ್ರ ಧ್ವಜಸ್ತಂಭದ ಕಟ್ಟೆಯನ್ನು ನಿರ್ಮಿಸಲು ಇವರು ಬೆಂಗಳೂರಿನಲ್ಲಿದ್ದುಕೊಂಡು ಒಂದೇ ಕಂಪೆನಿಗೆ ನೀಡಿದರೆ, ಸ್ಥಳೀಯ ಕೆಲಸಗಾರರಿಗೆ ಉದ್ಯೋಗಾವಕಾಶ ದೊರೆಯುವುದಾದರೂ ಹೇಗೆ. ಎಲ್ಲವನ್ನೂ ಒಬ್ಬನಿಗೆ ನೀಡುವ ಕಾರಣದಿಂದಲೇ ಬಡವರು ಬಡವರಾಗುತ್ತಿದ್ದಾರೆ. ಶ್ರೀಮಂತರು ಶ್ರೀಮಂತರಾಗುತ್ತಿದ್ದಾರೆ. ಬಡವರ ಆರ್ಥಿಕ ಸಬಲೀಕರಣಕ್ಕೆ ಬಿಜೆಪಿ ಸರಕಾರದಿಂದ ಯಾವ ಯೋಜನೆಯೂ ಇಲ್ಲ. ಆದ್ದರಿಂದ ಈ ಯೋಜನೆಯನ್ನು ಸರಕಾರ ತಕ್ಷಣ ರದ್ದುಗೊಳಿಸಿ ಆಯಾ ಗ್ರಾಪಂ ಸ್ಥಳೀಯ ಮಟ್ಟದಲ್ಲಿ ಕಾಮಗಾರಿ ನಡೆಸುವಂತೆ ಆದೇಶ ಮಾಡಬೇಕೆಂದು ಎಂದು ಆಗ್ರಹಿಸಿದರು.
ರಾಜ್ಯ ಸರ್ಕಾರ 108 ಆ್ಯಂಬುಲೆನ್ಸ್ ಗೆ ಸೂಕ್ತ ಸಮಯದಲ್ಲಿ ಅನುದಾನ ಬಿಡುಗಡೆ ಮಾಡದೆ, ಡ್ರೈವರ್, ನರ್ಸ್ ಗಳಿಗೆ 3ತಿಂಗಳ ವೇತನ ನೀಡದಿರುವುದರಿಂದ ಜನಸಾಮಾನ್ಯರ ತುರ್ತು ಚಿಕಿತ್ಸೆ ಮೇಲೆ ಪರಿಣಾಮ ಬೀರುತ್ತಿದೆ. ಬೈಕ್ ಆ್ಯಂಬುಲೆನ್ಸ್ ಗಳನ್ನು ನಿರ್ವಹಿಸಲಾಗದೆ ಸ್ಥಗಿತಗೊಳಿಸಲಾಗಿದೆ. ಟ್ರಾಫಿಕ್ ಇರುವೆಡೆಗಳಲ್ಲಿ ಆ್ಯಂಬುಲೆನ್ಸ್ ಬರುವವರೆಗೆ ಗಾಯಾಳುಗಳ ಜೀವ ಉಳಿಸುವ ಪ್ರಯತ್ನಕ್ಕೆ ಬೈಕ್ ಆ್ಯಂಬುಲೆನ್ಸ್ ಗಳನ್ನು ಜಾರಿಗೊಳಿಸಲಾಗಿತ್ತು. ಹಿಂದೆ ಇದ್ದ ಯೋಜನೆಯನ್ನು ಇಂದಿನ ಸರಕಾರಕ್ಕೆ ಸರಿಯಾಗಿ ನಿರ್ವಹಿಸಲು ಸಾಧ್ಯವಾಗುತ್ತಿಲ್ಲ ಎಂದು ಯು.ಟಿ.ಖಾದರ್ ಕಿಡಿಕಾರಿದರು.