![Mangalore: ನಿರಂತರ 18 ಗಂಟೆಗಳ ಶ್ರಮದಲ್ಲಿ ಎರಡು ಬೃಹತ್ ಅಶ್ವತ್ಥ ವೃಕ್ಷಗಳ ಸ್ಥಳಾಂತರ,ವೃಕ್ಷಪ್ರೇಮಿ ಜೀತ್ ಮಿಲನ್ ರೋಚ್ ಸಾಹಸ Mangalore: ನಿರಂತರ 18 ಗಂಟೆಗಳ ಶ್ರಮದಲ್ಲಿ ಎರಡು ಬೃಹತ್ ಅಶ್ವತ್ಥ ವೃಕ್ಷಗಳ ಸ್ಥಳಾಂತರ,ವೃಕ್ಷಪ್ರೇಮಿ ಜೀತ್ ಮಿಲನ್ ರೋಚ್ ಸಾಹಸ](https://blogger.googleusercontent.com/img/b/R29vZ2xl/AVvXsEgSBHpnNaxRSBFQVupUEsAYgM5Ghsz7zF7hOSIPP9lFlPj7czx2-KfcnO2vVPeYqjRzLEEgJ8Oz6jOSCcZ6jatgMkDV2HfgZjjJX7Z5LmaXcn8N4cZ1R-BzgjBf7p4LJyqpgqBX12-xgxI/s1600/1668753402658350-0.png)
Mangalore: ನಿರಂತರ 18 ಗಂಟೆಗಳ ಶ್ರಮದಲ್ಲಿ ಎರಡು ಬೃಹತ್ ಅಶ್ವತ್ಥ ವೃಕ್ಷಗಳ ಸ್ಥಳಾಂತರ,ವೃಕ್ಷಪ್ರೇಮಿ ಜೀತ್ ಮಿಲನ್ ರೋಚ್ ಸಾಹಸ
Thursday, November 17, 2022
ಮಂಗಳೂರು: ವೃಕ್ಷಪ್ರೇಮಿ ಜೀತ್ ಮಿಲನ್ ರೋಚ್ ಅವರು ನಗರದ ಸೆಂಟ್ರಲ್ ರೈಲು ನಿಲ್ದಾಣದ ರೈಲ್ವೆ ಫ್ಲ್ಯಾಟ್ ಫಾರಂಗಳಿಗೆ ತೊಂದರೆಯಾಗಿದ್ದ ಎರಡು ಬೃಹತ್ ಅಶ್ವತ್ಥ ವೃಕ್ಷಗಳನ್ನು ನಿರಂತರ 18ಗಂಟೆಗಳ ಅವಿರತ ಶ್ರಮದಿಂದ ಸ್ಥಳಾಂತರ ಮಾಡಿದ್ದಾರೆ.
ನಿನ್ನೆ ಬೆಳಗ್ಗೆ 7ಗಂಟೆಗೆ ಆರಂಭಿಸಿ ತಡರಾತ್ರಿ 1ಗಂಟೆಗೆ ವೃಕ್ಷಗಳ ಸ್ಥಳಾಂತರ ಕಾರ್ಯವನ್ನು ಸಂಪೂರ್ಣಗೊಳಿಸಲಾಗಿದೆ. ಬರೋಬ್ಬರಿ 100 ಟನ್ ಗಳಿಗಿಂತಲೂ ಅಧಿಕ ಭಾರವಿರುವ ಈ ವೃಕ್ಷಗಳನ್ನು ಜಿಸಿಬಿ, ಕ್ರೈನ್ ಗಳನ್ನು ಬಳಸಿ ಚಾಕಚಕ್ಯತೆಯಿಂದ ಭಾರೀ ಸಾಹಸ ಮೆರೆದು ಜೀತ್ ಮಿಲನ್ ಹಾಗೂ ತಂಡ ಸ್ಥಳಾಂತರ ಮಾಡಿದೆ. 60-65 ವರ್ಷಗಳ ಹಿಂದಿನ ಈ ವೃಕ್ಷಗಳು ಆರು ತಿಂಗಳ ಕಾಲದ ನಿರಂತರ ಪೋಷಣೆಯಲ್ಲಿ ಮತ್ತೆ ಚಿಗುರಲಿದೆ.
ರೈಲ್ವೆ ಫ್ಲ್ಯಾಟ್ ಫಾರಂ ಬಳಿಯೇ ಈ ಅಶ್ವತ್ಥ ವೃಕ್ಷಗಳಿದ್ದು, ರೈಲು ಸಂಚಾರಕ್ಕೆ ಯಾವುದೇ ತೊಂದರೆಯಾಗದಂತೆ ಸ್ಥಳಾಂತರ ಮಾಡಬೇಕಿತ್ತು. ಅದೇ ರೀತಿ ಹೈಟೆನ್ಷನ್ ತಂತಿಯೂ ಅಲ್ಲಿಂದ ಹಾದುಹೋಗಿದ್ದು, ಈ ತೊಂದರೆಯನ್ನು ನಿವಾರಿಸಿ ಈ ಮರಗಳ ಸ್ಥಳಾಂತರ ಕಾರ್ಯ ತನಗೆ ಸವಾಲಾಗಿತ್ತು. ಆದರೆ ನಿರಂತರ 18 ಗಂಟೆಗಳ ಶ್ರಮದಿಂದ ಮರಗಳನ್ನು ಯಾವುದೇ ತೊಂದರೆಯಿಲ್ಲದೆ ರೈಲು ನಿಲ್ದಾಣದ ಬಳಿಯೇ ಈ ವೃಕ್ಷಗಳನ್ನು ರೈಲ್ವೇ ಅಧಿಕಾರಿಗಳ ಮುತುವರ್ಜಿಯಿಂದ ಸ್ಥಳಾಂತರ ಮಾಡಲಾಗಿದೆ ಎಂದು ಜೀತ್ ಮಿಲನ್ ರೋಚ್ ಹೇಳಿದರು.
ಮೂರು ವರ್ಷಗಳ ಹಿಂದೆ ಜೀತ್ ಮಿಲನ್ ಅವರು ಇದೇ ರೈಲು ನಿಲ್ದಾಣದ ಬಳಿ ಸ್ಥಳಾಂತರ ಮಾಡಿರುವ ಬೃಹತ್ ವೃಕ್ಷ ಈಗ ಚಿಗುರಿ ಬೆಳೆಯಲಾರಂಭಿಸಿದೆ.
Video