ಮಂಗಳೂರು : ಕೆಪಿಸಿಸಿ ಕಾರ್ಯಾಧ್ಯಕ್ಷ ಮಂಜುನಾಥ ಭಂಡಾರಿ ತೀವ್ರ ಅಸ್ವಸ್ಥ ; ಬೆಂಗಳೂರಿನಲ್ಲಿ ತುರ್ತಾಗಿ ಓಪನ್ ಹಾರ್ಟ್ ಸರ್ಜರಿ, ಮಂಗಳೂರಿನಲ್ಲಿ ಕಾಂಗ್ರೆಸಿಗರಿಂದ ಸರ್ವಧರ್ಮ ಸಮನ್ವಯದ ಪ್ರಾರ್ಥನೆ...!!

ಮಂಗಳೂರು: ಕೆಪಿಸಿಸಿ ಕಾರ್ಯಾಧ್ಯಕ್ಷ ಮತ್ತು ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿಗೆ ತೀವ್ರ ಹೃದಯಾಘಾತವಾಗಿದ್ದು ಬೆಂಗಳೂರಿನ ನಾರಾಯಣ ಹೃದಯಾಲಯದಲ್ಲಿ ಓಪನ್ ಹಾರ್ಟ್ ಸರ್ಜರಿಗೆ ಒಳಗಾಗಿದ್ದಾರೆ.
20 ದಿನಗಳ ಹಿಂದೆ ಮಂಗಳೂರಿನಲ್ಲಿ ಇದ್ದಾಗಲೇ ಭಂಡಾರಿ ಕುಸಿದು ಬಿದ್ದು ಅಸ್ವಸ್ಥರಾಗಿದ್ದರು. ಆನಂತರ, ತುರ್ತಾಗಿ ಬೆಂಗಳೂರಿಗೆ ಏರ್ ಲಿಫ್ಟ್ ಮಾಡಿ ನಾರಾಯಣ ಹೃದಯಾಲಯದಲ್ಲಿ ಸರ್ಜರಿಗೆ ಒಳಪಡಿಸಲಾಗಿದೆ. ಮೂರು ತಿಂಗಳ ಕಾಲ ಬೆಡ್ ರೆಸ್ಟ್ ಪಡೆಯಬೇಕು, ಯಾರ ಭೇಟಿಗೂ ಅವಕಾಶ ನೀಡಬಾರದೆಂದು ವೈದ್ಯರು ಸೂಚಿಸಿದ್ದು ಇದರಂತೆ ಬೆಂಗಳೂರಿನಲ್ಲೇ ಉಳಿದುಕೊಂಡಿದ್ದಾರೆ. ಈ ನಡುವೆ, ಅವರಿಗೆ ಪ್ಯಾರಾಲಿಸಿಸ್ ಆಗಿದೆಯೆಂದೂ ಸುದ್ದಿ ಹಬ್ಬಿತ್ತು. ಅದರೆ ಅವರ ಅನಾರೋಗ್ಯ ವಿಷಯ ಸುದ್ದಿಯಾಗಿರಲಿಲ್ಲ.



25 ವರ್ಷಗಳಿಂದ ಶಿವಮೊಗ್ಗದಲ್ಲಿ ರಾಜಕೀಯವಾಗಿ ಸಕ್ರಿಯವಾಗಿದ್ದ ಮಂಜುನಾಥ ಭಂಡಾರಿ ಸತತ ಸೋಲಿನ ಬಳಿಕ ಮೂರು ವರ್ಷಗಳ ಹಿಂದೆ ದಕ್ಷಿಣ ಕನ್ನಡ - ಉಡುಪಿ ಜಿಲ್ಲೆಯನ್ನು ಒಳಗೊಂಡ ಸ್ಥಳೀಯಾಡಳಿತ ಕ್ಷೇತ್ರದಿಂದ ವಿಧಾನ ಪರಿಷತ್ತಿಗೆ ಸ್ಪರ್ಧಿಸಿ ಆಯ್ಕೆಯಾಗಿದ್ದರು. ಅದರ ಬೆನ್ನಲ್ಲೇ ಮಾಜಿ ಸಚಿವ ರಮಾನಾಥ ರೈಯವರಿಗೆ ಕೆಪಿಸಿಸಿ ಕಾರ್ಯಾಧ್ಯಕ್ಷ ಸ್ಥಾನ ಫೈನಲ್ ಆಗಿದೆಯೆಂದು ಸುದ್ದಿ ಇತ್ತು. ಆದರೆ ಅದಾಗಿ ಒಂದು ತಿಂಗಳ ಬಳಿಕ ಆ ಸ್ಥಾನಕ್ಕೆ ಮಂಜುನಾಥ ಭಂಡಾರಿ ನೇಮಕಗೊಂಡಿದ್ದರು. ಆಬಳಿಕ ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಮೇಲಿನ ಅಂಕುಶದಲ್ಲಿ ಭಂಡಾರಿ ಕೈಮೇಲಾಗಿತ್ತು. ಬಣ ರಾಜಕೀಯವೂ ಜೋರಾಗಿತ್ತು.
ಇದೀಗ ಭಂಡಾರಿ ತೀವ್ರ ಅಸ್ವಸ್ಥಗೊಂಡಿದ್ದರಿಂದ ವಿಚಲಿತಗೊಂಡ ಅವರ ಅಭಿಮಾನಿಗಳು, ಜಿಲ್ಲಾ ಕಾಂಗ್ರೆಸಿನ ಕೆಲವು ನಾಯಕರು ಮಂಜುನಾಥ ಭಂಡಾರಿ ಆರೋಗ್ಯ ಸುಧಾರಿಸಲೆಂದು ಚರ್ಚ್, ಮಸೀದಿ, ದೇವಸ್ಥಾನದಲ್ಲಿ ಪ್ರಾರ್ಥನೆಯಲ್ಲಿ ತೊಡಗಿದ್ದಾರೆ. ಕಳೆದ ಎರಡು ದಿನಗಳಲ್ಲಿ ಉಳ್ಳಾಲ ದರ್ಗಾ ಮತ್ತು ಬಿಕರ್ನಕಟ್ಟೆ ಇನ್ಫೆಂಟ್ ಜೀಸಸ್ ಚರ್ಚ್ ನಲ್ಲಿ ಕಾಂಗ್ರೆಸ್ ಪ್ರಮುಖರು ಸೇರಿ ಪ್ರಾರ್ಥಿಸಿದ್ದರು. ಇಂದು ಬೆಳಗ್ಗೆ ಕದ್ರಿ ಮಂಜುನಾಥ ದೇವಸ್ಥಾನದಲ್ಲಿ ಪ್ರಾರ್ಥಿಸಿದ್ದು ಭಂಡಾರಿ ಹೆಸರಲ್ಲಿ ವಿಶೇಷ ಪೂಜೆ ನೆರವೇರಿಸಿದ್ದಾರೆ.