ಮೈಸೂರು: ಮೃಗಾಲಯದಲ್ಲಿ 13 ವರ್ಷದ ಹುಲಿ ಪೃಥ್ವಿ ಸಾವು...!
Wednesday, April 8, 2026
ಮೈಸೂರು: ಶ್ರೀ ಚಾಮರಾಜೇಂದ್ರ ಮೃಗಾಲಯದಲ್ಲಿ 13 ವರ್ಷದ ಪೃಥ್ವಿ ಎಂಬ ಗಂಡು ಹುಲಿ ಬುಧವಾರ ಬೆಳಗ್ಗೆ ಮೃತಪಟ್ಟಿದೆ. ಕಳೆದೆರಡು ದಿನಗಳಿಂದ ಆಹಾರ ತ್ಯಜಿಸಿ ಅನಾರೋಗ್ಯದಿಂದ ಬಳಲುತ್ತಿದ್ದ ಹುಲಿಗೆ ಮೃಗಾಲಯದ ಪಶು ವೈದ್ಯಾಧಿಕಾರಿಗಳು ಚಿಕಿತ್ಸೆ ನೀಡುತ್ತಿದ್ದರು.
ಬೆಂಗಾಲ್ ಹುಲಿ ಗುಂಪಿಗೆ ಸೇರಿದ ಈ ಹುಲಿಯನ್ನು ಹಂಪಿ ಮೃಗಾಲಯದಿಂದ ತರಲಾಗಿತ್ತು. ಮೃಗಾಲಯದಲ್ಲಿ ಪ್ರವಾಸಿಗರಿಗೆ ಹಾಗೂ ಸ್ಥಳೀಯ ಪ್ರವಾಸಿಗರಿಗೆ ಪ್ರಮುಖ ಆಕರ್ಷಣೆಯಾಗಿತ್ತು.
ಈ ಹುಲಿ ಅಪರೂಪದ ನರ ಸಂಬಂಧಿ ರೋಗದಿಂದ ಬಳಲುತ್ತಿತ್ತು. ಇದು ಸ್ನಾಯು ಬಲ ಮತ್ತು ಚಲನೆಯ ಮೇಲೆ ಪರಿಣಾಮ ಬೀರಿದೆ. ಏ.6ರಿಂದ ಆರೋಗ್ಯ ತೀವ್ರವಾಗಿ ಹದಗೆಟ್ಟು ಮಂಗಳವಾರ ಆರೋಗ್ಯ ಗಂಭೀರವಾಗಿತ್ತು. ಹುಲಿಯನ್ನು ಕೂರ್ಗಳ್ಳಿಯಲ್ಲಿರುವ ಚಾಮುಂಡಿ ವನ್ಯಪ್ರಾಣಿಗಳ ಪುನರ್ವಸತಿ ಕೇಂದ್ರದಲ್ಲಿ ಸ್ಥಳಾಂತರಿಸಿ, ಪಶುವೈದ್ಯರು ಮತ್ತು ವನ್ಯಜೀವಿ ತಜ್ಞರು 24 ಗಂಟೆಗಳ ಕಾಲ ಮೇಲ್ವಿಚಾರಣೆ ಮಾಡುತ್ತಿದ್ದರು. ಔಷಧ, ಸಪೋರ್ಟಿವ್ ಕೇರ್ ಮತ್ತು ಥೆರಪಿ ಮಾಡಲಾಗಿತ್ತು. ಆದರೆ, ಚಿಕಿತ್ಸೆಯಿಂದ ಚೇತರಿಸದ ಹುಲಿ ಮೃತಪಟ್ಟಿದೆ ಎಂದು ಮೃಗಾಲಯದ ಪ್ರಕಟಣೆ ತಿಳಿಸಿದೆ.