ಶ್ರೀನಗರ :ಮನೆ ತೊರೆದು 22 ವರ್ಷಗಳ ಬಳಿಕ ಕುಟುಂಬ ಸೇರಿದ ವ್ಯಕ್ತಿ! ಭಾವನಾತ್ಮಕ ಪುನರ್ಮಿಲನ...!!
ಶ್ರೀನಗರ: 22 ವರ್ಷಗಳ ಹಿಂದೆ ಮನೆ ತೊರೆದಿದ್ದ ಮಧ್ಯಪ್ರದೇಶದ ವ್ಯಕ್ತಿಯೊಬ್ಬರು ಶ್ರೀನಗರದಲ್ಲಿ ತನ್ನ ಕುಟುಂಬದೊಂದಿಗೆ ಪುನರ್ಮಿಲನವಾಗಿದ್ದಾರೆ.
ದರ್ಜಿ ಕೆಲಸ ಮಾಡುತ್ತಿದ್ದ ದಿನೇಶ್ (ಹೆಸರು ಬದಲಿಸಲಾಗಿದೆ) 2004ರಲ್ಲಿ ರಾಜ್ಗಢ ಜಿಲ್ಲೆಯ ಬುಮಿರಾ ಗ್ರಾಮದಿಂದ ಕಣ್ಮರೆಯಾಗಿದ್ದರು. ಎರಡು ವರ್ಷದ ಮಗ ಸೇರಿದಂತೆ ಕುಟುಂಬವನ್ನು ಬಿಟ್ಟು ಹೋಗಿದ್ದರು. ಕುಟುಂಬಸ್ಥರು ವರ್ಷಗಳ ಕಾಲ ಹುಡುಕಾಟ ನಡೆಸಿದರೂ ಪತ್ತೆಯಾಗಿರಲಿಲ್ಲ.
"ನಾವು ದಿನೇಶ್ಗಾಗಿ ವರ್ಷಗಳ ಕಾಲ ದೊಡ್ಡ ನಗರಗಳಲ್ಲಿ ಹುಡುಕಿದೆವು. ಆದರೆ ಯಾವುದೇ ಕುರುಹು ಸಿಗಲಿಲ್ಲ. ಅನಂತರ ಭರವಸೆ ಕಳೆದುಕೊಂಡೆವು. ಆದರೆ, ದಿನೇಶ್ ಜೀವಂತವಾಗಿದ್ದಾರೆ ಎಂದು ಕೇಳಿದಾಗ ತುಂಬಾ ಸಂತೋಷವಾಯ್ತು" ಎಂದು ಸೋದರ ಮಾವ ಈಟಿವಿ ಭಾರತಕ್ಕೆ ತಿಳಿಸಿದರು.
ದಿನೇಶ್ ಉತ್ತರ ಕಾಶ್ಮೀರದ ಕುಪ್ವಾರಾ ಜಿಲ್ಲೆಯಲ್ಲಿ ಅಲೆದಾಡಿಕೊಂಡಿದ್ದರು. ಅಲ್ಲಿ ವರ್ಷಗಳಿಂದ ವಾಸಿಸುತ್ತಿದ್ದರು. ಸ್ಥಳೀಯರು ಮತ್ತು ಪೊಲೀಸರು ಆಹಾರ, ಆಶ್ರಯ ಒದಗಿಸುತ್ತಿದ್ದರು. ದಿನೇಶ್ ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿರುವುದನ್ನು ಕಂಡ ಕುಪ್ವಾರಾ ಪೊಲೀಸರು, ಕಳೆದ ವರ್ಷ ಸೆಪ್ಟೆಂಬರ್ನಲ್ಲಿ ಶ್ರೀನಗರದಲ್ಲಿರುವ ಮಾನಸಿಕ ಆರೋಗ್ಯ ಮತ್ತು ನರವಿಜ್ಞಾನ ಸಂಸ್ಥೆಗೆ (IMHANS) ದಾಖಲಿಸಲು ನೆರವಾಗಿದ್ದರು.
