![ಮಂಗಳೂರು: ಆದಾಯಕ್ಕಿಂತ ಹೆಚ್ಚಿನ ಗಳಿಕೆ - ನ.ಪಂ ಜೂನಿಯರ್ ಇಂಜಿನಿಯರ್ ಗೆ 4 ವರ್ಷ ಸಾದಾ ಸಜೆ, 26.50 ಲಕ್ಷ ರೂ. ದಂಡ. ಮಂಗಳೂರು: ಆದಾಯಕ್ಕಿಂತ ಹೆಚ್ಚಿನ ಗಳಿಕೆ - ನ.ಪಂ ಜೂನಿಯರ್ ಇಂಜಿನಿಯರ್ ಗೆ 4 ವರ್ಷ ಸಾದಾ ಸಜೆ, 26.50 ಲಕ್ಷ ರೂ. ದಂಡ.](https://blogger.googleusercontent.com/img/b/R29vZ2xl/AVvXsEiiIbxhX-KQx8K8auNxi_wtLHDdfbWye00Y-Ff6rHnT4absO9tBW7SIZ8xg4RbccgDeBf7UyNwHn_dWttTjclxDDoyu3VbPrsV7FEXj-6V_CabBGzH0JjYG6xAI6EMgt0Q24CxCfDNJFxI/s1600/1678984324061787-0.png)
ಮಂಗಳೂರು: ಆದಾಯಕ್ಕಿಂತ ಹೆಚ್ಚಿನ ಗಳಿಕೆ - ನ.ಪಂ ಜೂನಿಯರ್ ಇಂಜಿನಿಯರ್ ಗೆ 4 ವರ್ಷ ಸಾದಾ ಸಜೆ, 26.50 ಲಕ್ಷ ರೂ. ದಂಡ.
Thursday, March 16, 2023
ಮಂಗಳೂರು: ಆದಾಯಕ್ಕಿಂತ ಹೆಚ್ಚಿನ ಪ್ರಮಾಣದ ಆಸ್ತಿ ಹೊಂದಿರುವ ಮುಲ್ಕಿ ನಗರ ಪಂಚಾಯತ್ ಜೂನಿಯರ್ ಇಂಜಿನಿಯರ್ ಮೇಲಿನ ಆರೋಪ ಸಾಬೀತಾಗಿರುವ ಹಿನ್ನೆಲೆಯಲ್ಲಿ ಮಂಗಳೂರಿನ 3ನೇ ಹೆಚ್ಚುವರಿ ಜಿಲ್ಲಾ ಸತ್ತ ಮತ್ತು ವಿಶೇಷ ನ್ಯಾಯಾಲಯವು ಅಪರಾಧಿಗೆ 4ವರ್ಷ ಸಾದಾ ಸಜೆ ಹಾಗೂ 26,50,000 ರೂ. ದಂಡ ವಿಧಿಸಿ ಆದೇಶಿಸಿದೆ.
ಮುಲ್ಕಿ ನಗರ ಪಂಚಾಯತ್ ಜೂನಿಯರ್ ಇಂಜಿನಿಯರ್ ಪದ್ಮನಾಭ.ಎನ್.ಕೆ. ಶಿಕ್ಷೆಗೊಳಗಾದ ಅಪರಾಧಿ. ಆದಾಯಕ್ಕಿಂತ ಹೆಚ್ಚಿನ ಆಸ್ತಿಯನ್ನು ಹೊಂದಿರುವ ಬಗ್ಗೆ ಖಚಿತ ಮಾಹಿತಿಯ ಮೇರೆಗೆ ಕರ್ನಾಟಕ ಲೋಕಾಯುಕ್ತ ಮಂಗಳೂರು ಠಾಣಾ ಪೊಲೀಸರು 2015ರ ಫೆಬ್ರವರಿಗೆ ದಾಳಿ ನಡೆಸಿದ್ದರು. ಈ ಬಗ್ಗೆ ಪ್ರಕರಣ ದಾಖಲಾಗಿತ್ತು.
ಕರ್ನಾಟಕ ಲೋಕಾಯುಕ್ತ ಮಂಗಳೂರು ಠಾಣಾ ಪೊಲೀಸ್ ನಿರೀಕ್ಷಕ ನವೀನ್ ಚಂದ್ರ ಜೋಗಿ ಈ ಪ್ರಕರಣದ ತನಿಖೆ ಪೂರ್ಣಗೊಳಿಸಿದ್ದರು. ಭಾರತಿ ಜಿ.ಯವರು ಆರೋಪಿಯ ವಿರುದ್ಧ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು. ಪ್ರಕರಣದ ವಿಚಾರಣೆ ಕೈಗೆತ್ತಿಕೊಂಡ ಮಂಗಳೂರಿನ 3ನೇ ಹೆಚ್ಚುವರಿ ಜಿಲ್ಲಾ ಸತ್ರ ನ್ಯಾಯಾಲಯದ ನ್ಯಾಯಾಧೀಶೆ ಬಿ.ಬಿ. ಜಕಾತಿಯವರು ವಿಚಾರಣೆ ನಡೆಸಿ ಪದ್ಮನಾಭ ಎನ್.ಕೆ. ಮೇಲಿನ ಆರೋಪ ಸಾಬೀತಾಗಿದೆ ಎಂದು ಆದೇಶಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಆತನಿಗೆ 4 ವರ್ಷ ಸಾದಾ ಸಜೆ ಹಾಗೂ 26,50,000 ರೂ. ದಂಡ ವಿಧಿಸಿದ್ದಾರೆ. ದಂಡ ತೆರಲು ವಿಫಲನಾದಲ್ಲಿ ಮತ್ತೆ ಆರು ತಿಂಗಳ ಕಾಲ ಸಾದಾ ಸಜೆ ವಿಧಿಸಿ ಅಂತಿಮ ತೀರ್ಪು ಪ್ರಕಟಿಸಿದ್ದಾರೆ.
ಸರ್ಕಾರದ ಪರವಾಗಿ ಕರ್ನಾಟಕ ಲೋಕಾಯುಕ್ತ ಮಂಗಳೂರಿನ ವಿಶೇಷ ಸಾರ್ವಜನಿಕ ಅಭಿಯೋಜಕ ರವೀಂದ್ರ ಮುನ್ನಿಪಾಡಿ ವಾದ ಮಂಡಿಸಿರುತ್ತಾರೆ.