![Mangalore: ಯುವ ವಕೀಲನ ಮೇಲೆ ದೌರ್ಜನ್ಯ ಎಸಗಿರುವ ಪೊಲೀಸರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಮಂಗಳೂರಿನಲ್ಲಿ ವಕೀಲರಿಂದ ಪ್ರತಿಭಟನೆ Mangalore: ಯುವ ವಕೀಲನ ಮೇಲೆ ದೌರ್ಜನ್ಯ ಎಸಗಿರುವ ಪೊಲೀಸರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಮಂಗಳೂರಿನಲ್ಲಿ ವಕೀಲರಿಂದ ಪ್ರತಿಭಟನೆ](https://blogger.googleusercontent.com/img/b/R29vZ2xl/AVvXsEgaeFp422DbERyLP71SDTpEpJxVcO7v_E2sPVl-QQk3LkTyPgWZHakMygsOah1sRB3ocb6-Jl5TjmSWUMB3LC3EJuNMQBz3kaCTG_V4Dg0n5cuzAyjib18yp2cuA6avxcqZcgxSYY4pEe4/s1600/1670404673792593-0.png)
Mangalore: ಯುವ ವಕೀಲನ ಮೇಲೆ ದೌರ್ಜನ್ಯ ಎಸಗಿರುವ ಪೊಲೀಸರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಮಂಗಳೂರಿನಲ್ಲಿ ವಕೀಲರಿಂದ ಪ್ರತಿಭಟನೆ
Wednesday, December 7, 2022
ಮಂಗಳೂರು: ಸಿವಿಲ್ ವ್ಯಾಜ್ಯಕ್ಕೆ ಸಂಬಂಧಿಸಿದಂತೆ ಪ್ರಕರಣವೊಂದರಲ್ಲಿ ಯುವ ವಕೀಲನ ಮೇಲೆ ಪೊಲೀಸ್ ದೌರ್ಜನ್ಯವನ್ನು ಖಂಡಿಸಿ ಮಂಗಳೂರು ಜಿಲ್ಲಾ ನ್ಯಾಯಾಲಯದ ಸಂಕೀರ್ಣದ ಎದುರು ಮಂಗಳೂರು ವಕೀಲರ ಸಂಘ ಪ್ರತಿಭಟನೆ ನಡೆಸಿತು.
ಪ್ರತಿಭಟನೆಯ ಸಂದರ್ಭ ವಕೀಲರು ಪೊಲೀಸ್ ದೌರ್ಜನ್ಯದ ವಿರುದ್ಧ ಘೋಷಣೆ ಕೂಗಿದರು. ನ್ಯಾಯಾಲಯದಲ್ಲಿ ವಿಚಾರಣೆಯ ಹಂತದಲ್ಲಿರುವ ಸಿವಿಲ್ ವ್ಯಾಜ್ಯವೊಂದರಲ್ಲಿ ಪ್ರತಿವಾದಿ ವಿರುದ್ಧ ಪ್ರತಿಬಂಧಕಾಜ್ಞೆ ಇದ್ದರೂ ಪೊಲೀಸರು ಪುಂಜಾಲಕಟ್ಟೆ ಠಾಣಾ ವ್ಯಾಪ್ತಿಯ ಯುವ ವಕೀಲ ಕುಲದೀಪ್ ಮನೆಗೆ ರಾತ್ರೋರಾತ್ರಿ ಅಕ್ರಮವಾಗಿ ಪ್ರವೇಶ ಮಾಡಿ ಹಲ್ಲೆ ನಡೆಸಿ ಠಾಣೆಗೆ ಎಳೆದೊಯ್ದಿದ್ದಾರೆ. ಅಲ್ಲಿ ಅವರನ್ನು ವಕೀಲರೆಂದು ನೋಡದೆ ಬಟ್ಟೆಯನ್ನೂ ಹಾಕಿಕೊಳ್ಳಲು ಅವಕಾಶ ನೀಡದೆ ಠಾಣೆಗೆ ಕರೆದೊಯ್ಯಲಾಗಿದೆ. ಅಲ್ಲದೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಘಟನೆ ನಡೆದಿರುವ ಸಮಯದ ವೀಡಿಯೋವನ್ನು ಮನೆಯಲ್ಲಿದ್ದವರು ವೀಡಿಯೋ ಚಿತ್ರೀಕರಿಸಿದ್ದರು. ಆ ಬಳಿಕ ಠಾಣೆಗೆ ಮನೆಯವರನ್ನು ಕರೆಸಿ ಆ ವೀಡಿಯೋಗಳನ್ನು ಡಿಲಿಟ್ ಮಾಡಿದ್ದಾರೆ ಎಂದು ಪ್ರತಿಭಟನೆ ವೇಳೆ ವಕೀಲರು ಆರೋಪಿದ್ದಾರೆ.
ಕೃತ್ಯ ನಡೆದು ಮೂರು ದಿನಗಳಾಗಿದ್ದು 24 ಗಂಟೆಗಳೊಳಗೆ ಅಮಾನವೀಯವಾಗಿ ವರ್ತಿಸಿರುವ ಪುಂಜಾಲಕಟ್ಟೆ ಠಾಣಾ ಪೊಲೀಸ್ ಇನ್ಸ್ಪೆಕ್ಟರ್ ಹಾಗೂ ಲ್ವರು ಸಿಬ್ಬಂದಿಯನ್ನು ತಕ್ಷಣ ಸೇವೆಯಿಂದ ಅಮಾನತುಗೊಳಿಸಿ ಅವರ ಮೇಲೆ ಕ್ರಮ ಕೈಗೊಳ್ಳಬೇಕೆಂದು ವಕೀಲರು ದ.ಕ.ಜಿಲ್ಲಾ ಎಸ್ಪಿಯವರನ್ನು ವಕೀಲರು ಆಗ್ರಹಿಸಿದರು. ಇಲ್ಲದಿದ್ದಲ್ಲಿ ಕಾನೂನು ರೀತಿಯ ಹೋರಾಟ ಮಾಡಲಾಗುತ್ತದೆ ಎಂದು ಪ್ರತಿಭಟನಾಕಾರರು ಎಚ್ಚರಿಕೆ ನೀಡಿದ್ದಾರೆ.