"ದಿನೇಶ್ ಇಮ್ಹಾನ್ಸ್ಗೆ ಬಂದಾಗ ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದರು ಮತ್ತು ಅವರು ಪ್ರತಿಕ್ರಿಯಿಸುತ್ತಿರಲಿಲ್ಲ. ಚಿಕಿತ್ಸೆಯ ನಂತರ ಸುಧಾರಿಸಿದರು ಮತ್ತು ಅವರ ಹೆಸರು, ಮಗನ ಹೆಸರು ಮತ್ತು ಮನೆಯ ವಿಳಾಸ ಹಂಚಿಕೊಳ್ಳಲು ಪ್ರಾರಂಭಿಸಿದರು. ಇದು ಅವರ ಕುಟುಂಬವನ್ನು ಹುಡುಕಲು ನಮಗೆ ಸಹಾಯ ಮಾಡಿತು" ಎಂದು ಇಮ್ಹಾನ್ಸ್ನ ಮನೋವೈದ್ಯೆ ಡಾ.ಮಾರಿಯಾ ಜಹೂರ್ ಹೇಳಿದರು.
ಸಾಮಾಜಿಕ ಕಾರ್ಯಕರ್ತ ಸಜ್ಜದ್-ಉರ್-ರೆಹಮಾನ್ ಭಟ್ ಅವರು ಮಧ್ಯಪ್ರದೇಶ ಪೊಲೀಸರು ಮತ್ತು ಗ್ರಾಮಸ್ಥರನ್ನು ಸಂಪರ್ಕಿಸಿ ದಿನೇಶ್ ಬಗ್ಗೆ ಮಾಹಿತಿ ನೀಡಿದ್ದಾರೆ. ಕುಟುಂಬಸ್ಥರು ಮಾಹಿತಿ ತಿಳಿದ ತಕ್ಷಣ, ಶ್ರೀನಗರಕ್ಕೆ ಬಂದಿದ್ದಾರೆ.
ಕಾನೂನು ಪ್ರಕ್ರಿಯೆ ಪೂರ್ಣಗೊಂಡ ನಂತರ ದಿನೇಶ್ ಅವರನ್ನು ಗ್ರಾಮದ ಸರಪಂಚ್ರ ಸಮ್ಮುಖದಲ್ಲಿ ಸೋದರ ಮಾವ ಮತ್ತು ಸಂಬಂಧಿಕರಿಗೆ ಒಪ್ಪಿಸಿ ಮಧ್ಯಪ್ರದೇಶದ ಮನೆಗೆ ಕಳುಹಿಸಿಕೊಡಲಾಯಿತು.
ಮತ್ತೆ ಕುಟುಂಬ ಸೇರಿದ್ದಕ್ಕೆ ಸಂತಸ: ಮನೆ ತೊರೆದ ನಂತರ ನಾನು ಜೋಧ್ಪುರ, ಶ್ರೀನಗರ ಮತ್ತು ಕುಪ್ವಾರಾದಲ್ಲಿ ವಾಸಿಸುತ್ತಿದ್ದೆ. ಕುಪ್ವಾರಾ ಪೊಲೀಸರು ಒಂದು ವರ್ಷ ನನಗೆ ಸಹಾಯ ಮಾಡಿದರು. ದಶಕಗಳ ಅಲೆದಾಟದ ನಂತರ, ಇಂದು ಕುಟುಂಬ ಮತ್ತು ಒಂದು ಮಗುವಿನ ತಂದೆಯಾಗಿರುವ ಮಗನನ್ನು ಸೇರಿದಕ್ಕೆ ತುಂಬಾ ಸಂತೋಷವಾಗುತ್ತಿದೆ ಎಂದು ದಿನೇಶ್ ಸಂತಸ ವ್ಯಕ್ತಪಡಿಸಿದರು.