ಪಂಜಾಬ್ :3 ದಿನಗಳ ಹೆಣ್ಣು ಮಗು 2 ಲಕ್ಷ ರೂ.ಗೆ ಮಾರಾಟ!: ತಾಯಿ ಸೇರಿ ಐವರು ಆರೋಪಿಗಳ ಬಂಧನ...!!!
ಪಂಜಾಬ್: ನವಜಾತ ಶಿಶು ಮಾರಾಟ ಮತ್ತು ಖರೀದಿಗೆ ಬಂದಿದ್ದ ಪ್ರಕರಣದಲ್ಲಿ ಐವರು ಆರೋಪಿಗಳನ್ನು ಬಂಧಿಸುವಲ್ಲಿ ಜಿಲ್ಲಾ ಪೊಲೀಸರು ಯಶಸ್ವಿಯಾಗಿದ್ದಾರೆ. ಪ್ರಕರಣಕ್ಕೆ ಸಂಬಂಧಪಟ್ಟಂತೆ ಒಟ್ಟು ಎಂಟು ಜನರ ವಿರುದ್ಧ ದೂರು ದಾಖಲಾಗಿದ್ದು, ಈ ಪೈಕಿ ಮಗುವಿನ ತಾಯಿ, ಆಶಾ ಕಾರ್ಯಕರ್ತೆ ಮತ್ತು ಮಗು ಖರೀದಿಸಿದ ಮಹಿಳೆ ಸೇರಿದಂತೆ ಐವರನ್ನು ಬಂಧಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಲುಧಿಯಾನದ ಶೇರ್ಪುರ್ ಕಲಾನ್ ನಿವಾಸಿಯಾದ ವಲಸೆ ಮಹಿಳೆಯೊಬ್ಬರು (ಮೂಲತಃ ಉತ್ತರ ಪ್ರದೇಶದವರು) ಫೆಬ್ರವರಿ 13, 2026 ರಂದು ಲುಧಿಯಾನದ ಅರೋರಾ ನರ್ಸಿಂಗ್ ಆಸ್ಪತ್ರೆಯಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಆದರೆ, ಮಗುವನ್ನು ತಮ್ಮ ಬಳಿ ಇಟ್ಟುಕೊಳ್ಳಲು ಬಯಸದ ಮಹಿಳೆ, ಆಸ್ಪತ್ರೆಯಲ್ಲಿ ಕೆಲಸ ಮಾಡುವ ಆಶಾ ಎಂಬ ಮಹಿಳೆಯನ್ನು ಸಂಪರ್ಕಿಸಿ, ನನಗೆ ಈ ಮಗು ಬೇಡ, ಮಾರುವಂತೆ ಕೇಳಿಕೊಂಡಿದ್ದಾಳೆ. ಆಶಾಳು ನೇರವಾಗಿ ಡಾ. ಮನ್ಮೀತ್ ಕೌರ್ ಅವರ ಮುಂದೆ ಈ ವಿಷಯ ಪ್ರಸ್ತಾಪಿಸಿದ್ದಾಳೆ. ಡಾ. ಕೌರ್ ತಮ್ಮ ತಾಯಿಯನ್ನು ಸಂಪರ್ಕಿಸಿ ಕೊನೆಗೆ ಮಕ್ಕಳಿಲ್ಲದ ಕೌರ್ ಎಂಬ ಮಹಿಳೆಗೆ ಮಾರಾಟ ಮಾಡಲು ಒಪ್ಪಿಕೊಂಡಿದ್ದಾರೆ. 2 ಲಕ್ಷ 10 ಸಾವಿರ ರೂ.ಗಳಿಗೆ ಒಪ್ಪಂದ ಕೂಡ ಮಾಡಿಕೊಂಡಿದ್ದಾರೆ. ಮಗುವನ್ನು ಖರೀದಿಸಿದ ಮಹಿಳೆ ಆನ್ಲೈನ್ನಲ್ಲಿ ಹಣ ಸಹ ವರ್ಗಾಯಿಸಿದ್ದರು. ಈ ವಿಚಾರ ಗೊತ್ತಾಗಿ ಪ್ರಕರಣದ ತನಿಖೆಗೆ ಮುಂದಾಗಲಾಗಿತ್ತು. ಒಟ್ಟು 8 ಆರೋಪಿಗಳ ವಿರುದ್ಧ ದೂರು ದಾಖಲಿಸಲಾಗಿದ್ದು, 5 ಜನರನ್ನು ಬಂಧಿಸಲಾಗಿದೆ ಮತ್ತು 3 ಜನರ ಹುಡುಕಾಟ ಮುಂದುವರೆದಿದೆ.
