ಮಂಗಳೂರು: 'ಪ್ರೇಮಿಗಳ ದಿನ' ಆಚರಣೆಗೆ ಹಿಂದೂ ಜನಜಾಗೃತಿ ಸಮಿತಿ ವಿರೋಧ
Friday, February 10, 2023
ಮಂಗಳೂರು: ಇನ್ನೇನು 'ಪ್ರೇಮಿಗಳ ದಿನಾಚರಣೆ' ಹತ್ತಿರ ಬರುತ್ತಿದೆ. ಎಂದಿನಂತೆ ಈ ಬಾರಿಯೂ ಹಿಂದೂ ಜನಜಾಗೃತಿ ಸಮಿತಿ ಪ್ರೇಮಿಗಳ ದಿನಾಚರಣೆಗೆ ವಿರೋಧ ವ್ಯಕ್ತಪಡಿಸಿದ್ದು, ಕಡಿವಾಣಕ್ಕೆ ಪೊಲೀಸ್ ಕಮಿಷನರ್ ಗೆ ಮನವಿ ಮಾಡಿದೆ.
ಹಿಂದೂ ಜನಜಾಗೃತಿ ಸಮಿತಿಯ ಸದಸ್ಯೆ ಭವ್ಯಾ ಗೌಡ ಮಾತನಾಡಿ, ಫೆ.14ರಂದು ಪ್ರೇಮಿಗಳ ದಿನಾಚರಣೆಯ ಹೆಸರಿನಲ್ಲಿ ಪಾಶ್ಚಾತ್ಯ ಸಂಸ್ಕೃತಿಯ ಅನುಕರಣೆ ಮಾಡುತ್ತ ಯುವ ಜನತೆ ಅನೈತಿಕತೆ ಹಾಗೂ ಸ್ವೇಚ್ಛಾಚಾರದಲ್ಲಿ ತೊಡಗುತ್ತಿದೆ. ಪ್ರೇಮಿಗಳ ದಿನದ ನೆಪದಲ್ಲಿ ಯುವತಿಯರಿಗೆ ಲೈಂಗಿಕ ಕಿರುಕುಳ ನೀಡುತ್ತಿರುವುದು ಖೇದಕರ. ಈ ದಿನ ಪಾರ್ಟಿ ನೆಪದಲ್ಲಿ ಯುವಕ - ಯುವತಿಯರು ಮದ್ಯಪಾನ, ಧೂಮಪಾನ, ಡ್ರಗ್ಸ್ ಮಾಫಿಯಾಗಳಿಗೆ ಬಲಿಯಾಗುತ್ತಿದ್ದಾರೆ. ಸಮೀಕ್ಷೆ ಪ್ರಕಾರ ಈ ದಿನದಂದು ಗರ್ಭ ನಿರೋಧಕ ಮಾತ್ರೆ ಸರಬರಾಜು ಹೆಚ್ಚಾಗುತ್ತಿದೆ ಎಂದು ಆರೋಪಿಸಿದ್ದಾರೆ.
ಆದ್ದರಿಂದ ಪ್ರೇಮಿಗಳ ದಿನದ ವಿರುದ್ಧ ಹಿಂದೂ ಜನಜಾಗೃತಿ ಸಮಿತಿಯು ಜನಜಾಗೃತಿ ಅಭಿಯಾನ ನಡೆಸಲು ಉದ್ದೇಶಿಸಿದೆ. ಹಾಗಾಗಿ ಪ್ರೇಮಿಗಳ ದಿನದಂದು ಇಂತಹ ಘಟನೆಗಳಿಗೆ ಕಡಿವಾಣ ಹಾಕಬೇಕು. ಇದಕ್ಕಾಗಿ ವಿಶೇಷ ಪೊಲೀಸ್ ದಳ ನಿರ್ಮಿಸಬೇಕು. 2019 ಫೆ.14ರಂದು ಪುಲ್ವಾಮ ದಾಳಿ ನಡೆಯಿತು. ಇದರಲ್ಲಿ ದೇಶದ 40ಯೋಧರು ಹುತಾತ್ಮರಾದರು. ಆದ್ದರಿಂದ ಯುವ ಜನತೆಯಲ್ಲಿ ರಾಷ್ಟ್ರಜಾಗೃತಿ ಮೂಡಿಸಲು ಆ ದಿನವನ್ನು ದುಃಖದ ದಿನವಾಗಿ ಮಾಡಬೇಕು. ಇಂತಹ ದಿನಗಳನ್ನು ಆಚರಿಸುವ ಬದಲು ಪ್ರೇಮಿಗಳ ದಿನಾಚರಣೆ ಮಾಡುವುದು ಅತ್ಯಂತ ಖಂಡನೀಯ ಎಂದು ಭವ್ಯಾ ಗೌಡ ಹೇಳಿದರು.
ಪ್ರೇಮಿಗಳ ದಿನಾಚರಣೆ ಬಗ್ಗೆ ಪ್ರತಿಕ್ರಿಯೆ ನೀಡಿದ ಎಡಿಜಿಪಿ ಅಲೋಕ್ ಕುಮಾರ್, ಕಾನೂನಿನಲ್ಲಿ ಪ್ರೇಮಿಗಖ ದಿನಾಚರಣೆ ಮಾಡಬಾರದೆಂದು ಏನೂ ಇಲ್ಲ. ಪೊಲೀಸರು ಕಾನೂನಿನ ಅಡಿಯಲ್ಲಿ ಯಾವ ರೀತಿ ವ್ಯವಸ್ಥೆ ಮಾಡಬೇಕೋ ಅದನ್ನು ಮಾಡುತ್ತಾರೆ. ಕಾನೂನು ಬಿಟ್ಟು ಏನಾದರೂ ಮಾಡಿದ್ದಲ್ಲಿ ಈ ಬಗ್ಗೆ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಹೇಳಿದರು.
Byte - ಹಿಂದೂ ಜನಜಾಗೃತಿ ಸಮಿತಿಯ ಸದಸ್ಯೆ ಭವ್ಯಾ ಗೌಡ
Byte - ಎಡಿಜಿಪಿ - ಅಲೋಕ್ ಕುಮಾರ್