![ಮಂಗಳೂರು: ಬಿಜೆಪಿ ಸರ್ಕಾರಕ್ಕೆ ಉಚಿತಗಳ ಮೇಲೆ ನಂಬಿಕೆಯಿಲ್ಲ ಖಚಿತದ ಮೇಲೆ ನಂಬಿಕೆ ಮಂಗಳೂರು: ಬಿಜೆಪಿ ಸರ್ಕಾರಕ್ಕೆ ಉಚಿತಗಳ ಮೇಲೆ ನಂಬಿಕೆಯಿಲ್ಲ ಖಚಿತದ ಮೇಲೆ ನಂಬಿಕೆ](https://blogger.googleusercontent.com/img/b/R29vZ2xl/AVvXsEiFmvoomBKWYIy5qgBmNLa8T9gezLnYNkugvP4kEa-yHBW8RbiduMvb9YrbYV7SDRUjS4WQkXCmhKelF6Bj5ms42PNmMqYLrMv7MrTKzwQ4v18t4OMy_83lnr92eBN8znLuZB32OWmOPU8/s1600/1674713971405444-0.png)
ಮಂಗಳೂರು: ಬಿಜೆಪಿ ಸರ್ಕಾರಕ್ಕೆ ಉಚಿತಗಳ ಮೇಲೆ ನಂಬಿಕೆಯಿಲ್ಲ ಖಚಿತದ ಮೇಲೆ ನಂಬಿಕೆ
Wednesday, January 25, 2023
ಮಂಗಳೂರು: ಬಿಜೆಪಿ ಸರಕಾರಕ್ಕೆ ಘೋಷಿಸಿದ ಯೋಜನೆಗಳನ್ನು ಅನುಷ್ಠಾನಕ್ಕೆ ತರುವ ಬದ್ಧತೆಯಿದೆ. ಆದ್ದರಿಂದ ನಮಗೆ ಉಚಿತಗಳ ಮೇಲೆ ನಂಬಿಕೆಯಿಲ್ಲ. ಖಚಿತಗಳ ಮೇಲೆ ನಂಬಿಕೆಯಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ, ದ.ಕ.ಜಿಲ್ಲಾ ಉಸ್ತುವಾರಿ ಸಚಿವ ಸುನಿಲ್ ಕುಮಾರ್ ಹೇಳಿದರು.
ದ.ಕ.ಜಿಲ್ಲಾಡಳಿತದ ವತಿಯಿಂದ ನಗರದ ನೆಹರೂ ಮೈದಾನದಲ್ಲಿ ಆಯೋಜಿಸಲಾಗಿರುವ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಆದ್ದರಿಂದ ಯೋಜನೆಗಳನ್ನು ಹಂತಹಂತವಾಗಿ ಬಿಜೆಪಿ ಸರಕಾರ ಗ್ರಾಪಂನಿಂದ ಹೆದ್ದಾರಿಗಳವರೆಗೆ ಅನುಷ್ಠಾನಗೊಳಿಸುತ್ತಿದೆ. ದ.ಕ.ಜಿಲ್ಲೆಯಲ್ಲಿ 7 ಹೊಸಗ್ರಾಮ ಕುಡಿಯುವ ನೀರಿಗೆ 1040 ಕೋಟಿ ರೂ. ವೆಚ್ಚದಲ್ಲಿ ಯೋಜನೆ ರೂಪಿಸಲಾಗಿದೆ. ಒಣಕಸವನ್ನು ವೈಜ್ಞಾನಿಕ ರೀತಿಯಲ್ಲಿ ನಿರ್ವಹಣೆ ಮಾಡಲು ಸ್ವಚ್ಛ ಭಾರತ ಮಿಷನ್ ನಡಿ 3 ಕೋಟಿ ರೂ. ವೆಚ್ಚದಲ್ಲಿ ಎಂಆರ್ ಎಫ್ ಘಟಕವನ್ನು ನಿರ್ಮಿಸಲಾಗಿದ್ದು, ಇಂದು ಅದರ ಉದ್ಘಾಟನೆ ನಡೆಯಲಿದೆ ಎಂದರು.
ನೂತನವಾಗಿ ಸ್ಥಾಪನೆಗೊಂಡ ಮೂಡುಬಿದಿರೆ ತಾಲೂಕಿಗೆ 5.35 ಕೋಟಿ ರೂ. ಹಾಗೂ ಕಡಬ ತಾಲೂಕಿಗೆ 4.50 ಕೋಟಿ ರೂ. ಅನುದಾನದಡಿ ನೂತನ ಕಟ್ಟಡ ನಿರ್ಮಿಸಲಾಗಿದೆ. ಆರೋಗ್ಯ ಸೇವೆ ಮನೆ ಬಾಗಿಲಿಗೆ ದೊರಕಬೇಕೆನ್ನುವ ದೃಷ್ಟಿಯಿಂದ ದ.ಕ.ಜಿಲ್ಲೆಯಲ್ಲಿ 12 ನಮ್ಮ ಕ್ಲಿನಿಕ್ ತೆರೆಯಲಾಗಿದೆ. ಡೀಮ್ಡ್ ಫಾರೆಸ್ಟ್ ಗೆ ಸಂಬಂಧಿಸಿದಂತೆ ಹಲವು ವರ್ಷಗಳ ಸಮಸ್ಯೆ ಬಗೆಹರಿಸಲು ತಜ್ಞ ಸಮಿತಿಯ ವರದಿ ಹಿನ್ನೆಲೆ ದ.ಕ.ಜಿಲ್ಲೆಯಲ್ಲಿ 34,850 ಹೆಕ್ಟೇರ್ ಪ್ರದೇಶವನ್ನು ಡೀಮ್ಡ್ ಫಾರೆಸ್ಟ್ ಪಟ್ಟಿಯಿಂದ ಕೈಬಿಡಲು ಕ್ರಮ ವಹಿಸಲಾಗಿದೆ ಎಂದು ಸಚಿವ ಸುನಿಲ್ ಕುಮಾರ್ ಹೇಳಿದರು.