ಈ ಕುರಿತು ಎಡಿಸಿಪಿ ಸಮೀರ್ ವರ್ಮಾ ಇಂದು ಪತ್ರಿಕಾಗೋಷ್ಠಿ ನಡೆಸಿ ಕೆಲವು ಮಾಹಿತಿಯನ್ನು ಬಹಿರಂಗಗೊಳಿಸಿದ್ದಾರೆ. ''ಫೆಬ್ರವರಿ 13 ರಂದು ಜನಿಸಿದ ನವಜಾತ ಹೆಣ್ಣು ಮಗುವನ್ನು ಮಾರಾಟ ಮಾಡಿದ ಪ್ರಕರಣದಲ್ಲಿ ಐದು ಆರೋಪಿಗಳನ್ನು ಬಂಧಿಸಲಾಗಿದೆ. ನವಜಾತ ಶಿಶುವನ್ನು ಮಾರಾಟ ಮಾಡಲಾಗುತ್ತಿದೆ ಎಂಬ ಮಾಹಿತಿ ಬಂದಿತ್ತು. ಅದನ್ನು 2 ಲಕ್ಷ 10 ಸಾವಿರ ರೂ.ಗೆ ಮಾರಾಟ ಕೂಡ ಮಾಡಲಾಗಿತ್ತು. ಈಗಾಗಲೇ 4 ಹೆಣ್ಣು ಮಕ್ಕಳಿರುವ ಮಗುವಿನ ತಾಯಿ 5ನೇ ಹೆಣ್ಣು ಮಗುವನ್ನು ತಮಗೆ ಸಾಕಲು ಆಗದೆಂದು ಆಸ್ಪತ್ರೆಯಲ್ಲಿ ಕೆಲಸ ಮಾಡುವ ಆಶಾ ಎಂಬ ಮಹಿಳೆ ಬಳಿ ಹೇಳಿಕೊಂಡಿದ್ದಳು. ಹಣಕಾಸಿನ ಒಪ್ಪಂದ ಕೂಡ ಮಾಡಿಕೊಂಡಿದ್ದರು. ಖರೀದಿಸಲು ಬಂದಾಗ ಸ್ಥಳದಲ್ಲೇ ಕೆಲವರನ್ನು ಬಂಧಿಸಲಾಗಿದೆ. ಉಳಿದವರ ಬಂಧನಕ್ಕೆ ಬಲೆ ಬೀಸಲಾಗಿದೆ. ಮಗುವಿನ ತಂದೆಯ ಪಾತ್ರದ ಬಗ್ಗೆಯೂ ತನಿಖೆ ನಡೆಸಿ, ತನಿಖೆಯ ಪ್ರಕಾರ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಮಾನವ ಕಳ್ಳಸಾಗಣೆ ಗಂಭೀರ ವಿಭಾಗಗಳ ಅಡಿ ಪ್ರಕರಣ ದಾಖಲಾಗಿದೆ ಎಂದು ಎಡಿಸಿಪಿ ವರ್ಮಾ ಹೇಳಿದ್ದಾರೆ.
ಈ ಮಕ್ಕಳನ್ನು ಯಾರಿಗೆ ಮಾರಾಟ ಮಾಡಲಾಯಿತು? ಮುಂದೆ ಮಕ್ಕಳನ್ನು ಎಲ್ಲಿಗೆ ಕರೆದೊಯ್ಯಲಾಯಿತು? ಎಂಬುದರ ಕುರಿತು ನಾವು ಅವರ ಇತರ ಸಂಪರ್ಕಗಳ ಬಗ್ಗೆಯೂ ತನಿಖೆ ನಡೆಸುತ್ತಿದ್ದೇವೆ. ಇದು ತನಿಖೆಯ ಭಾಗವಾಗಿದ್ದರಿಂದ ಹೆಚ್ಚಿನ ಮಾಹಿತಿ ಬಹಿರಂಗಪಡಿಸುವಂತಿಲ್ಲ. ಎಲ್ಲ ಆಯಾಮಗಳಿಂದ ತನಿಖೆ ನಡೆಸುತ್ತಿದ್ದೇವೆ. ಉಳಿದ ಆರೋಪಿಗಳಿಗಾಗಿ ಹುಡುಕಾಟ ಮುಂದುವರೆದಿದ್ದು, ಅವರಿಂದ ಇನ್ನೂ ಹೆಚ್ಚಿನ ಮಾಹಿತಿ ಹೊರಬರುವ ನಿರೀಕ್ಷೆಯಿದೆ" ಎಂದು ಎಡಿಸಿಪಿ ಹೇಳಿದ್ದಾರೆ.